ನವದೆಹಲಿ : ಭೂಗತ ಪಾತಕಿ ದಾವೂದ್ ಇಬ್ರಾಹಿಂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸರಣಿ ಬಾಂಬ್ ಸ್ಫೋಟದ ಮೂಲಕ ಭೀಕರ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸಿರುವುದಾಗಿ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.
257 ಜನರ ಸಾವಿಗೆ ಕಾರಣವಾದ 1993ರ ಮುಂಬಯಿ ಸರಣಿ ಬಾಂಬ್ ಸ್ಫೋಟದ ರೀತಿಯಲ್ಲಿ ದೆಹಲಿಯಲ್ಲಿ ಭೀಕರ ಬಾಂಬ್ ದಾಳಿ ನಡೆಸುವಂತೆ ದಾವೂದ್ ಇಬ್ರಾಹಿಂ ತನ್ನ ಹಿಂಬಾಲಕರನ್ನು ಕೇಳಿಕೊಂಡಿರುವುದಾಗಿ ತಿಳಿದುಬಂದಿದೆ.
ಕೆಲ ಉಗ್ರರಿಗೆ ದಾವೂದ್ ಕಳುಹಿಸಿರುವ ಸಂದೇಶವನ್ನು ಇಲಾಖೆ ಪತ್ತೆಹಚ್ಚಿದೆ. ದಾವೂದ್ ನ ಡಿ ಕಂಪೆನಿ ಭಾರತದಲ್ಲಿ ಕೆಲವರನ್ನು ಬಾಡಿಗೆಗೆ ಗೊತ್ತುಪಡಿಸಿಕೊಂಡಿದ್ದು ಅವರಿಗೆ ರಾಷ್ಟ್ರ ರಾಜಧಾನಿಯಲ್ಲಿ ಸರಣಿ ಬಾಂಬ್ ಸ್ಫೋಟಗಳನ್ನು ನಡೆಸುವಂತೆ ಕೇಳಿಕೊಳ್ಳಲಾಗಿದೆ. ಈ ಕುರಿತು ಡಿ ಕಂಪೆನಿ ವಿನಿಮಯಿಸಿಕೊಂಡಿರುವ ಕೆಲವು ಸಂದೇಶಗಳನ್ನು ಕದ್ದಾಲಿಸಲಾಗಿದೆ ಎಂದು ಗುಪ್ತಚರ ದಳದ ಅಧಿಕಾರಿಗಳು ಹೇಳಿದ್ದಾರೆ. ದೆಹಲಿಯಲ್ಲಿ ದಾಳಿ ನಡೆಸಲು ಮಧ್ಯಪ್ರದೇಶದ ಹಲವರಿಗೆ ಸೂಚಿಸಿರುವುದು ಬೆಳಕಿಗೆ ಬಂದಿದೆ. ಆ ವ್ಯಕ್ತಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ.
ಉಗ್ರ ದಾಳಿ ಭೀತಿ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಹೈ ಅಲರ್ಟ್ ಘೊಷಿಸಲಾಗಿದೆ. ಉಗ್ರರ ಪ್ರಮುಖ ಗುರಿಯಾಗಿರುವ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ದೆಹಲಿ ಮೆಟ್ರೋ, ವಿಧಾನಸೌಧ, ನವದೆಹಲಿ ರೈಲ್ವೆ ಸ್ಟೇಷನ್ ಮತ್ತಿತರ ಕಡೆಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ.