ಬೀಜಿಂಗ್ : ಭಾರತ-ಚೀನಾ ನಡುವಿನ ಬಾಂಧವ್ಯ ವೃದ್ಧಿಗಾಗಿ 8 ಸೂತ್ರಗಳನ್ನು ಪಟ್ಟಿ ಮಾಡಿದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಉಭಯ ದೇಶಗಳ ಗಡಿ ವಿವಾದ ಸೇರಿದಂತೆ ಹಲವು ಸವಾಲುಗಳನ್ನು ರಾಜಕೀಯ ಕೌಶಲ ಹಾಗೂ ವಿವೇಚನೆಯಿಂದ ಇತ್ಯರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ಬೀಜಿಂಗ್ ನ ಪೆಕಿಂಗ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ ನೀಡಿದ ಪ್ರಣಬ್ ಮುಖರ್ಜಿ, ಚೀನಾ ಮತ್ತು ಭಾರತದ ಪಾಲುದಾರಿಕೆಯನ್ನು ಬಲಪಡಿಸಲು ನಾವು ಬದ್ಧವಾಗಿದ್ದೇವೆ. ನೆರೆ ರಾಷ್ಟ್ರಗಳ ಜತೆ ಕೆಲ ವಿಚಾರಕ್ಕೆ ಸಂಬಂಧಿಸಿದಂತೆ ಭಿನಾಭಿಪ್ರಾಯ ಮೂಡುವುದು ಸಹಜ. ಆದರೆ ಅವುಗಳನ್ನು ಸಮಾಧಾನವಾಗಿ ಬಗೆಹರಿಸಿಕೊಳ್ಳಬೇಕು. ಸಮಸ್ಯೆಗಳನ್ನು ಇಲ್ಲಿಗೆ ಬಗೆಹರಿಸಿಕೊಂಡು ಮುಂದಿನ ಪೀಳಿಗೆಗೆ ಅನುಕೂಲವಾಗುವಂತೆ ನೋಡಿಕೊಳ್ಳುವುದಕ್ಕಾಗಿ ಉಭಯ ದೇಶಗಳು ದುಡಿಯಬೇಕಿದೆ ಎಂದು ಕರೆ ನೀಡಿದರು.
ಉತ್ಸವಗಳು, ಕ್ರೀಡೆಗಳು, ಡಿಜಿಟಲ್ ಟೆಕ್ನಾಲಜಿ, ಬೌದ್ಧಿಕ ಮತ್ತು ಸಾಂಸ್ಕೃತಿಕ ವಿನಿಮಯ, ಹಾಗೂ ಪ್ರವಾಸ, ಪ್ರಮುಖವಾಗಿ ಕೈಲಾಶ ಮಾನಸ ಸರೋವರ ಮತ್ತು ಬುದ್ಧರ ಯಾತ್ರೆಗಳ ಮೂಲಕ ಉಭಯ ದೇಶಗಳ ಯುವಕರು ಪರಸ್ಪರ ಸಂಪರ್ಕ ಬೆಳೆಸಿಕೊಳ್ಳಲು ಅನುವುಮಾಡಿಕೊಡಬೇಕು ಎಂದು ಹೇಳಿದರು.