ನವದೆಹಲಿ : ಡೇರಾ ಸಚ್ಚಾ ಸೌದ ಸಮುದಾಯದ ಧರ್ಮಗುರು ಗುರ್ಮೀತ್ ರಾಮ್ ರಹೀಮ್ ಸಿಂಗ್ ನಿರ್ದೇಶಿಸಿ, ನಟಿಸಿರುವ ಮೆಸೆಂಜರ್ ಆಫ್ ಗಾಡ್ ಚಿತ್ರ ಬಿಡುಗಡೆ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸೆನ್ಸಾರ್ ಮಂಡಳಿಯ 9 ಸದಸ್ಯರು ರಾಜೀನಾಮೆ ನೀಡಿದ್ದಾರೆ.
ಜ.16ರಂದು ಮಂಡಳಿಯ ಅಧ್ಯಕ್ಷೆ ಲೀಲಾ ಸ್ಯಾಮ್ಸನ್ ಹಾಗೂ ಮೂವರು ಸದಸ್ಯರು ರಾಜಿನಾಮೆ ನೀಡಿದ್ದರು. ಇದರ ಬೆನ್ನಲ್ಲೇ ಇಂದು ಮಂಡಳಿಯ 9 ಸದಸ್ಯರು ರಾಜೀನಾಮೆ ನೀಡಿದ್ದು, ತಮ್ಮ ರಾಜೀನಾಮೆ ಪತ್ರವನ್ನು ಕೇಂದ್ರ ವಾರ್ತಾ ಸಚಿವರಿಗೆ ರವಾನಿಸಿದ್ದಾರೆ.
ಟ್ರಿಬ್ಯುನಲ್ ಕಂಪನಿ ಎರಡುದಿನಗಳ ಹಿಂದೆ ಎಂಎಸ್ಜಿ- ದ ಮೆಸೆಂಜರ್ ಆಫ್ ಗಾಡ್' ಸಿನಿಮಾ ಬಿಡುಗಡೆಗೆ ಅವಕಾಶ ನೀಡಿತ್ತು. ಇದನ್ನು ಸೆನ್ಸಾರ್ ಮಂದಳಿ ಅಧ್ಯಕ್ಷೆ ಲೀಲಾ ಸ್ಯಾಮ್ಸನ್ ಬಹಿರಂಗವಾಗಿಯೇ ವಿರೋಧಿಸಿದ್ದರು. ಆಕ್ಷೇಪಾರ್ಹ ಚಿತ್ರಗಳಿಗೆ ಅನುಮತಿ ನೀಡುವುದು ಸರಿಯಲ್ಲ ಎಂದು ಅಸಮಾಧಾನ ಹೊರಹಾಕಿದ್ದರು.
ಅಲ್ಲದೇ ಸೆನ್ಸಾರ್ ಮಂಡಳಿಯ ತೀರ್ಮಾನಗಳಲ್ಲಿ ಕೇಂದ್ರ ಸರ್ಕಾರ ಮೂಗು ತೂರಿಸುವುದಷ್ಟೇ ಅಲ್ಲದೆ ಬಲವಂತ ಕೂಡ ಮಾಡುತ್ತಿದೆ.ನಾವು "ಯು' ಸರ್ಟಿಫಿಕೆಟ್ ನೀಡಿದರೆ, ಸರ್ಕಾರ "ಎ' ಸರ್ಟಿಫಿಕೆಟ್ ಬಯಸುತ್ತಿದೆ. ಇದಲ್ಲದೆ ಸೆನ್ಸಾರ್ ಮಂಡಳಿಯ ಕೆಲವು ಸದಸ್ಯರು ಹಾಗೂ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ. ಆದ ಕಾರಣ ತಾವು ರಾಜೀನಾಮೆ ನೀಡುತ್ತಿರುವುದಾಗಿ ಲೀಲಾ ಹೇಳಿದ್ದರು.
ಚಿತ್ರದಲ್ಲಿ ರಾಮ್ ರಹೀಮ್ ಸಿಂಗ್ ತಮ್ಮನ್ನು ಸ್ವತ: ದೇವಮಾನವ ಎನ್ನುವ ರೀತಿಯಲ್ಲಿ ಬಿಂಬಿಸಿ ಕೊಂಡಿದ್ದು, ಕೆಲ ಸಿಖ್ ಸಮುದಾಯಗಳು ಪಂಜಾಬ್ ಹಾಗೂ ಹರ್ಯಾಣದಲ್ಲಿ ಚಿತ್ರದ ವಿರುದ್ಧ ಭಾರೀ ಪ್ರತಿಭಟನೆ ನಡೆಸುತ್ತಿವೆ.