ಗುವಾಹಟಿ : ಕಳೆದ ಯುಪಿಎ ಅವಧಿಯ ರಿಮೋಟ್ ಕಂಟ್ರೋಲ್ ಸರ್ಕಾರದಿಂದಾಗಿ ದೇಶ ಸಾಕಷ್ಟು ತೊಂದರೆಯಲ್ಲಿತ್ತು. ಆದೇ ಸ್ಥಿತಿ ಅಸ್ಸಾಂನಲ್ಲಿ ಮರುಕಳಿಸಲು ಬಿಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಅಸ್ಸಾಂನ ರಾಹಾದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಯುಪಿಎ ಸರ್ಕಾರ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ತರಾಟೆಗೆ ತೆಗೆದುಕೊಂಡರು. ತಮ್ಮ ವಿರುದ್ಧ ಈ ಹಿಂದೆ ವಾಗ್ದಾಳಿ ನಡೆಸಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ವಿರುದ್ಧವೂ ಟೀಕೆ ಮಾಡಿದ ನರೇಂದ್ರ ಮೋದಿ, "ನಮ್ಮದು ಮಾತಿನ ಸರ್ಕಾರವಾಗಿರಲಿಲ್ಲ, ಹೆಚ್ಚು ಕೆಲಸ ಮಾಡುವ ಸರ್ಕಾರವಾಗಿತ್ತು' ಎಂಬ ಟೀಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು. "ಮನಮೋಹನ್ ಸಿಂಗ್ ಅವರೇ, ನೀವು ಅಧಿಕಾರದಲ್ಲಿದ್ದಾಗ ನಡೆದ ಅವ್ಯವಹಾರಗಳೇ ಇಂದು ಹೆಚ್ಚೆಚ್ಚು ಮಾತನಾಡುತ್ತಿವೆ. ಡಾ.ಸಿಂಗ್ ಅವರು ಹೇಳಿದ್ದು ನಿಜ, ಅವರು ಅಧಿಕಾರದಲ್ಲಿದ್ದಾಗ ನಡೆದ ಅವ್ಯವಹಾರಗಳು ಇಂದಿಗೂ ಮಾತನಾಡುತ್ತಿವೆ ಎಂದುವ್ಯಂಗ್ಯವಾಡಿದರು.
ಕಾಂಗ್ರೆಸ್ ಪಕ್ಷ ಅಸ್ಸಾಂ ಅನ್ನು ತನ್ನ ರಾಜಕೀಯ ಸ್ವಹಿತಾಸಕ್ತಿಗೆ ಬಳಸಿಕೊಳ್ಳುತ್ತಿದ್ದು, ಹಿಂದುಳಿದ ಮತ್ತು ರಿಮೋಟ್ ಕಂಟ್ರೋಲ್ ಪ್ರದೇಶವನ್ನಾಗಿ ಕಾಂಗ್ರೆಸ್ ಉಳಿಸಿಕೊಂಡಿದೆ. ಕಾಂಗ್ರೆಸ್ ನ ಅಸ್ಥಿರ ದುರಾಡಳಿತದಿಂದ ರಾಜ್ಯ ಕಂಗೆಟ್ಟಿದ್ದು, ಬಿಜೆಪಿ ನೇತೃತ್ವದ ಸರ್ಕಾರವನ್ನು ಬೃಹತ್ ಅಂತರದಿಂದ ಗೆಲ್ಲಿಸುವ ಮೂಲಕ ರಾಜಕೀಯ ಅಸ್ಥಿರತೆ ಸೃಷ್ಟಿಸಿರುವ ಪಕ್ಷವನ್ನು ಅಧಿಕಾರದಿಂದ ಕಿತ್ತೊಗೆಯಬೇಕು ಮತ್ತು ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಪ್ರಧಾನಿ ಮೋದಿ ಅಸ್ಸಾಂ ಜನತೆಯಲ್ಲಿ ಕರೆ ನೀಡಿದರು.