ನವದೆಹಲಿ : ನಾಳೆ ನಡೆಯಲಿರುವ ದೆಹಲಿ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಮತದಾರರು ಆಮ್ ಆದ್ಮಿ ಪಕ್ಷಕ್ಕೇ ಮತ ಚಲಾಯಿಸಬೇಕೆಂದು ದೆಹಲಿ ಜಮ್ಮಾ ಮಸೀದಿಯ ಶಾಹಿ ಇಮಾಮ್ ಸೈಯದ್ ಅಹಮದ್ ಬುಖಾರಿ ಫತ್ವಾ ಹೊರಡಿಸಿದ್ದಾರೆ.
ದೆಹಲಿಯಲ್ಲಿ ಸೆಕ್ಯುಲರ್ ಸರ್ಕಾರ ರಚನೆಯಾಗಬೇಕಿರುವ ಹಿನ್ನೆಲೆಯಲ್ಲಿ ಮುಸ್ಲಿಂ ಮತದಾರರು ಆಮ್ ಆದ್ಮಿ ಪಕ್ಷಕ್ಕೇ ಮತ ನೀಡಬೇಕೆಂದು ಬುಖಾರಿ ಕರೆ ನೀಡಿದ್ದಾರೆ. ಆದರೆ ಆಮ್ ಆದ್ಮಿ ಪಕ್ಷ ಮಾತ್ರ ಬುಖಾರಿ ಬೆಂಬಲವನ್ನು ನಿರಾಕರಿಸಿದೆ.
ಬುಖಾರಿ ಕರೆ ನೀಡಿರುವುದರಿಂದ ದೆಹಲಿ ಚುನಾವಣೆಯನ್ನು ಧಾರ್ಮಾಧಾರಿತವಾಗಿ ವಿಭಜಿಸಲು ಯತ್ನಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಬುಖಾರಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಈ ಹಿಂದೆ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬುಖಾರಿ ಕಾಂಗ್ರೆಸ್ ಗೆ ಮತ ನೀಡುವಂತೆ ಮನವಿ ಮಾಡಿದ್ದರು. ಇಂಥಹ ಫತ್ವಾಗಳಿಗೆ ಮತದಾರರು ತಕ್ಕ ಉತ್ತರ ನೀಡಲಿದ್ದಾರೆ. ಬಿಜೆಪಿಗೆ ಎಲ್ಲಾ ಧರ್ಮದ ಜನರ ಬೆಂಬಲವಿದೆ ಎಂದು ಹೇಳಿದ್ದಾರೆ.
ಇದೇ ವಿಷಯದ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಆಮ್ ಆದ್ಮಿ ಪಕ್ಷ ದೆಹಲಿ ಚುನಾವಣೆಯನ್ನು ಧಾರ್ಮಾಧಾರಿತವಾಗಿ ವಿಭಜಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ. ಅಮ್ ಆದ್ಮಿ ಪಕ್ಷದ ಮುಖಂಡರೇ ಬುಖಾರಿ ಅವರನ್ನು ಭೇಟಿ ಮಾಡಿ ತಮ್ಮ ಪಕ್ಷಕ್ಕೆ ಮತ ಚಲಾಯಿಸುವಂತೆ ಮುಸ್ಲಿಂ ಸಮುದಾಯಕ್ಕೆ ಫತ್ವಾ ಹೊರಡಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಆದರೆ ಬುಖಾರಿ ಫತ್ವಾ ಹೊರಡಿಸಿದ ನಂತರ ಬೆಂಬಲವನ್ನು ನಿರಾಕರಿಸುವ ನಾಟಕ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಲೋಕಸಭಾ ಚನಾವಣೆಯ ವೇಳೆ ಶಾಹಿ ಇಮಾಮ್ ಪಶ್ಚಿಮ ಬಂಗಾಳದಲ್ಲಿರುವ ಮುಸ್ಲಿಮರು ತೃಣಮೂಲ ಕಾಂಗ್ರೆಸ್ಗೆ ಮತ್ತು ಇತರ ರಾಜ್ಯಗಳಲ್ಲಿನ ಮುಸ್ಲಿಮರು ಕಾಂಗ್ರೆಸ್ಗೆ ಮತ ನೀಡಬೇಕು ಎಂದು ಕರೆ ಕೊಟ್ಟಿದ್ದರು.