ನವದೆಹಲಿ : ಬಿಜೆಪಿ ಸಂಸದರಾದ ಸಾಕ್ಷಿ ಮಹಾರಾಜ್, ಯೋಗಿ ಆದಿತ್ಯನಾಥ್ರಂಥವರು ಗೋಡ್ಸೆ ಹೊಗಳಿಕೆ ಮತ್ತು ಮತಾಂತರ ಪರ ಹೇಳಿಕೆಗಳನ್ನು ನೀಡುತ್ತಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅಸಮಾಧಾನ ಹೊರಹಾಕಿದ್ದಾರೆ.
ಈ ಹಿನ್ನೆಲೆಯಲ್ಲಿ ಅವರು ಪಕ್ಷದ ಸಂಸದರು ಮತ್ತು ನಾಯಕರಿಗೆ ಇಂಥ ಹೇಳಿಕೆಗಳನ್ನು ಕೊಡದಂತೆ ತಾಕೀತು ಮಾಡಿದ್ದಾರೆ ಮತ್ತು ಪಕ್ಷದಲ್ಲಿನ ಹಿಂದು ಪರ ಮುಖಂಡರಿಗೆ ಸುಮ್ಮನಿರುವಂತೆ ಮಾಡಲು ಆರ್ ಎಸ್ ಎಸ್ ನ್ನು ಕೇಳಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ. ಇಂಥ ಹೇಳಿಕೆಗಳಿಂದ ತಾವು ಇಟ್ಟುಕೊಂಡಿರುವ ಮಹತ್ವದ 'ಅಭಿವೃದ್ಧಿ ಕಾರ್ಯಸೂಚಿ' ಹಳಿತಪ್ಪಲಿದೆ ಎಂದು ಮೋದಿ ಹೇಳಿದ್ದಾರೆ.
ವಿಪಕ್ಷಗಳು ಸರ್ಕಾರದ ವಿರುದ್ಧ ಒಂದಾಗಲು ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಮೋದಿ ಆತಂಕ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಇದರ ಮೊದಲ ಯತ್ನವಾಗಿ ಗಾಂಧೀಜಿಯವರನ್ನು ಹತ್ಯೆ ಮಾಡಿದ ಗೋಡ್ಸೆಯನ್ನು ದೇಶಭಕ್ತ ಎಂದು ಕರೆದ ಸಾಕ್ಷಿ ಮಹಾರಾಜ್ರನ್ನು ಬಿಜೆಪಿ ಉನ್ನತ ನಾಯಕತ್ವ ಕರೆಸಿಕೊಂಡು ಬುದ್ಧಿಮಾತು ಹೇಳಿತು. ಆ ಬಳಿಕ ಸಂಸತ್ತಿನಲ್ಲಿ ಸಾಕ್ಷಿ ಕ್ಷಮೆಯಾಚಿಸಿದರು ಎಂದು ತಿಳಿದುಬಂದಿದೆ.
ಇತ್ತೀಚೆಗೆ ಸಚಿವೆ ಸಾಧ್ವಿ ನಿರಂಜನ ಜ್ಯೋತಿ ಹಿಂದುಯೇತರರ ವಿರುದ್ಧ ನೀಡಿದ ವಿವಾದಿತ ಹೇಳಿಕೆಯ ಬಳಿಕವೂ, 'ನೀವು ದೇಶವನ್ನುದ್ದೇಶಿಸಿ ಮಾತನಾಡಬೇಡಿ' ಎಂದು ಪಕ್ಷದ ಸಂಸದರಿಗೆ ಮೋದಿ ಚಾಟಿ ಬೀಸಿದ್ದು ಗಮನಾರ್ಹ.