ಆಗ್ರಾ : ವಿಶ್ವ ವಿಖ್ಯಾತ ತಾಜ್ ಮಹಲ್ ಹಿಂದೆ ಶಿವಾಲಯವಾಗಿತ್ತೆ ? ಹೌದೆನ್ನುತ್ತದೆ ಆಗ್ರಾದ ವಕೀಲರುಗಳ ತಂಡವೊಂದು. ಈ ತಂಡ ತಾಜ್ ಮಹಲ್ ಮೂಲತಃ ಶಿವ ಮಂದಿರವಾಗಿತ್ತು, ಅದರ ಒಡೆತನವನ್ನು ಹಿಂದೂಗಳಿಗೆ ಹಸ್ತಾಂತರಿಸಬೇಕು ಎಂದು ನ್ಯಾಯಾಲಯದಲ್ಲಿ ದಾವೆ ಹೂಡಿದೆ.
17ನೇ ಶತಮಾನದಲ್ಲಿ ನಿರ್ಮಾಣವಾಗಿದೆ ಎನ್ನಲಾದ ಈ ಮೊಘಲ್ ಸ್ಮಾರಕದ ಒಡೆತನದ ಬಗ್ಗೆ ಹೆಚ್ಚುವರಿ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯ ನ್ಯಾಯಾಧೀಶ (XIV) ಅವರಲ್ಲಿ ಆಗ್ರಾದ 6 ವಕೀಲರು ಕಳೆದ ಶನಿವಾರ ಮನವಿ ಮಾಡಿದ್ದಾರೆ. ವರದಿಗಳ ಪ್ರಕಾರ ಸಂಸ್ಕೃತಿ ಸಚಿವಾಲಯಕ್ಕೆ ಈ ಬಗ್ಗೆ ವರದಿ ಸಲ್ಲಿಸಲು ಆಗಸ್ಟ್ 10ರವರೆಗೆ ಸಮಯ ಕೊಡಲಾಗಿದೆ.
ಟೈಮ್ಸ್ ಆಫ್ ಇಂಡಿಯಾದೊಂದಿಗೆ ಮಾತನಾಡಿದ ದಾವೆದಾರರ ಪರ ವಕೀಲ ರಾಜೇಶ್ ಕುಲಶ್ರೇಷ್ಠ ಅವರು, 'ಈ ಕೇಸ್ ವರ್ಗಾವಣೆಗೊಂಡ ಬಳಿಕ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ (XIV) ನ್ಯಾ.ನಿರಂಜನ್ ಚಂದ್ರ ಪಾಂಡೆ ಅವರು, ಪ್ರತಿವಾದಿ-II (ಸಂಸ್ಕೃತಿ ಸಚಿವಾಲಯ) ಕ್ಕೆ ವಕೀಲರ ತಂಡ ಮಾಡಿರುವ ದಾವೆ ಬಗ್ಗೆ ಆ.10ರ ಒಳಗಾಗಿ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಎಲ್ಲಾ ಪ್ರತಿವಾದಿಗಳೂ ತಮ್ಮ ಪ್ರತಿಕ್ರಿಯೆಗಳನ್ನು ಸಲ್ಲಿಸಿದ ಮೇಲೆ ನಾವು ನಮ್ಮ ಪ್ರತಿವಾದವನ್ನು ನ್ಯಾಯಾಲಯಕ್ಕೆ ಸಲ್ಲಿಸುತ್ತೇವೆ' ಎಂದಿದ್ದಾರೆ.
ಈ ಮೊದಲು ವಕೀಲರುಗಳ ಮಂದಿಸಿದ ತಾಜ್ ಮಹಲ್ ಹಿಂದೆ ಶಿವಾಲಯವಾಗಿತ್ತು ಎಂಬ ವಾದವನ್ನು ಈ ದಾವೆಯಲ್ಲಿ ಪ್ರಥಮ ಪ್ರತಿವಾದಿಯಾದ ಭಾರತೀಯ ಪುರಾತತ್ವ ಇಲಾಖೆ ತೞಿ ಹಾಕಿತ್ತು.
ತಾಜ್ ಮಹಲ್ ಹಿಂದೆ ಶಿವ ದೇವಾಲಯವಾಗಿತ್ತು. ಅದು ಶ್ರೀ ಅಗ್ರೇಶ್ವರ ಮಹಾದೇವನಿಗೆ ಮೀಸಲಾದ ದೇವಾಲಯವಾಗಿತ್ತು, ಇದನ್ನು ಸಾಬೀತುಪಡಿಸಲು ನಮ್ಮಲ್ಲಿ ಬಹಳಷ್ಟು ಪುರಾವೆಗಳಿವೆ ಎಂದು ವಕೀಲರುಗಳ ತಂಡ ಹೇಳಿದೆ. ಅವರು ಹೂಡಿದ ದಾವೆಯಲ್ಲಿ ಈ ಸ್ಮಾರಕದ ಒಡೆತನವನ್ನು ಹಿಂದೂಗಳಿಗೆ ಹಸ್ತಾಂತರಿಸುವಂತೆಯೂ, ಮುಸ್ಲಿಮರು ಅಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ಕೊಡಬಾರದೆಂದೂ ವಿನಂತಿಸಲಾಗಿದೆ.
ಈ ದಾವೆಯಲ್ಲಿ ತಾಜ್ ಮಹಲಿನ ಒಡೆತನಕ್ಕಾಗಿ ಶ್ರೀ ಅಗ್ರೇಶ್ವರ ಮಹಾದೇವರನ್ನೂ ವಾದಿಯನ್ನಾಗಿಸಲಾಗಿದೆ!.
ಕಳೆದ ವರ್ಷ ಉತ್ತರ ಪ್ರದೇಶದ ಬಿಜೆಪಿ ಅಧ್ಯಕ್ಷ ಲಕ್ಷ್ಮಿಕಾಂತ್ ಬಾಜಪೇಯಿ ಅವರು ಸಹ ತಾಜ್ ಮಹಲ್ ಒಂದು ಪುರಾತನ ದೇವಾಲಯ ಎಂದು ಹೇಳಿರುವುದನ್ನು ಇಲ್ಲಿ ಸ್ಮರಿಸಬಹುದು.
ಮೊಘಲ್ ಚಕ್ರವರ್ತಿ ಷಾಜಹಾನ್ 'ತೇಜೋ ಮಹಾಲಯ' ಎಂಬ ದೇವಾಲಯಕ್ಕೆ ಸೇರಿದ್ದ ಒಂದು ಭಾಗ ಭೂಮಿಯನ್ನು ರಾಜಾ ಜೈ ಸಿಂಗ್ ನಿಂದ ಖರೀದಿ ಮಾಡಿದ್ದ ಎನ್ನುವುದಕ್ಕೆ ಸಾಕಷ್ಟು ಪುರಾವೆ ಇವೆ ಎಂದೂ ಬಾಜಪೇಯಿ ಹೇಳಿದ್ದರು.
ಉತ್ತರ ಪ್ರದೇಶದ ಸಚಿವ ಆಜ್ಹಂ ಖಾನ್ ತಾಜ್ ಮಹಲಿನ ಒಡೆತನವನ್ನು ಮುಸ್ಲಿಮರ ವಕ್ಫ್ ಮಂಡಳಿಗೆ ಹಸ್ತಾತರಿಸುವಂತೆ ಮಾಡಿದ್ದ ಬೇದಿಕೆಯ ಹಿನ್ನಲೆಯಲ್ಲಿ ಬಾಜಪೇಯಿ ಅವರು ಮೇಲಿನ ಪ್ರತಿಕ್ರಿಯೆ ನೀಡಿದ್ದರು.
ಹಲವು ವರ್ಷಗಳಿಂದ ವಿವಾದಕ್ಕೆ ಒಳಗಾದ ತಾಜ್ ಮಹಲಿನ ಮೂಲ ಒಡೆತನ ಈಗ ನ್ಯಾಯಾಲಯದ ಮೆಟ್ಟಿಲನ್ನು ಹತ್ತಿದ್ದು, ಸರಿಯಾದ ತನಿಖೆ ನಡೆದರೆ ಕುತೂಹಲಕಾರಿ ಅಂಶಗಳು ಹೊರ ಬೀಳಲಿವೆ ಎಂದು ಹೇಳಲಾಗುತ್ತಿದೆ.