ನವದೆಹಲಿ : 'ಹಿಂಡಾಲ್ಕೋ ಕಂಪನಿ'ಗೆ ಅಕ್ರಮವಾಗಿ ಕಲ್ಲಿದ್ದಲು ನಿಕ್ಷೇಪವನ್ನು ಹಂಚಿಕೆ ಮಾಡಿದ ಪ್ರಕರಣದಲ್ಲಿ ಸಿಬಿಐ ತಮಗೆ ಸಮನ್ಸ್ ಜಾರಿ ಮಾಡಿರುವುದನ್ನು ಪ್ರಶ್ನಿಸಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮಾ.25ರಂದು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ಕಲ್ಲಿದ್ದಲು ಹಗರಣದಲ್ಲಿ ನಾನು ಭಾಗಿಯಾಗಿರುವುದಕ್ಕೆ ಸಿಬಿಐ ಅಧಿಕಾರಿಗಳ ಬಳಿ ಯಾವುದೇ ದಾಖಲೆಗಳಿಲ್ಲ. ಆದ್ದರಿಂದ ಸಿಬಿಐ ಜಾರಿಮಾಡಿರುವ ಸಮನ್ಸ್ ಕಾನೂನು ಬದ್ಧವಲ್ಲ ಎಂದು ಮನಮೋಹನ್ ಸಿಂಗ್ ಅರ್ಜಿಯಲ್ಲಿ ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ ನಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಪರವಾಗಿ ಮಾಜಿ ಕೇಂದ್ರ ಸಚಿವ ಕಪಿಲ್ ಸಿಬಲ್ ಹಾಗೂ ಖ್ಯಾತ ಕ್ರಿಮಿನಲ್ ವಕೀಲರಾದ ಕೆ.ಟಿ.ಎಸ್ ತುಳಸಿ ಅವರು ವಾದ ಮಂಡಿಸಲಿದ್ದಾರೆ. ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎರಡು ಬಾರಿ ಸಿಬಿಐ ವಿಚಾರಣೆ ಎದುರಿಸಿರುವ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಗೆ ಕಾನೂನು ತಜ್ನರ ನೆರವು ನೀಡುವುದಾಗಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಘೋಷಿಸಿದ್ದರು. ಅಲ್ಲದೇ ಮನಮೋಹನ್ ಸಿಂಗ್ ಅವರ ಪರವಾಗಿ ಕಾಂಗ್ರೆಸ್ ಕಾನೂನು ಹೋರಾಟ ನಡೆಸಲಿದೆ ಎಂದು ಮಾ.12ರಂದು ನಡೆದ ಏಕತಾ ಮೆರವಣಿಗೆ ನಡೆಸಿದ್ದ ವೇಳೆ ಸೋನಿಯಾ ಗಾಂಧಿ ಭರವಸೆ ನೀಡಿದ್ದರು.
ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಏ.8ರೊಳಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಮಾ.11ರಂದು ಸಿಬಿಐ ನ್ಯಾಯಾಲಯ ಪ್ರಧಾನಿ ಮನಮೋಹನ್ ಸಿಂಗ್, ಕೈಗಾರಿಕೋದ್ಯಮಿ ಕುಮಾರ್ ಮಂಗಲಂ ಬಿರ್ಲಾ, ಕಲ್ಲಿದ್ದಲು ಇಲಾಖೆಯ ಮಾಜಿ ಕಾರ್ಯದರ್ಶಿ ಪಿ.ಸಿ ಪರಾಖ್, ಹಿಂಡಾಲ್ಕೋ ಕಂಪನಿಯ ಡಿ ಭಟ್ಟಾಚಾರ್ಯ ಹಾಗೂ ಶುಭೇಂದು ಅಮಿತಾಭ್ ಗೂ ಸಮನ್ಸ್ ನೀಡಿತ್ತು. ಸಿಬಿಐನಿಂದ ಸಮನ್ಸ್ ಜಾರಿಯಾಗಿರುವುದು ತಮಗೆ ನೋವುಂಟುಮಾಡಿದೆ ಎಂದು ಮನಮೋಹನ್ ಸಿಂಗ್ ಹೇಳಿದ್ದರು.