ತೆಲಂಗಾಣ : 'ರೈತರ ಆತ್ಮಹತ್ಯೆ'ಗೆ ಕಾರಣವಾಗಿರುವ ತೆಲಂಗಾಣ ಸರ್ಕಾರದ ಅಸಮರ್ಪಕ ನೀತಿ ಖಂಡಿಸಿ ತೆಲಂಗಾಣ ಮಾವೋವಾದಿಗಳು ನ.8ರಂದು ತೆಲಂಗಾಣ ಬಂದ್ ಗೆ ಕರೆ ನೀಡಿದ್ದಾರೆ.
ಬಂದ್ ಗೆ ಕರೆ ನೀಡಿರುವುದರ ಬಗ್ಗೆ ಮಾತನಾಡಿರುವ ಉತ್ತರ ತೆಲಂಗಾಣದ ಸಿಪಿಐ ಮುಖಂಡ ಜಗನ್, ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್, ಚುನಾವಣೆಗೂ ಮುನ್ನ ನಕ್ಸಲರನ್ನು ದೇಶಭಕ್ತರೆಂದು ಕರೆದಿದ್ದರು. ಆದರೆ ಅಧಿಕಾರ ದೊರೆಯುತ್ತಿದ್ದಂತೆಯೇ ನಕ್ಸಲರ ಬೇಡಿಕೆಗಳನ್ನು ಕಡೆಗಣಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ಅಸ್ಥಿತ್ವಕ್ಕೆ ಬಂದಾಗಿನಿಂದ ಈ ವರೆಗೂ 265 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಇದಕ್ಕೆ ಕೆ.ಸಿ.ಆರ್ ಸರ್ಕಾರವೇ ಕಾರಣ ಎಂದು ಜಗನ್ ಆರೋಪಿಸಿದ್ದಾರೆ. ರಾಜ್ಯದಲ್ಲಿ ವಿದ್ಯುತ್ ಪೂರೈಕೆ ಸಮಸ್ಯೆ ಬಗ್ಗೆ ಪ್ರತಿಕ್ರಿಯಿಸಿದ್ದ ಕೆ.ಸಿ.ಆರ್ ಇನ್ನೂ ಮೂರು ವರ್ಷ ಇದೇ ಸ್ಥಿತಿ ಮುಂದುವರೆಯಲಿದೆ ಎಂದು ಹೇಳಿದ್ದರು. ಈ ಹೇಳಿಕೆಯಿಂದ ಕಂಗಾಲಾಗಿರುವ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಜಗನ್ ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ರೈತರ ಆತ್ಮಹತ್ಯೆಗೆ ಕಾರಣವಾಗಿರುವ ಸರ್ಕಾರದ ತಪ್ಪು ನೀತಿಗಳ ವಿರುದ್ಧ ಪ್ರತಿಭಟನೆ ನಡೆಸಲು ನ.8ರಂದು ಎಲ್ಲರೂ ಬಂದ್ ಗೆ ಬೆಂಬಲ ನೀಡಬೇಕೆಂದು ನಕ್ಸಲರು ರಾಜ್ಯದ ಜನತೆಯಲ್ಲಿ ಮನವಿ ಮಾಡಿದ್ದಾರೆ.