ನವದೆಹಲಿ : ಶತ್ರು ಪಕ್ಷದವರು ನಡೆಸುವ ಯುದ್ಧ ವಿಮಾನಗಳು, ಹೆಲಿಕಾಪ್ಟರ್ ಗಳು, ಡ್ರೋನ್ ಗಳು ಮತ್ತು ಮಾನವ ರಹಿತ ವಾಯುದಾಳಿಗಳನ್ನು ಸಮರ್ಥವಾಗಿ ಎದುರಿಸಿ ಅವುಗಳನ್ನು ನಾಶ ಮಾಡಬಲ್ಲ ಸಾಮರ್ಥ್ಯದ ನೆಲದಿಂದ ಆಗಸದೆಡೆಗೆ ಚಿಮ್ಮುವ ಭಾರತದ ಮಹತ್ವಾಕಾಂಕ್ಷೆಯ ಆಕಾಶ್ ಕ್ಷಿಪಣಿಯನ್ನು ಭಾರತೀಯ ಸೇನಾಪಡೆಗೆ ಸೇರ್ಪಡೆ ಮಾಡಲಾಯಿತು.
25ಕಿ.ಮೀ. ವ್ಯಾಪ್ತಿಯಲ್ಲಿ 20 ಕಿ.ಮೀ. ಎತ್ತರಕ್ಕೆ ಹಾರಿ ವೈರಿ ವಿಮಾನಗಳನ್ನು ನೆಲಕ್ಕುರುಳಿಸುವ ಈ ಆಕಾಶ್ ಕ್ಷಿಪಣಿಯನ್ನು ಬರೋಬ್ಬರಿ 32 ವರ್ಷಗಳ ಸುದೀರ್ಘ ಅವಧಿಯ ಬಳಿಕ ಸೇನೆಗೆ ಸೇರ್ಪಡೆ ಮಾಡಲಾಗಿದ್ದು, ಈ ಸಂದರ್ಭದಲ್ಲಿ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಉಪಸ್ಥಿತರಿದ್ದರು.
ಆಕಾಶ್ ಕ್ಷಿಪಣಿ 25ಕಿ.ಮೀ. ಕಡಿಮೆ ವ್ಯಾಪ್ತಿ ಹೊಂದಿದ್ದರೂ ನಿರ್ದಿಷ್ಟವಾಗಿ ಗುರಿ ತಲುಪಲಿದೆ. ಇದೇ ವ್ಯಾಪ್ತಿಯ ಇನ್ನೂ ಎರಡು ಕ್ಷಿಪಣಿಗಳನ್ನು ಬರುವ ಎರಡು ವರ್ಷಗಳಲ್ಲಿ ಸಿದ್ಧಪಡಿಸಿ ಸೇನೆಗೆ ಸೇರ್ಪಡೆ ಮಾಡಲಾಗುವುದು ಎಂದು ಡಿ.ಆರ್.ಡಿ.ಒ ವಿಜ್ಞಾನಿಗಳು ತಿಳಿಸಿದ್ದಾರೆ.
ಆಕಾಶ್ ಕ್ಷಿಪಣಿ ಸೇರ್ಪಡೆಯಿಂದ ಭಾರತೀಯ ಸೇನಾಪಡೆಯ ಶಕ್ತಿ ಗಣನೀಯವಾಗಿ ಹೆಚ್ಚಿದಂತಾಗಿದೆ ಎಂದು ಸೇನೆಯ ಆರ್ಮಿ ಏರ್ ಡಿಫೆನ್ಸ್ ಲೆ.ಜ.ವಿ.ಕೆ.ಸಕ್ಸೇನಾ ಹೇಳಿದ್ದಾರೆ.