ಮುಂಬೈ : 'ತಾಲೀಬಾನ್' ಉಗ್ರ ಒಸಾಮ ಬಿನ್ ಲಾಡೆನ್ ನನ್ನು ಹತ್ಯೆ ಮಾಡಲು ಅಮೆರಿಕಾ ನಡೆಸಿದ ಕಾರ್ಯಾಚರಣೆ ಮಾದರಿಯಲ್ಲೇ ಭೂಗತ ಪಾತಕಿ ದಾವೂದ್ ಇಬ್ರಾಹಿಂ ನನ್ನು ಸೆರೆ ಹಿಡಿಯಲು ಭಾರತ ಸರ್ಕಾರವೂ ಕಾರ್ಯಾಚರಣೆ ನಡೆಸಬೇಕು ಎಂದು ಶಿವಸೇನೆ ಆಗ್ರಹಿಸಿದೆ.
ಪಾಕಿಸ್ತಾನದ ಖ್ಯಾತ ಉದ್ಯಮಿಯ ಪುತ್ರನೊಂದಿಗೆ ದಾವೂದ್ ಇಬ್ರಾಹಿಂ ದೂರವಾಣಿಯಲ್ಲಿ ಮಾತನಾಡಿದ ದಾಖಲೆಗಳನ್ನು ಬಿಡುಗಡೆ ಮಾಡಿರುವುದಕ್ಕೆ ಸಾಮ್ನಾದ ಸಂಪಾದಕೀಯದಲ್ಲಿ ಪ್ರತಿಕ್ರಿಯಿಸಿರುವ ಶಿವಸೇನೆ, ದಾವೂದ್ ಇಬ್ರಾಹಿಂ ನ ದೂರವಾಣಿ ಕರೆಗಳನ್ನು ಬಿಡುಗಡೆ ಮಾಡಿದರೆ ಏನೂ ಪ್ರಯೋಜನವಿಲ್ಲ. ಉಗ್ರ ಒಸಾಮ ಬಿನ್ ಲಾಡೆನ್ ನ್ನು ಹತ್ಯೆ ಮಾಡಲು ಅಮೆರಿಕಾ ನಡೆಸಿದ ಕಾರ್ಯಾಚರಣೆ ಮಾದಿರಿಯಲ್ಲೇ ದಾವೂದ್ ನನ್ನು ಸೆರೆ ಹಿಡಿಯಲು ಭಾರತ ಸರ್ಕಾರವೂ ಕ್ರಮ ಕೈಗೊಳ್ಳಬೇಕಿದೆ ಎಂದು ಹೇಳಿದೆ.
ದಾವೂದ್ ಇಬ್ರಾಹಿಂ ಹಾಗೂ ಉಗ್ರ ಹಫೀಜ್ ಸಯ್ಯದ್ ನಂತಹ ಉಗ್ರರು ಪಾಕಿಸ್ತಾನದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಹಾಗೆಯೇ ಪಾಕಿಸ್ತಾನ ಸರ್ಕಾರ ಸಹ ಅವರಿಗೆ ರಕ್ಷಣೆ ನೀಡುತ್ತಿದೆ ಎಂಬುದೂ ಬಹಿರಂಗವಾಗಿದೆ.
ದಾವೂದ್ ಹಾಗೂ ಸಯ್ಯದ್ ನನ್ನು ತಮ್ಮ ವಶಕ್ಕೆ ಒಪ್ಪಿಸುವಂತೆ ಭಾರತ ಸರ್ಕಾರ ಹಲವು ವರ್ಷಗಳಿಂದ ಪಾಕ್ ಸರ್ಕಾರವನ್ನು ಒತ್ತಾಯಿಸುತ್ತಿದೆ. ಆದರೂ ಪಾಕಿಸ್ತಾನ ಸರ್ಕಾರ ಉಗ್ರರಿಗೆ ರಕ್ಷಣೆ ನೀಡುತ್ತಿದೆ ಎಂದು ಶಿವಸೇನೆ ಆರೋಪಿಸಿದೆ.
ದಾವೂದ್ ಇಬ್ರಾಹಿಂ ಹಾಗೂ ಸಯ್ಯದ್ ಚಟುವಟಿಕೆಗಳನ್ನು ಗಮನಿಸುತ್ತಿದ್ದೇವೆ ಎಂದು ಭಾರತ ಸರ್ಕಾರ ಹೇಳುತ್ತದೆ. ಪಾಕಿಸ್ತಾನದಲ್ಲಿರುವ ಉಗ್ರರೂ ಭಾರತ ಸರ್ಕಾರದ ಚಟುವಟಿಕೆಗಳನ್ನು ಗಮನಿಸುತ್ತಿರುತ್ತಾರೆ. ಆದ್ದರಿಂದ ಅವರನ್ನು ಸೆರೆ ಹಿಡಿಯಲು ಅಮೆರಿಕಾ ಮಾದರಿಯ ಕಾರ್ಯಾಚರಣೆ ನಡೆಸಬೇಕು ಎಂದು ಶಿವಸೇನೆ ಎನ್.ಡಿ.ಎ ಸರ್ಕಾರಕ್ಕೆ ಒತ್ತಾಯಿಸಿದೆ.