ನವದೆಹಲಿ : ಪ್ರತಿಯೊಬ್ಬ ಮಹಿಳೆ ನಾಲ್ಕು ಮಕ್ಕಳನ್ನು ಹೆತ್ತು ಹಿಂದೂ ಧರ್ಮ ರಕ್ಷಣೆ ಮಾಡಬೇಕೆಂದು ಎಂಬ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿದೆ.
ಉತ್ತರ ಪ್ರದೇಶದ ಉನ್ನಾವೋ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದರಾಗಿರುವ ಸಾಕ್ಷಿ ಮಹಾರಾಜ್ ಮೀರತ್ನಲ್ಲಿ ಹಮ್ಮಿಕೊಂಡಿದ್ದ ಸಂತ ಸಮಾಗಮ್ ಮಹೋತ್ಸವದಲ್ಲಿ ಮಾತನಾಡಿ ಈ ಹೇಳಿಕೆ ನೀಡಿದ್ದಾರೆ.
ಹಿಂದೆ ನಾಲ್ವರು ಹೆಂಡತಿಯರು ಮತ್ತು 40 ಮಕ್ಕಳೆಂಬ ಕಲ್ಪನೆಯಿತ್ತು. ಇದೀಗ ಬದಲಾದ ಪರಿಸ್ಥಿತಿ ಓರ್ವ ವಿವಾಹಿತ ಹಿಂದೂ ಮಹಿಳೆ ನಾಲ್ವರು ಮಕ್ಕಳನ್ನು ಹೆತ್ತು ಹಿಂದೂ ಧರ್ಮ ಉಳಿಸುವುದು ನಮ್ಮ ಕರ್ತವ್ಯ ಎಂದು ಹೇಳಿದ್ದಾರೆ.
ಪ್ರಸ್ತುತ ಹಿಂದೂ ಧರ್ಮಕ್ಕೆ ಅಪಾಯ ಬಂದಿದೆ. ಧರ್ಮ ರಕ್ಷಣೆ ಮಾಡಬೇಕಾದ್ದು ಪ್ರತಿಯೊಬ್ಬ ನಾರಿಯ ಕರ್ತವ್ಯ ಎಂದು ಸಲಹೆ ನೀಡಿದ್ದಾರೆ.
ಈ ಹಿಂದೆ ಸಾಕ್ಷಿ ಮಹಾರಾಜ್ ರಾಷ್ಟ್ರಪಿತ ಮಹಾತ್ಮಗಾಂಧಿ ಹಂತಕ ನಾತೂರಾಮ್ ಗೋಡ್ಸೆಯನ್ನು ದೇಶಭಕ್ತ ಎಂದು ಕರೆದು ವಿವಾದ ಕಿಡಿ ಹೊತ್ತಿಸಿದ್ದರು. ಇದೀಗ ಮತ್ತೆ ಅಂತಹದ್ದೇ ವಿವಾದಾತ್ಮಕ ಹೇಳಿಕೆ ನೀಡಿ ವಿರೋಧ ಪಕ್ಷಗಳಿಗೆ ಆಹಾರವಾಗಿದ್ದಾರೆ.