ಬೆಂಗಳೂರು : 'ಸಂಘ ಪರಿವಾರ' ನಡೆಸುವ ಹಿಂದೂ ಸಮಾಜೋತ್ಸವದ ವಿರುದ್ಧ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್ ದೊರೆಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದು, ಆರ್.ಎಸ್.ಎಸ್ ನಡೆಸುತ್ತಿರುವ ಹಿಂದೂ ಸಮಾಜೋತ್ಸವ ಹೀಗೆ ಮುಂದುವರೆದರೆ ಕರ್ನಾಟಕದ ಸ್ಥಿತಿ ಆತಂಕಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ದೊರೆಸ್ವಾಮಿ, ಹಿಂದೂ ಸಮಾಜೋತ್ಸವದಲ್ಲಿ ಅನ್ಯ ಧರ್ಮೀಯರನ್ನು ಅವಹೇಳನಕಾರಿಯಾಗಿ ನಿಂದಿಸಿರುವುದನ್ನು ಖಂಡಿಸಿದ್ದು, ಹಿಂದೂ ಸಮಾಜೋತ್ಸವದ ಬದಲು ಸೌಹಾರ್ದ ಸಮಾಜೋತ್ಸವ ನಡೆಸುವ ಅಗತ್ಯವಿದೆ ಎಂದು ಹೇಳಿದ್ದಾರೆ.
ಹಿಂದೂ ರಾಷ್ಟ್ರ ನಿರ್ಮಾಣಕ್ಕಾಗಿ ಆರ್.ಎಸ್.ಎಸ್ ಹಾಗೂ ಇತರ ಹಿಂದೂ ಸಂಘಟನೆಗಳು ಮತಾಂತರ ಮಾಡಲು ಹೊರಟಿರುವುದು ಸರಿಯಲ್ಲ ಎಂದಿರುವ ಹೆಚ್.ಎಸ್ ದೊರೆಸ್ವಾಮಿ, ಸಂಘ ಪರಿವಾರ ಹಿಂದೂ ಸಮಾಜೋತ್ಸವದ ಮೂಲಕ ದ್ವೇಷ ಮತ್ತು ಹಿಂಸೆ ಬಿತ್ತುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಸಾಹಿತಿ ಮರುಳ ಸಿದ್ದಪ್ಪ, ಜನತೆಯಲ್ಲಿ ದ್ವೇಷ ಬಿತ್ತುತ್ತಿರುವ ಆರ್.ಎಸ್.ಎಸ್ ಗೆ ಪ್ರಧಾನಿ ನರೇಂದ್ರ ಮೋದಿ ಬುದ್ದಿ ಹೇಳಲಿ ಎಂದು ಆಗ್ರಹಿಸಿದ್ದಾರೆ. ಪ್ರೊ.ಬಿ.ಕೆ.ಚಂದ್ರಶೇಖರ್ ಮಾತನಾಡಿ, ಸರ್ಕಾರ ಇತ್ತೀಚೆಗೆ ಪ್ರವೀಣ್ ತೊಗಾಡಿಯಾ ಮತ್ತು ಓವೈಸಿಯನ್ನು ನಿಷೇಧಿಸಿದ ಮಾದರಿಯಲ್ಲೇ ಇಂತಹ ಸಮಾವೇಶಗಳನ್ನು ನಿರ್ಬಂಧಿಸಬೇಕು ಎಂದು ಒತ್ತಾಯಿಸಿದರು.