ಹರ್ಯಾಣ : ರೈತರ ಜೀವ ಅಮೂಲ್ಯವಾದದ್ದು, ಅವರ ರಕ್ಷಣೆಗಾಗಿ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡುತ್ತಿದ್ದರೆ, ಮತ್ತೊಂದೆಡೆ ಅವರದ್ದೇ ಪಕ್ಷದ ಆಡಳಿತವಿರುವ ಹರ್ಯಾಣದಲ್ಲಿ ರೈತರನ್ನು ಬೇರೆ ರೀತಿಯಲ್ಲೇ ನೋಡಲಾಗುತ್ತಿದೆ.
ಹರ್ಯಾಣ ಕೃಷಿ ಸಚಿವರು ಹೇಳಿಕೆ ನೀಡಿದ್ದು, ಆತ್ಮಹತ್ಯೆಗೆ ಶರಣಾಗುವ ರೈತರು ಹೇಡಿಗಳು ಅಲ್ಲದೇ ಕ್ರಿಮಿನಲ್ ಗಳು ಎಂದಿರುವುದು ಈಗ ವಿವಾದವಾಗಿದೆ.
ಭಾರತೀಯ ದಂಡ ಸಂಹಿತೆ ಪ್ರಕಾರ ಆತ್ಮಹತ್ಯೆ ಮಾಡಿಕೊಳ್ಳುವುದು ಅಪರಾಧ. ಆತ್ಮಹತ್ಯೆ ಮಾಡಿಕೊಳ್ಳುವುದು ಹೇಡಿತನ, ಅಲ್ಲದೇ ಕ್ರಿಮಿನಲ್ ಅಪರಾಧ ಕೂಡ, ಹಾಗಾಗಿ ಇಂತಹ ಅಪರಾಧ ಮಾಡುವವರಿಗೆ ಸರ್ಕಾರ ಬೆಂಬಲ ನೀಡಬಾರದು ಎಂದು ಕೃಷಿ ಸಚಿವ ಓಂಪ್ರಕಾಶ್ ಧನ್ ಕರ್ ಹೇಳಿದ್ದಾರೆ.
ರಾಜ್ಯದಲ್ಲಿ ಆತ್ಮಹತ್ಯೆಗೆ ಶರಣಾದ ರೈತ ಕುಟುಂಬಗಳಿಗೆ ಹರ್ಯಾಣ ಸರ್ಕಾರ ನೆರವು ನೀಡುವುದಿಲ್ಲ ಎಂದು ಧನ್ ಕರ್ ಸ್ಪಷ್ಟಪಡಿಸಿದ್ದಾರೆ. ಈ ಹೇಳಿಕೆ ಬಗ್ಗೆ ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆ, ಆಕ್ಷೇಪ ವ್ಯಕ್ತವಾಗಿದೆ.
ಯಾವುದೇ ವಿಷಯದ ಬಗ್ಗೆ ಹೇಳಿಕೆ ನೀಡುವಾಗಲೂ ಎಚ್ಚರಿಕೆಯಿಂದಿರಿ ಎಂದು ಪ್ರಧಾನಿ ನರೇಂದ್ರ ಮೋದಿ ಪದೇ ಪದೇ ಪಕ್ಷದ ಮುಖಂಡರಿಗೆ ಸೂಚನೆ ನೀಡುತ್ತಿದ್ದರೂ ಬಿಜೆಪಿ ನಾಯಕರು, ಸಚಿವರು ವಿವಾದಕ್ಕೀಡಾಗುವ ರೀತಿಯಲ್ಲೇ ಹೇಳಿಕೆಗಳನ್ನು ನೀಡುತ್ತಿದ್ದಾರೆ.