ನವದೆಹಲಿ : 'ದೆಹಲಿ' ಚುನಾವಣೆಯಲ್ಲಿ ಶಾಹಿ ಇಮಾಮ್ ಬುಖಾರಿ ಫತ್ವಾ ಹೊರಡಿಸಿದ್ದೇ ತಮ್ಮ ಸೋಲಿಗೆ ಕಾರಣ ಎಂದು ಬಿಜೆಪಿ ನಾಯಕಿ, ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಆರೋಪಿಸಿದ್ದಾರೆ.
ಫೆ.11ರಂದು ಎ.ಎನ್.ಐ ಪ್ರತಿನಿಧಿಯೊಂದಿಗೆ ಮಾತನಾಡಿರುವ ಕಿರಣ್ ಬೇಡಿ, ದೆಹಲಿ ಜಮ್ಮಾ ಮಸೀದಿಯ ಶಾಹಿ ಇಮಾಮ್ ಹೊರಡಿಸಿದ್ದ ಫತ್ವಾ ನಿರ್ದಿಷ್ಟ ನಿರ್ದೇಶನ ಹೊಂದಿದ್ದರ ಹಿನ್ನೆಲೆಯಲ್ಲಿ ದೆಹಲಿ ಚುನಾವಣೆ ಮೇಲೆ ಪರಿಣಾಮ ಬೀರಿದೆ. ಚುನಾವಣೆಗೂ ಕೆಲವೇ ಗಂಟೆಗಳ ಮುನ್ನ ಹೊರಡಿಸುವ ನಿರ್ದೇಶನಗಳಿಗೆ ಚುನಾವಣಾ ಆಯೋಗ ಅನುಮತಿ ನೀಡಬಹುದೇ? ಎಂದು ಪ್ರಶ್ನಿಸಿದ್ದಾರೆ.
ಚುನಾವಣೆಗೆ ಕೆಲವೇ ಗಂಟೆಗಳ ಮುನ್ನ ನಿರ್ದಿಷ್ಟ ನಿರ್ದೇಶನ ನೀಡುವುದು ಪ್ರಜಾಪ್ರಭುತ್ವಕ್ಕೆ ಒಳಿತಲ್ಲ ಎಂದು ಕಿರಣ್ ಬೇಡಿ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ ಈ ಬಗ್ಗೆ ತನಿಖೆ ನಡೆಸಬೇಕು ಎಂದು ಚುನಾವಣಾ ಆಯೋಗಕ್ಕೆ ಕಿರಣ್ ಬೇಡಿ ಮನವಿ ಮಾಡಿದ್ದಾರೆ.
ದೆಹಲಿ ವಿಧಾನಸಭೆಗೆ ಮತದಾನ ನಡೆಯುವುದಕ್ಕೂ ಹಿಂದಿನ ದಿನ ದೆಹಲಿ ಜಮ್ಮಾ ಮಸೀದಿಯ ಶಾಹಿ ಇಮಾಮ್ ಬುಖಾರಿ ದೆಹಲಿ ಮುಸ್ಲಿಮರು ಆಮ್ ಆದ್ಮಿ ಪಕ್ಷಕ್ಕೇ ಮತ ನೀಡಬೇಕೆಂದು ಫತ್ವಾ ಹೊರಡಿಸಿದ್ದರು.