ನವದೆಹಲಿ : ದೆಹಲಿ ವಿಧಾನಸಭಾ ಚುನಾವಣೆಗೆ ಇನ್ನೇನು ಎರಡು ದಿನ ಮಾತ್ರ ಬಾಕಿಯಿದೆ. ಈ ನಿಟ್ಟಿನಲ್ಲಿ ಬಹಿರಂಗ ಪ್ರಚಾರಕ್ಕೆ ಇಂದು ಕೊನೆ ದಿನವಾಗಿದ್ದು, ಬಿಜೆಪಿ, ಆಮ್ ಆದ್ಮಿ ಪಕ್ಷ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ.
ಚುನಾವಣಾ ಪ್ರಚಾದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಕಿರಣ್ ಬೇಡಿ, ನನ್ನನ್ನು ವಿಧಿ ರಾಜಕೀಯಕ್ಕೆ ಎಳೆ ತಂದಿದ್ದು,ನನಗೆ ಬೇರೇನೂ ಉದ್ದೇಶವಿಲ್ಲ. ದೇವರು ನನಗೆ ಎಲ್ಲವನ್ನೂ ಕೊಟ್ಟಿದ್ದು, ದೆಹಲಿಯಲ್ಲಿ ಜನ ಸೇವೆ ಮಾಡಬೇಕೆಂಬುದೆ ನನ್ನ ಮನಸ್ಸಿನ ಬಯಕೆಯಾಗಿದೆ. ನಾನು ಸೋಲಲು ಇಲ್ಲಿಗೆ ಬಂದಿಲ್ಲ, ಗೆಲ್ಲಲು ಬಂದಿದ್ದೇನೆ ಎಂದರು.
14 ವರ್ಷ ಬಾಲಕಿಯಾಗಿದ್ದ ನಾನು ದೆಹಲಿಗೆ ಟೆನ್ನಿಸ್ ಪಂದ್ಯ ಆಡುವ ಸಲುವಾಗಿ ಅಮೃತಸರದಿಂದ ಬರುತ್ತಿದ್ದೆ. ಈ ನಗರದಲ್ಲಿ ನಾನು ಸೇವೆ ಮಾಡಬೇಕೆಂದು ಆಶಿಸಿದ್ದೆ. ದೇವರ ಕೃಪೆಯಿಂದ ನನ್ನ ಮೊದಲ ಕೆಲಸದ ನೇಮಕಾತಿ ಇಲ್ಲೇ ಆಗುವ ಮೂಲಕ ಸೇವೆ ಮಾಡಲು ಅವಕಾಶ ಒದಗಿ ಬಂತು. ನಾನು ದೆಹಲಿಯನ್ನು ಅಪಾರವಾಗಿ ಪ್ರೀತಿಸುತ್ತಿದ್ದು. ಒಬ್ಬ ತಾಯಿಯಂತೆ ನಾನು ದೆಹಲಿಯಲ್ಲಿ ಇದ್ದೇನೆ ಎಂದು ಹೇಳಿದರು.
ನನ್ನನ್ನು ಸರ್ವಾಧಿಕಾರಿ ಎಂದು ಯಾರಾದರೂ ಕರೆದರೆ ನನಗೇನೂ ಮಾಡಲು ಸಾಧ್ಯವಿಲ್ಲ. ನಿರ್ಣಾಯಕರಂತಿರುವ ಜನರು ಇಂಥಾ ಹೆಸರುಗಳನ್ನು ಕೊಡುತ್ತಾರೆ. ತಪ್ಪು ಮಾಡುವವರ ವಿರುದ್ಧ ಹಾಗೂ ಒಳ್ಳೆಯ ಕೆಲಸ ಮಾಡುವವರ ಪರ ನಾನು ಯಾವತ್ತೂ ಇದ್ದೇ ಇರುತ್ತೇನೆ. ನಾನಿಲ್ಲಿ ನನ್ನ ಕರ್ತವ್ಯ ನಿರ್ವಹಿಸುವುದಕ್ಕಾಗಿ ಬಂದಿದ್ದೇನೆ ಜನರ ಸೇವೆಯೇ ನನ್ನ ಉದ್ದೇಶ ಎಂದು ಕಿರಣ್ ಬೇಡಿ ತಿಳಿಸಿದ್ದಾರೆ.
ಈ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ, ಎಎಪಿ ಅಭ್ಯರ್ಥಿ ಅರವಿಂದ್ ಕೇಜ್ರಿವಾಲ್, ನಾವೀಗ ದೇಶಕ್ಕಾಗಿ ಕೆಲಸ ಮಾಡಬೇಕಾಗಿದ್ದು, ನಮ್ಮೊಂದಿಗೆ ದೇವರಿದ್ದಾನೆ. ದೆಹಲಿಯ ಜನರು ಗೆಲ್ಲಲಿದ್ದಾರೆ ಎಂದಿದ್ದಾರೆ.
ಅಲ್ಲದೆ ಹಗಲಿರುಳು ಶ್ರಮಿಸುತ್ತಿರುವ ಕಾರ್ಯಕರ್ತರಿಗೆ ಧನ್ಯವಾದ ಸಲ್ಲಿಸಿದ್ದು, ಚುನಾವಣೆಯ ಮುಂಚಿನ 48 ಗಂಟೆಗಳಲ್ಲಿ ಇನ್ನಷ್ಟು ಕೆಲಸ ಮಾಡಬೇಕಾಗಿದೆ ಎಂದು ಕರೆ ನೀಡಿದ್ದಾರೆ.