ನವದೆಹಲಿ : 'ಜಮ್ಮು-ಕಾಶ್ಮೀರ'ದಲ್ಲಿ ನಡೆಯುತ್ತಿರುವ ಪಾಕ್ ಉತ್ತೇಜಿತ ಭಯೋತ್ಪಾದಕರ ದಾಳಿ ಬಗ್ಗೆ ಮುಸ್ಲಿಂ ಧಾರ್ಮಿಕ ಮುಖಂಡರೊಬ್ಬರು ಪ್ರತಿಕ್ರಿಯಿಸಿದ್ದು, ಭಾರತ ಸರ್ಕಾರ ಪಾಕ್ ಗಡಿಯಾಚೆಗಿರುವ ಭಯೋತ್ಪಾದಕರ ನೆಲೆ ಹಾಗೂ ಮೂಲಸೌಕರ್ಯಗಳನ್ನು ಧ್ವಂಸಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಭಾರತದ ಮೇಲೆ ಪಾಕ್ ಉತ್ತೇಜಿತ ಭಯೋತ್ಪಾದರು ದಾಳಿ ನಡೆಸುತ್ತಿದ್ದು, ಅಮಾಯಕ ನಾಗರಿಕರು, ಹಾಗೂ ಯೋಧರ ಸಾವನ್ನು ತಡೆಗಟ್ಟಲು ಪಾಕ್ ನೆಲದಲ್ಲಿರುವ ಭಯೋತ್ಪಾದಕನ ನೆಲೆಗಳನ್ನು ನೆಲಸಮಗೊಳಿಸಬೇಕೆಂದು ಮೌಲಾನಾ ಅಖ್ತರ್ ಹುಸೇನ್ ದೆಹ್ಲವಿ ಭಾರತ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಮೌಲಾನಾ ಅಖ್ತರ್ ಹುಸೇನ್ ದೆಹ್ಲವಿ, ಶಾಂತಿ ಹಾಗೂ ಸೌಹಾರ್ದತೆಗಾಗಿ ಕಾರ್ಯನಿರ್ವಹಿಸುತ್ತಿರುವ ಅಂಜುಮನ್ ಮಿನ್ಹಾಜ್ ಇ ರಸೂಲ್ ಇಸ್ಲಾಮಿಕ್ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ ಪ್ರತ್ಯೇಕವಾದವನ್ನು ಬಿತ್ತುತ್ತಿರುವ ಪಾಕಿಸ್ತಾನಕ್ಕೆ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಅತಿಹೆಚ್ಚು ಮತದಾನ ನಡೆದಿರುವುದನ್ನು ಸಹಿಸಲಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಹತಾಶಗೊಂಡಿರುವ ಪಾಕ್, ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರ ಮೂಲಕ ದಾಳಿ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.
ಇದೇ ವೇಳೆ ಉಗ್ರ ಹಫೀಜ್ ಸಯ್ಯದ್ ವಿರುದ್ಧ ವಾಗ್ದಾಳಿ ನಡೆಸಿರುವ ಮೌಲಾನಾ ಅಖ್ತರ್, ಭಾರತದ ವಿರುದ್ಧ ಹಫೀಜ್ ಸಯ್ಯದ್ ನಂತವರು ನಿರಂತರ ಪಿತೂರಿ ರೂಪಿಸುತ್ತಿದ್ದಾರೆ. ಇಂತಹವರಿಗೆ ಪಾಕಿಸ್ತಾನ ಸಹಕಾರ ನೀಡುತ್ತಿದೆ ಎಂದಿದ್ದಾರೆ.
ಜಮ್ಮು-ಕಾಶ್ಮೀರದ ವಿಧಾನಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಮತಚಲಾವಣೆಯಾಗುವ ಮೂಲಕ ಬುಲೆಟ್ ವಿರುದ್ಧ ಬ್ಯಾಲೆಟ್ ಜಯಗಳಿಸಿದೆ ಎಂದು ಅಖ್ತರ್ ಸಂತಸ ವ್ಯಕ್ತಪಡಿಸಿದ್ದಾರೆ.