ನವದೆಹಲಿ : 'ಭಾರತ-ಚೀನಾ ಗಡಿ' ಭಾಗದಲ್ಲಿ ಭೂಮಿಯಿಂದ ಆಕಾಶಕ್ಕೆ ಜಿಗಿಯುವ( surface-to-air) ಆಕಾಶ್ ಕ್ಷಿಪಣಿಗಳನ್ನು ನಿಯೋಜಿಸಲುವ ಮೂಲಕ ಚೀನಾ ಅತಿಕ್ರಮಣವನ್ನು ತಡೆಗಟ್ಟಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ.
ಭಾರತದ ಈಶಾನ್ಯ ಭಾಗಗಳಲ್ಲಿ ಆಕಾಶ್ ಕ್ಷಿಪಣಿಗಳೊಂದಿಗೆ ವಾಯುದಳದ ಹೊಸ ಸ್ಕ್ವಾಡ್ರನ್ ಗಳನ್ನು ನಿಯೋಜಿಸುವ ಮೂಲಕ ಚೀನಾ ಹೆಲಿಕಾಫ್ಟರ್, ಜೆಟ್ ಗಳು ಭಾರತದ ಗಡಿಯೊಳಗೆ ಪ್ರವೇಶಿಸದಂತೆ ತಡೆಯಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಚೀನಾ ಈಶಾನ್ಯ ಭಾಗಗಳಲ್ಲಿ ಪದೇ ಪದೇ ಗಡಿ ಅತಿಕ್ರಮಣ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಸರ್ಕಾರ ಆಕಾಶ್ ಕ್ಷಿಪಣಿಯೊಂದಿಗೆ 6 ಸೇನಾ ತುಕಡಿಗಳನ್ನು ನಿಯೋಜಿಸಿದೆ.
ಚೀನಾ ಅತಿಕ್ರಮಣ ತಡೆಗಟ್ಟುವ ಹಿನ್ನೆಲೆಯಲ್ಲಿ ತೇಜ್ ಪುರ್, ಚಬುವಾ ಎಂಬ ಪ್ರದೇಶಗಳಲ್ಲಿ ಇತ್ತೀಚೆಗಷ್ಟೆ ಭಾರತ ಸರ್ಕಾರ ಸುಖೋಯ್ -30 MKI ಫೈಟರ್ ಗಳನ್ನು ನಿಯೋಜಿಸಿತ್ತು. ಆದರೆ ಅತಿಕ್ರಮಣ ಮುಂದುವರೆಯುತ್ತಿರುವುದರಿಂದ ಸುಖೋಯ್ -30 MKI ಗಿಂತಲೂ ಹೆಚ್ಚಿನ ಸಾಮರ್ಥ್ಯವುಳ್ಳ ಭೂಮಿಯಿಂದ ಆಕಾಶಕ್ಕೆ ಜಿಗಿಯುವ ಅಕಾಶ್ ಕ್ಷಿಪಣಿಗಳನ್ನು ನಿಯೋಜಿಸಲು ಸಿದ್ಧತೆ ನಡೆಸಿದೆ.
ಆಕಾಶ್ ಕ್ಷಿಪಣಿ ತುಕಡಿಗಳು ಶೀಘ್ರವೇ ಈಶಾನ್ಯಭಾಗದಲ್ಲಿರುವ ಸೇನಾಪಡೆಗೆ ತಲುಪಲಿದೆ ಎಂದು ರಕ್ಷಣಾ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಆಕಾಶ್ ಕ್ಷಿಪಣಿಗಳು 25 ಕಿ.ಮಿ. ಪ್ರತಿಬಂಧ ವ್ಯಾಪ್ತಿಯಲ್ಲಿ ಎಲ್ಲಾ ಹವಾಮಾನದಲ್ಲೂ ಶತೃಗಳ ದಾಳಿಯನ್ನು ನಾಶಪಡಿಸುವ ಸಾಮರ್ಥ್ಯ ಹೊಂದಿದೆ. ಈ ಕ್ಷಿಪಣಿಯನ್ನು ಡಿ.ಆರ್.ಡಿ.ಒ ಸಂಸ್ಥೆ ಅಭಿವೃದ್ಧಿಪಡಿಸಿದೆ.