ನವದೆಹಲಿ : ದಿನದಿಂದ ದಿನಕ್ಕೆ ಆಮ್ ಆದ್ಮಿ ಪಕ್ಷದಲ್ಲಿ ಹೊಸ ಆರೋಪಗಳು ಕೇಳಿಬರುತ್ತಿವೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಕಾಂಗ್ರೆಸ್ ಶಾಸಕರಿಗೆ ಆಮಿಷವೊಡ್ಡಿ ಖರೀದಿಸಲು ಯತ್ನಿಸಿದ್ದರು ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ, ಮುಸ್ಲಿಮರಿಗೆ ಆಪ್ ಪಕ್ಷವೊಂದೇ ಪರ್ಯಾಯ ದಾರಿ ಎಂದು ಕೇಜ್ರಿವಾಲ್ ಹೇಳಿರುವ ಆಡಿಯೋ ಟೇಪ್ ಬಿಡುಗಡೆಯಾಗಿದೆ.
ನರೇಂದ್ರ ಮೋದಿ ಅಲೆಯನ್ನು ತಡೆಗಟ್ಟಲು ಮುಸ್ಲಿಮರಿಗೆ ಇರುವ ಪರ್ಯಾಯ ಮಾರ್ಗವೆಂದರೆ ಅದು ಆಮ್ ಆದ್ಮಿ ಪಕ್ಷವೊಂದೇ ಎಂದು ದೆಹಲಿ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಹೇಳಿರುವುದು ಬೆಳಕಿಗೆ ಬಂದಿದೆ. ಆಮ್ ಆದ್ಮಿ ಪಕ್ಷದಿಂದ ಮುಸ್ಲಿಂ ಸಮುದಾಯದವರು ಸ್ಪರ್ಧಿಸದಿದ್ದರೂ, ನರೇಂದ್ರ ಮೋದಿ ಅವರನ್ನು ಆಪ್ ಸೋಲಿಸಬೇಕೆಂಬ ಮನಸ್ಥಿತಿ ಮುಸ್ಲಿಮರಲ್ಲಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಆಮ್ ಆದ್ಮಿ ಪಕ್ಷದಿಂದ ಹೆಚ್ಚು ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಾರೆ ಎಂಬ ಭರವಸೆ ಸಮುದಾಯದ ನಾಯಕರಲ್ಲಿ ಇಲ್ಲ, ಆದರೆ ಮೋದಿ ಅಲೆಯನ್ನು ಆಪ್ ತಡೆಯಬಹುದು ಎಂಬ ಭರವಸೆ ಇದೆ ಎಂದು ಹೇಳಿರುವುದು ಆಡಿಯೋ ಟೇಪ್ ಮೂಲಕ ಬಹಿರಂಗಗೊಂಡಿದೆ. ದೆಹಲಿ ಚುನಾವಣೆ ಸಂದರ್ಭದಲ್ಲಿ ದೆಹಲಿ ಜಮ್ಮಾ ಮಸೀದಿಯ ಶಾಹಿ ಇಮಾಮ್ ರನ್ನು ಭೇಟಿ ಮಾಡಿದ್ದ ಆಪ್ ಮುಖಂಡರು, ಆಪ್ ಪಕ್ಷಕ್ಕೇ ಮತ ಹಾಕಬೇಕೆಂದು ಮುಸ್ಲಿಂ ಸಮುದಾಯದವರಿಗೆ ಸೂಚಿಸಬೇಕೆಂದು ಮನವಿ ಮಾಡಿದ್ದನ್ನು ಸ್ಮರಿಸಬಹುದು.
ಮೋದಿ ಅಲೆಯನ್ನು ಯಾರಿಂದಲೂ ಕಟ್ಟಿ ಹಾಕಲು ಸಾಧ್ಯವಾಗುತ್ತಿಲ್ಲ. ಒಂದಾದ ನಂತರ ಒಂದರಂತೆ ಎಲ್ಲಾ ರಾಜ್ಯಗಳಲ್ಲೂ ಅವರೇ ಸರ್ಕಾರ ರಚನೆ ಮಾಡುತ್ತಿದ್ದಾರೆ. ಈಗಾಗಲೇ ಕಾಂಗ್ರೆಸ್ ಕಥೆ ಮುಗಿದಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಈ ಆಡಿಯೋ ಟೇಪ್ ನ್ನು ಆಪ್ ಪಕ್ಷದ ಭಿನ್ನಮತೀಯರೊಬ್ಬರು ಬಿಡುಗಡೆ ಮಾಡಿದ್ದಾರೆ.