ಮುಜಾಫರ್ ನಗರ : ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಿದಂತೆಯೇ ಆಗ್ರಾದ ತಾಜ್ ಮಹಲ್ ಅನ್ನು ಧ್ವಂಸಗೊಳಿಸಲು ಬಿಜೆಪಿ ಸಂಚು ರೂಪಿಸಿದೆ ಎಂದು ಹೇಳುವ ಮೂಲಕ ಉತ್ತರಪ್ರದೇಶದ ಸಚಿವ ಆಜಂ ಖಾನ್ ಹೊಸ ವಿವಾದ ಸೃಷ್ಟಿಸಿದ್ದಾರೆ.
ಇತ್ತೀಚೆಗಷ್ಟೇ ತಾಜ್ ಮಹಲ್ ಅನ್ನು ವಕ್ಫ್ ಆಸ್ತಿ ಎಂದು ಘೋಷಿಸಬೇಕು ಎನ್ನುವ ಮೂಲಕ ವಿವಾದ ಸೃಷ್ಟಿಸಿದ್ದ ಆಜಂ ಖಾನ್ ಈಗ ಪ್ರೇಮಸೌಧವನ್ನು ಒಡೆಯಲು ಬಿಜೆಪಿ ಯೋಜನೆ ಹಾಕಿಕೊಂಡಿದೆ ಎಂದು ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರವು ಯಾವುದೇ ಅಭಿವೃದ್ಧಿಕಾರ್ಯ ಮಾಡುತ್ತಿಲ್ಲ. ಬಿಜೆಪಿಯು ಅಪಾಯಕಾರಿ ಆಟ ಆಡುತ್ತಿದೆ. ಬಾಬ್ರಿ ಮಸೀದಿ ಒಡೆದಂತೆ ತಾಜ್ ಮಹಲ್ ಅನ್ನು ಒಡೆಯಲು ಸಂಚು ರೂಪಿಸುತ್ತಿದೆ. ಕೋಮುಗಳ ನಡುವೆ ಕಂದಕ ಸೃಷ್ಟಿಸಿ ದೇಶವನ್ನು ವಿಭಜಿಸಲು ಯತ್ನಿಸುತ್ತಿದೆ ಎಂದು ಗುಡುಗಿದ್ದಾರೆ.
ಇದೇ ವೇಳೆ ಮತಾಂತರ ವಿಚಾರ ಪ್ರಸ್ತಾಪಿಸಿದ ಅವರು, ಮೊಘಲರು, ಬ್ರಿಟಿಷರು ಕೂಡ ಮತಾಂತರಕ್ಕೆ ಯತ್ನಿಸಿ ವಿಫಲರಾಗಿದ್ದರು. ಜನರ ಧರ್ಮವನ್ನು ಬದಲಿಸಲು ಸಾಧ್ಯವಿಲ್ಲ ಎಂದಿದ್ದಾರೆ.