ಲಖ್ನೊ : ಆತ್ಮರಕ್ಷಣೆ ತರಬೇತಿ ಸಂವಿಧಾನ ವಿರೋಧಿಯಲ್ಲ, ಇದು ಸಾಮಾಜಿಕ ಹೊಣೆಗಾರಿಕೆ ಎಂದು ವಿಶ್ವಹಿಂದೂ ಪರಿಷತ್ ಅಧ್ಯಕ್ಷ ಪ್ರವೀಣ್ ತೊಗಾಡಿಯಾ ಹೇಳಿದ್ದಾರೆ.
ಉತ್ತರ ಪ್ರದೇಶದ 12ನೇ ಸೆಕ್ಟಾರ್ನ ಸರಸ್ವತಿ ಶಿಶು ಮಂದಿರದ ಆವರಣದಲ್ಲಿ ಭಜರಂಗದಳ ಆಯೋಜಿಸಿರುವ ಶಿಬಿರದ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳುವ ವಿಧಾನ ಸಾಮಾಜಿಕ ಹೊಣೆಗಾರಿಕೆ ಎಂದು ತಿಳಿಸಿದ್ದಾರೆ.
ಭಾರತೀಯ ಸಂವಿಧಾನ ಮತ್ತು ಕಾನೂನು ಪ್ರಕಾರ, ಪ್ರತಿಯೊಬ್ಬರೂ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಹಕ್ಕು ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಭಜರಂಗದಳ 25 ವರ್ಷಗಳಿಂದ ಎಲ್ಲ ರಾಜ್ಯಗಳಲ್ಲೂ ಯುವ ಶೌರ್ಯ ಪ್ರಶಿಕ್ಷಣ ಶಿಬಿರ ನಡೆಸಿದೆ ಎಂದರು.
ಹಿಂದೂಪರ ಸಂಘಟನೆಗಳ ಬೆಂಬಲದಿಂದ ಆಯೋಜಿಸುವ ಇಂತಹಾ ಶಿಬಿರಗಳ ಮೂಲಕ ನಾವು ಈಗಾಗಲೇ ಸಾವಿರಾರು ಮಂದಿ ಭಾರತೀಯ ಯುವ ಸಮೂಹಕ್ಕೆ ಸಮಗ್ರ ತರಬೇತಿ ನೀಡಿದ್ದೇವೆ. 1951ರಲ್ಲಿ ದೇಶದ ಜನಸಂಖ್ಯೆ 30 ಕೋಟಿ ಇದ್ದಾಗ 10 ಲಕ್ಷ ರೋಗಿಗಳಿದ್ದರು. ಈಗ 125 ಕೋಟಿ ದಾಟಿರುವ ಜನಸಂಖ್ಯೆಗೆ ಅನುಗುಣವಾಗಿ 45ಲಕ್ಷ ರೋಗಿಗಳು ಇದ್ದಾರೆ. ನಿರಂತರ ಯೋಗ, ವ್ಯಾಯಾಮ ಮತ್ತು ದೈಹಿಕ ಕಸರತ್ತುಗಳು ಇಲ್ಲದ ಕಾರಣ ರೋಗಿಗಳ ಸಂಖ್ಯೆಯೂ ಇಮ್ಮಡಿಸಿದೆ. ಇಂತಹ ಶಿಬಿರ ಆಯೋಜನೆ ಮೂಲಕ ನಾವು ಸದೃಢ ಆರೋಗ್ಯವಂತರನ್ನೂ ದೇಶಕ್ಕೆ ನೀಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.