ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಎನ್.ಡಿ.ಎ ಸರ್ಕಾರವನ್ನು ಅಸ್ಥಿರಗೊಳಿಸಲು ಭೂಗತ ಪಾತಕಿ ದಾವೂದ್ ಇಬ್ರಾಹಿಂ ಯತ್ನಿಸುತ್ತಿದ್ದು, ದೇಶದ ಕೋಮು ಸಾಮರಸ್ಯವನ್ನು ಕದಡುವ ಮೂಲಕ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದಾನೆ ಎಂದು ರಾಷ್ಟ್ರೀಯ ತನಿಖಾ ದಳ ಎಚ್ಚರಿಕೆ ನೀಡಿದೆ.
ಭಾರತದಲ್ಲಿರುವ ದಾವೂದ್ ಇಬ್ರಾಹಿಂ ಸಹಚರರು ಆರ್.ಎಸ್.ಎಸ್ ನಾಯಕರು ಮತ್ತು ಚರ್ಚ್ ಗಳ ಮೇಲೆ ದಾಳಿ ನಡೆಸಿ ಕೋಮು ಸಾಮರಸ್ಯವನ್ನು ಕದಡಲು ಸಂಚು ರೂಪಿಸುತ್ತಿದ್ದಾರೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್.ಐ.ಎ) ತಿಳಿಸಿದೆ.
ದಾವೂದ್ ಗ್ಯಾಂಗ್ ಗೆ ಸೇರಿದ 10 ಮಂದಿ ಕ್ರಿಮಿನಲ್ ಗಳ ವಿರುದ್ಧ ಶನಿವಾರ ಎನ್.ಐ.ಎ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸುತ್ತಿದ್ದು, ಚಾರ್ಚ್ ಶೀಟ್ ನಲ್ಲಿ ಡಿ-ಕಂಪನಿ ಸಂಚಿನ ಬಗ್ಗೆ ವಿವರಿಸಲಗಿದೆ.
ದಾವೂದ್ ಹಲವು ನುರಿತ ಶಾರ್ಪ್ ಶೂಟರ್ ಗಳನ್ನು ಭಾರತದಲ್ಲಿ ನೇಮಿಸಿದ್ದು, ಆರ್.ಎಸ್.ಎಸ್ ನ ಹಿರಿಯ ನಾಯಕರನ್ನು ಗುರಿಯಾಗಿಸಿ ವಿಧ್ವಂಸಕ ಕೃತ್ಯ ನಡೆಸಲು ಸೂಚನೆ ನೀಡಿದ್ದಾನೆ. ಅಲ್ಲದೇ ಡಿ-ಕಂಪನಿಯ ಸದಸ್ಯರಾದ ಪಾಕಿಸ್ತಾನ ಮೂಲದ ಜಾವೆದ್ ಚಿಕ್ನ ಮತ್ತು ದಕ್ಷಿಣ ಆಫ್ರಿಕಾ ಮೂಲದ ಝಹೀದ್ ಮಿಯಾನ್ ಅಲಿಯಾಸ್ ಜವೋ ಅವರು ಈ ಕೃತ್ಯಕ್ಕಾಗಿ ನೇಮಕಗೊಂಡಿದ್ದು, ಕೇವಲ ಆರ್.ಎಸ್.ಎಸ್ ನಾಯಕರ ಹತ್ಯೆಯಷ್ಟೇ ಅಲ್ಲದೇ ಚರ್ಚ್ ಗಳ ಮೇಲೆ ದಾಳಿ ನಡೆಸುವ ಮೂಲಕ ದೇಶದಲ್ಲಿ ಕೋಮು ಗಲಭೆ ನಡೆಸಲು ಸಂಚು ರೂಪಿಸಿದ್ದಾರೆ ಎಂದು ಎನ್.ಐ.ಎ ಮಾಹಿತಿ ನೀಡಿದೆ.