ಬೆಂಗಳೂರು : ಮಂಗಳವಾರ ನಡೆಯಬೇಕಿದ್ದ ಇಬ್ಬರು ನಕ್ಸಲರ ಶರಣಾಗತಿ ಕಾರ್ಯಕ್ರಮ ಮುಂದೂಡಲ್ಪಟ್ಟಿದೆ. ಸಿರಿಮನೆ ನಾಗರಾಜ್, ಜುಲ್ಫಿಕರ್ ಎಂಬ ಇಬ್ಬರು ನಕ್ಸಲರು ಡಿ.2ರಂದು ಸರ್ಕಾರಕ್ಕೆ ಶರಣಾಗಲಿದ್ದಾರೆ ಎಂದು ಹೇಳಲಾಗಿತ್ತು.
ಸಮಾಜ ಮುಖ್ಯವಾಹಿನಿಗೆ ಕರೆ ತರಲು ರಾಜ್ಯ ಸರ್ಕಾರ ಶರಣಾಗುವ ನಕ್ಸಲರಿಗೆ ಪ್ಯಾಕೇಜ್ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ನಕ್ಸಲ್ ಶರಣಾಗತಿ ಸಮಿತಿ ಸದಸ್ಯೆ ಗೌರಿ ಲಂಕೇಶ್, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್ ದೊರೆಸ್ವಾಮಿ ಸರ್ಕಾರದೊಂದಿಗೆ ಮಾತುಕತೆ ನಡೆಸಿದ್ದರು. ಈ ಮಾತುಕತೆ ಯಶಸ್ವಿಯಾಗಿದ್ದು ಎರಡು ಕಡೆಯಿಂದಲೂ ಒಪ್ಪಿಗೆ ಸಿಕ್ಕಿದ್ದರಿಂದ ಇಬ್ಬರು ನಕ್ಸಲರು ರಾಜ್ಯ ಸರ್ಕಾರಕ್ಕೆ ಶರಣಾಗಲಿದ್ದರು. ಆದರೆ ಸರ್ಕಾರದ ನೀತಿ ಗೊಂದಲಕ್ಕೀಡಾಗಿರುವುದರಿಂದ ನಕ್ಸಲರು ಶರಣಾಗತಿ ಕಾರ್ಯಕ್ರಮವನ್ನು 2 ದಿನಗಳಿಗೆ ಮುಂದೂಡಿದ್ದಾರೆ ಎಂದು ಹೇಳಲಾಗಿದೆ.
ಸಿಪಿಐ ಮಾವೋವಾದಿ ಸಂಘಟನೆಯಲ್ಲಿ ಸಕ್ರೀಯರಾಗಿದ್ದ ಸಿರಿಮನೆ ನಾಗರಾಜ್, ಜುಲ್ಫಿಕರ್ ಬಳಿಕ ಆ ಸಂಘಟನೆಯಿಂದ ದೂರವಾಗಿ ಭೂಗತವಾಗಿ ಜೀವನ ನಡೆಸುತ್ತಿದ್ದಾರೆ.ಇವರಿಬ್ಬರ ತಲೆಗೆ ರಾಜ್ಯ ಸರ್ಕಾರ ಒಂದು ಲಕ್ಷ ಬಹುಮಾನ ಘೋಷಿಸುತ್ತು. ಇದೀಗ ಸರ್ಕಾರದ ನಡಾವಳಿಯಿಂದ ಗೊಂದಲಕ್ಕೀಡಾಗಿದ್ದೇವೆ ಎಂದು ಹೇಳುವ ಮೂಲಕ ಶರಣಾಗತಿಯನ್ನು 2 ದಿನದ ಮಟ್ಟಿಗೆ ಮುಂದೂಡಿದ್ದಾರೆ.