ಗುವಾಹಟಿ : ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಅಸ್ಸಾಂನ ಚುನಾವಣಾ ಪ್ರಚಾರ ಕಾರ್ಯಪ್ರಾರಂಬಿಸಿದರು. ಅವರು ಶನಿವಾರ, ಅಸ್ಸಾಂನ ತೀನ್ ಸುಖೀಯಲ್ಲಿ ಪ್ರಚಾರ ಭಾಷಣ ಪ್ರಾರಂಭಿಸಿದರು. ಇದಲ್ಲದೆ, ಶನಿವಾರ ಇನ್ನೂ 4 ಕಡೆ ಪ್ರಧಾನಿ ಅವರು ತಮ್ಮ ಚುನಾವಣಾ ಭಾಷಣ ಮಾಡಲಿದ್ದಾರೆ.
ಅಸ್ಸಾಂನ ತೀನ್ ಸುಖೀಯಾದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಅಸ್ಸಾಂನಲ್ಲಿ ಬಡವರಿಗೆ ಸರಕಾರವು ಮನೆ ಕಟ್ಟಿಸಿ ಕೊಡಲು ಹಣ ತೆಗೆದಿರಿಸಿದೆ; ಆದರೆ ಇಲ್ಲಿನ ಸರಕಾರ ಆ ಹಣವನ್ನು ಬಳಸುತ್ತಿಲ್ಲ; ಹಾಗಾಗಿ ಬಡವರ ಮನೆ ನಿರ್ಮಾಣಕ್ಕೆಂದು ತೆಗೆದಿರಿಸಿದ್ದ ಹಣವು ಬ್ಯಾಂಕುಗಳಲ್ಲೇ ಕೊಳೆಯುತ್ತಿದೆ ಎಂದು ಹೇಳಿದರು. ನನ್ನ ಹೋರಾಟ ತರುಣ್ ಗೊಗೋಯ್ ವಿರುದ್ಧ ಅಲ್ಲ, ಅಸ್ಸಾಂನಲ್ಲಿ ಬೇರು ಬಿಟ್ಟಿರುವ ಬಡತನ ಮತ್ತು ಭ್ರಷ್ಟಾಚಾರದ ವಿರುದ್ಧ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
ಅಸ್ಸಾಂ ಚಹಾ ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಇಡಿಯ ದೇಶಕ್ಕೆ ಚೈತನ್ಯ ನೀಡುತ್ತಿದ್ದು ವಿಶ್ವಾದ್ಯಂತ ಭಾರತವು ಅಸ್ಸಾಂ ಚಹಾ ಉತ್ಪನ್ನದ ಬಗ್ಗೆ ಹೆಮ್ಮೆ ಪಡುವಂತೆ ಮಾಡಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು.
ಆಸ್ಸಾಂ ಪರ್ಯಾಪ್ತ ಜಲ ಸಂಪನ್ಮೂಲವನ್ನು ಹೊಂದಿದೆ. ಆದರೂ ಇಲ್ಲಿನ ಜನರು ನೀರಿನ ಕೊರತೆಯನ್ನು ಅನುಭವಿಸುತ್ತಿದ್ದಾರೆ. ಇದ್ಯಾಕೆ ಹೀಗೆ ? ಎಂದು ಪ್ರಧಾನಿ ಮೋದಿ ಪ್ರಶ್ನಿಸಿದರು.
ಪ್ರಾಕೃತಿಕ ಸಿರಿವಂತಿಕೆಯ ಸಮೃದ್ಧವಾಗಿರುವ ಹೊರತಾಗಿಯೂ ಅಸ್ಸಾಂ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಲ್ಲಿನ ಯುವಕರು ನಿರುದ್ಯೋಗಿಗಳಾಗಿದ್ದಾರೆ. ಅಸ್ಸಾಂ ವಿದ್ಯುತ್ ಉತ್ಪಾದಿಸಿ ಕೊಡುತ್ತಿಲ್ಲ - ಇವೆಲ್ಲ ಯಾಕೆ ಹೀಗೆ ? ಇದಕ್ಕೆ ಕಾರಣರು ಯಾರು ? ಅವರ ನಿರ್ಲಕ್ಷ್ಯದಿಂದಾಗಿಯೇ ಇಂದು ಅಸ್ಸಾಂ ಬಡವರಿಂದ ತುಂಬಿದೆ; ಭ್ರಷ್ಟಾಚಾರ ಇಲ್ಲಿ ತಾಂಡವವಾಡುತ್ತಿದೆ ಎಂದು ಹೇಳಿದರು.
ಈಗ ಬರುತ್ತಿರುವ ಚುನಾವಣೆ ಅತ್ಯಂತ ಮಹತ್ವದ್ದಾಗಿದೆ. ಅಸ್ಸಾಂಗಾಗಿ ನಮ್ಮ ಸರ್ಕಾರದಲ್ಲಿದ್ದ ಸಚಿವರೊಬ್ಬರನ್ನು ನಾವು ಬಿಡಬೇಕಾಯಿತು. ಆದರೆ ಇದರಿಂದ ಅಸ್ಸಾಂಗೆ ಲಾಭವಾಗುತ್ತದೆ ಎಂದು ನುಡಿದರು.
126 ವಿಧಾನಸಭಾ ಕ್ಷೇತ್ರಗಳಿಗೆ ಅಸ್ಸಾಂನಲ್ಲಿ ಏ.4 ಮತ್ತು ಏ.11 ರಂದು ಎರಡು ಹಂತದಲ್ಲಿ ಚುನಾವಣೆ ನಡೆಯುತ್ತದೆ.