ನವದೆಹಲಿ : ಅನ್ಯಧರ್ಮೀಯರನ್ನು ಮಾತೃಧರ್ಮಕ್ಕೆ ವಾಪಸ್ ಕರೆತರುವ ಘರ್ ವಾಪಸಿ ಕಾರ್ಯಕ್ರಮವನ್ನು ಸಮರ್ಥಿಸಿಕೊಂಡಿರುವ ವಿ.ಹೆಚ್.ಪಿ ಮುಖಂಡ ಪ್ರವೀಣ್ ತೊಗಾಡಿಯಾ, ದೇಶದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಬರಬೇಕು ಎಂದು ಆಗ್ರಹಿಸಿದ್ದಾರೆ.
ನವದೆಹಲಿಯಲ್ಲಿ ನಡೆದ ವಿ.ಹೆಚ್.ಪಿ ಸಭೆ ಬಳಿಕ ಮಾತನಾಡಿದ ತೊಗಾಡಿಯಾ, ನಾವು ಮತಾಂತರವನ್ನು ವಿರೋಧಿಸುತ್ತೇವೆ. ಆದರೆ ಘರ್ ವಾಪಸಿಯನ್ನು ವಿರೋಧಿಸುವುದಿಲ್ಲ ಎಂದು ಹೇಳಿದ್ದಾರೆ. ಆದರೆ ಹಿಂದೂ ಧರ್ಮ ಕೇವಲ ಧರ್ಮ ಮಾತ್ರವಲ್ಲದೇ ಜೀವನ ಪದ್ಧತಿಯೂ ಹೌದಾಗಿದೆ. ಹಿಂದುತ್ವ ಒಂದು ಜೀವನ ಶೈಲಿ ಎಂದು ಸುಪ್ರೀಂ ಕೋರ್ಟ್ ಕೂಡ ಹೇಳಿದೆ. ಆದ್ದರಿಂದ ನಮ್ಮ ಜೀವನ ಶೈಲಿಯನ್ನು ರೂಢಿಸಿಕೊಳ್ಳುವವರನ್ನು ನಾವು ಸ್ವಾಗತಿಸುತ್ತೇವೆ. ಅದು ಮತಾಂತರವಾಗುವುದಿಲ್ಲ ಎಂದು ಪ್ರವೀಣ್ ತೊಗಾಡಿಯಾ ಹೇಳಿದ್ದಾರೆ.
ಘರ್ ವಾಪಸಿ ಕಾರ್ಯಕ್ರಮ ಮತಾಂತರದ ವಿರುದ್ಧ ನಡೆಸುತ್ತಿರುವುದಲ್ಲ ಎಂದು ಸ್ಪಷ್ಟನೆ ನೀಡಿರುವ ತೊಗಾಡಿಯಾ, ದೇಶದ ಅಭಿವೃದ್ಧಿಗೆ ಆದ್ಯತೆ ನೀಡುವುದಾಗಿ ತಿಳಿಸಿದ್ದಾರೆ. ಅಲ್ಲದೇ ಘರ್ ವಾಪಸಿ ಕಾರ್ಯಕ್ರಮ ಅಭಿವೃದ್ಧಿ ವಿರುದ್ಧ ಪರಿಣಾಮ ಬೀರುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮತಾಂತರ ಎಂಬುದು ರಾಷ್ಟ್ರಿಯತೆಗೆ ವಿರೋಧಿಯಾಗಿದೆ. ಮತಾಂತರ ಹೊಂದಿದ ವ್ಯಕ್ತಿ ರಾಷ್ಟ್ರೀಯತೆಯಿಂದ ದೂರ ಉಳಿಯುತ್ತಾನೆ, ಆದ್ದರಿಂದ ಕೇಂದ್ರ ಸರ್ಕಾರ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಬೇಕು ಎಂದು ಪ್ರವೀಣ್ ತೊಗಾಡಿಯಾ ಹೇಳಿದ್ದಾರೆ.