ನವದೆಹಲಿ : ಭೂಗತ ಪಾತಕಿ, 1993ರ ಮುಂಬೈ ಬಾಂಬ್ ಸ್ಫೋಟ ಪ್ರಕರಣದ ರೂವಾರಿ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿದ್ದಾನೆ ಎಂದು ಭಾರತ ಸರ್ಕಾರ ಹೇಳಿದೆ. ಲೋಕಸಭೆಯಲ್ಲಿ ಮಾತನಾಡಿದ ಗೃಹ ಸಚಿವ ರಾಜನಾಥ್ ಸಿಂಗ್, ’ದಾವೂದ್ ಪಾಕಿಸ್ತಾನದಲ್ಲೇ ಇದ್ದಾನೆ ಎಂಬ ಖಚಿತ ಮಾಹಿತಿ ನಮ್ಮ ಬಳಿ ಇದೆ. ಈ ಬಗ್ಗೆ ಕಾಲಕಾಲಕ್ಕೆ ಪಾಕಿಸ್ತಾನ ಸರ್ಕಾರಕ್ಕೆ ಆತನ ವಿಳಾಸ ಸಮೇತ ಸಾಕ್ಷ್ಯಾಧಾರಗಳನ್ನು ಒದಗಿಸಿದೆ. ಆದರೆ ಈವರೆಗೆ ಆತನ ಇರುವಿಕೆ ಪತ್ತೆ ಮಾಡಲು ಪಾಕಿಸ್ತಾನ ವಿಫಲವಾಗಿದೆ' ಎಂದು ಆರೋಪಿಸಿದರು.
ಪಾಕಿಸ್ತಾನ ಸರ್ಕಾರಕ್ಕೆ ಈ ಬಗ್ಗೆ ಅನೇಕ ಬಾರಿ ಮನವಿ ಮಾಡಿದ್ದೇವೆ. ಒತ್ತಡ ಹಾಕಿದ್ದೇವೆ. ದಾವೂದ್ ನನ್ನು ಭಾರತಕ್ಕೆ ಹಸ್ತಾಂತರಿಸುವವರೆಗೂ ನಮ್ಮ ಸರ್ಕಾರ ವಿರಮಿಸದು ಎಂದು ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ಕಳೆದ ವಾರವಷ್ಟೇ ರಾಜನಾಥ್ ರ ಸಹೋದ್ಯೋಗಿ ಗೃಹ ಖಾತೆ ರಾಜ್ಯ ಸಚಿವ ಹರಿಭಾಯಿ ಚೌಧರಿ ಅವರು, ಪ್ರಶ್ನೋತ್ತರ ಕಲಾಪದ ವೇಳೆ "ದಾವೂದ್ ಎಲ್ಲಿದ್ದಾನೋ ಗೊತ್ತಿಲ್ಲ' ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದು ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿತ್ತು.
ಈ ನಡುವೆ ದಾವೂದ್ ಪಾಕಿಸ್ತಾನದಲ್ಲಿ ಇದ್ದಾನೆ ಎಂಬ ಭಾರತದ ಗೃಹ ಸಚಿವ ರಾಜನಾಥ್ ಸಿಂಗ್ ಅವರ ಹೇಳಿಕೆಯನ್ನು, ಭಾರತದಲ್ಲಿರುವ ಪಾಕಿಸ್ತಾನದ ರಾಯಭಾರಿ ಅಬ್ದುಲ್ ಬಾಸಿತ್ ತಿರಸ್ಕರಿಸಿದ್ದಾರೆ. ದಾವೂದ್ ಪಾಕಿಸ್ತಾನದಲ್ಲಿ ಇಲ್ಲ, ಈ ಕುರಿತ ಭಾರತದ ಗ್ರಹಿಕೆ ತಪ್ಪು ಎಂದು ಹೇಳಿದ್ದಾರೆ.