ನವದೆಹಲಿ : 'ಕೇಂದ್ರ ಸೆನ್ಸಾರ್ ಮಂಡಳಿ' ಅಧ್ಯಕ್ಷ ಸ್ಥಾನಕ್ಕೆ ಲೀಲಾ ಸ್ಯಾಮ್ ಸನ್ ರಾಜೀನಾಮೆ ನೀಡಿದ್ದಾರೆ. ಮೆಸೆಂಜರ್ ಆಫ್ ಗಾಡ್ ಚಿತ್ರ ಪ್ರದರ್ಶನಕ್ಕೆ ಕೇಂದ್ರ ಸೆನ್ಸಾರ್ ಮಂಡಳಿ ಅನುಮತಿ ನೀಡಿದ್ದು, ಲೀಲಾ ಸ್ಯಾಮ್ ಸನ್ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದಾರೆ.
ಈ ಚಿತ್ರಕ್ಕೆ ಅವಕಾಶ ನೀಡದಿದ್ದರೆ ಕೆಲವು ಸಿಕ್ ಸಂಘಟನೆಗಳು ಕೋಮುಗಲಭೆ ಸೃಷ್ಟಿಸುವ ಸಾಧ್ಯತೆ ಇದೆ. ಇದರಿಂದ ಕಾನೂನು ಸುವ್ಯವಸ್ಥೆ ಹದಗೆಡಲಿದ್ದು, ಚಿತ್ರಪ್ರದರ್ಶನಕ್ಕೆ ಅವಕಾಶ ನೀಡದಂತೆ ಗೃಹ ಇಲಾಖೆ ಸೂಚನೆ ನೀಡಿತ್ತು ಈ ಬೆಳವಣಿಗೆಗಳಿಂದ ಬೇಸತ್ತು ಸ್ಯಾಮ್ ಸನ್ ರಾಜೀನಾಮೆ ನೀಡಿದ್ದಾರೆ.
ಆದರೆ ಲೀಲಾ ಸ್ಯಾಮ್ಸನ್ ರಾಜೀನಾಮೆಗೆ ಬೇರೆಯದ್ದೇ ಕಾರಣ ನೀಡಿದ್ದಾರೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಹಸ್ತಕ್ಷೇಪ, ಸಚಿವರ ಹಸ್ತಕ್ಷೇಪ ಹಾಗೂ ಹೆಚ್ಚುತ್ತಿರುವ ಭ್ರಷ್ಟಾಚಾರದಿಂದ ಬೇಸತ್ತು ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ.
ಸೆನ್ಸಾರ್ ಮಂಡಳಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು, ರಾಜಕೀಯ ಹಸ್ತಕ್ಷೇಪಕ್ಕೆ ಅವಕಾಶ ನೀಡುತ್ತಿದ್ದಾರ. ದಬ್ಬಾಳಿಕೆ, ಸಚಿವಾಲಯದ ಒತ್ತಡ ಹಾಗೂ ಮಂಡಳಿಯರಲ್ಲಿರುವ ಕೆಲವು ಸದಸ್ಯರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಇದರಿಂದ ತಾವು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಲೀಲಾ ಸ್ಯಾಮ್ ಸನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಳೆದ 9 ತಿಂಗಳಿನಿಂದ ಸೆನ್ಸಾರ್ ಮಂಡಳಿ ಸಭೆ ನಡೆಸಲು ಮಾಹಿತಿ ಮತ್ತು ಪ್ರಸಾರ ಇಲಾಖೆ ಒಂದೇ ಒಂದು ಪೈಸೆ ಹಣವನ್ನು ನೀಡಿಲ್ಲ. ಅಲ್ಲದೆ ಹೊಸ ಸರ್ಕಾರ ಮಂಡಳಿಗೆ ನೂತನ ಸದಸ್ಯರನ್ನು ನೇಮಕ ಮಾಡಲು ಅವಕಾಶವನ್ನೂ ನೀಡುತ್ತಿಲ್ಲ. ಪ್ರತಿಯೊಂದು ವಿಷಯದಲ್ಲಿ ಹಸ್ತಕ್ಷೇಪ ಮಾಡುತ್ತಿದೆ. ಹೀಗಾಗಿ ನನಗೆ ಕೆಲಸ ಮಾಡಲು ಸಾಧ್ಯವಾಗದೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ತಮ್ಮ ನೋವು ತೋಡಿಕೊಂಡಿದ್ದಾರೆ.
ಸೆನ್ಸಾರ್ ಮಂಡಳಿಯಲ್ಲಿ ಕೆಲವು ಭ್ರಷ್ಟರಿದ್ದಾರೆ ಎಂಬ ಲೀಲಾ ಸ್ಯಾಮ್ ಸಂಗ್ ಹೇಳಿಕೆಗೆ ಕೇಂದ್ರ ಸರ್ಕಾರ ತಿರುಗೇಟು ನೀಡಿದೆ. ಮಂಡಳಿಯಲ್ಲಿ ಭ್ರಷ್ಟರಿದ್ದರೆ ಅವರು ಸರಿಯಾದ ದಾಖಲೆಗಳನ್ನು ನೀಡಲಿ ಸರ್ಕಾರ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲಿದೆ. ಆದರೆ, ಆಧಾರ ರಹಿತ ಆರೋಪ ಮಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದೆ.