ನವದೆಹಲಿ : ಕುತೂಹಲ ಕೆರಳಿಸಿರುವ ಮಹಾರಾಷ್ಟ್ರ ಹಾಗೂ ಹರ್ಯಾಣ ವಿಧಾನಸಭಾ ಚುನಾವಣೆಗೆ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದ್ದು, ಮನೆ ಮನೆಗೆ ತೆರಳಿ ಮತದಾರರ ಓಲೈಕೆ ಮಾಡುವ ಯತ್ನ ಆರಂಭವಾಗಿದೆ.
ಅ.15ರಂದು ಉಭಯ ರಾಜ್ಯಗಳಲ್ಲಿ ಮತದಾನ ನಡೆಯಲಿದ್ದು, ಅ.19ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಉಭಯ ರಾಜ್ಯಗಳಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಪಣತೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ 30 ರ್ಯಾಲಿಗಳಲ್ಲಿ ಭಾಷಣ ಮಾಡಿದ್ದಾರೆ.
288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ನಡೆಯುತ್ತಿರುವ ಚುನಾವಣೆಯಲ್ಲಿ ಈ ಬಾರಿ ಪಂಚಕೋನ ಸ್ಪರ್ಧೆ ಏರ್ಪಟ್ಟಿದೆ. 25 ವರ್ಷಗಳ ಮೈತ್ರಿ ಕಡಿದುಕೊಂಡಿರುವ ಶಿವಸೇನೆ, ಬಿಜೆಪಿಗೆ ಎಷ್ಟು ಸ್ಥಾನ ಬರಬಹುದು ಎಂಬ ಕುತೂಹಲ ಹೆಚ್ಚಿದೆ. 15ವರ್ಷಗಳ ಮೈತ್ರಿ ಕಡಿದುಕೊಂಡಿರುವ ಕಾಂಗ್ರೆಸ್ ಹಾಗೂ ಎನ್ ಸಿಪಿಗೆ ಮತದಾರ ಎಷ್ಟು ಸ್ಥಾನ ನೀಡಬಹುದು ಎಂಬುದು ಕುತೂಹಲವೂ ಇದೆ. ಇವುಗಳ ಜತೆಯಲ್ಲಿ ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಕೂಡ ಅಖಾಡದಲ್ಲಿದೆ.
ಹರ್ಯಾಣ ವಿಧಾನಸಭೆ 90 ಸದಸ್ಯರನ್ನು ಹೊಂದಿದೆ. ಕಳೆದ 10 ವರ್ಷಗಳಿಂದ ಕಾಂಗ್ರೆಸ್ ನ ಭೂಪಿಂದರ್ ಸಿಂಗ್ ಹೂಡಾ ಮುಖ್ಯಮಂತ್ರಿಯಾಗಿದ್ದು, ಅವರ ಹ್ಯಾಟ್ರಿಕ್ ಗೆಲುವಿಗೆ ತಡೆ ನೀಡಲು ಬಿಜೆಪಿ ಹಾಗೂ ರಾಷ್ಟ್ರೀಯ ಲೋಕದಳ ಪಕ್ಷಗಳು ಹೋರಾಡುತ್ತಿವೆ.
1966ರಲ್ಲಿ ಹರ್ಯಾಣ ರಚನೆಯಾದ ಬಳಿಕ ಇದೇ ಮೊದಲಬಾರಿಗೆ ಬಿಜೆಪಿ ಎಲ್ಲಾ 90 ಕ್ಷೇತ್ರಗಳಲ್ಲೂ ಸ್ಪರ್ಧೆ ಮಾಡಿದೆ.