ಬೀಜಿಂಗ್ : ಒಂದೆಡೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭೂತಪೂರ್ವ ಸ್ವಾಗತ ಕೋರಿ ಉಭಯ ದೇಶಗಳು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕುತ್ತಿದ್ದರೆ ಇನ್ನೊಂದೆಡೆ ಚೀನೀ ಮಾಧ್ಯಮಗಳು ಭಾರತದ ಭೂಪಟವನ್ನು ತಿರುಚಿ ತಮ್ಮ ಉದ್ಧಟತನವನ್ನು ಮೆರೆಯುತ್ತಿವೆ.
ಪ್ರಧಾನಿ ಮೋದಿ ಮೂರು ದಿನಗಳ ಚೀನಾ ಪ್ರವಾಸ ಕೈಗೊಂಡಿದ್ದು, ಗಡಿ ಸಮಸ್ಯೆಗಳೂ ಸೇರಿದಂತೆ ಹಲವು ಮಹತ್ವದ ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸಿದ್ದಾರೆ. ಚೀನಾ ಕೂಡಾ ಭಾರತದೊಂದಿಗಿನ ತನ್ನ ಸಂಬಂಧ ವೃದ್ಧಿಗೆ ಹಾತೊರೆಯುತ್ತಿದ್ದು, ಮೋದಿಯವರಿಗೆ ರೆಡ್ ಕಾರ್ಪೆಟ್ (ಕೆಂಪು ಕಂಬಳಿ) ಸ್ವಾಗತವನ್ನು ಕೋರಿದೆ. ಚೀನಾದ ಅಧ್ಯಕ್ಷ ಕ್ಸಿ ಲಿಂಪಿಂಗ್ ಸಹ ಶಿಷ್ಠಾಚಾರಗಳನ್ನು ಮೀರಿ ತಮ್ಮ ಹುಟ್ಟೂರು ಕ್ಶಿ'ಯಾನ್ ನಗರದಲ್ಲಿ ಪ್ರಧಾನಿ ಮೋದಿಯವರನ್ನು ಸ್ವತಃ ಸ್ವಾಗತಿಸಿದ್ದರು. ಆದರೆ ಚೀನಾದ ಸರಕಾರೀ ಸ್ವಾಮ್ಯದ ಮಾಧ್ಯಮ ಸಿಸಿಟಿವಿ ಭಾರತದ ಭೂಪಟವನ್ನು ತಿರುಚಿ ತೋರಿಸಿ ಮುಜುಗುರ ಉಂಟು ಮಾಡಿದೆ.
ಭಾರತದ ಅವಿಭಾಜ್ಯ ಅಂಗಗಳಾದ ಅರುಣಾಚಲ ಪ್ರದೇಶ ಮತ್ತು ಕಾಶ್ಮೀರಗಳನ್ನು ಅಳಿಸಿ ಭಾರತದ ಭೂಪಟವನ್ನು ಸಿಸಿಟಿವಿ ಬಿತ್ತರಿಸಿದೆ.
ಭಾರತ ಮತ್ತು ಚೀನಾಗಳ ನಡುವೆ ಹಲವಾರು ದಶಕಗಳಿಂದ ಗಡಿ ವಿವಾದ ಮುಂದುವರೆದಿದ್ದು, ಅರುಣಾಚಲ ಪ್ರದೇಶ ತನ್ನದೆಂದು ಚೀನಾ ಸದಾ ಹೇಳಿಕೊಳ್ಳುತ್ತಿದೆ. ಪಾಕ್ ಆಕ್ರಮಿತ ಕಾಶ್ಮೀರದ ಅಕ್ಸಾಯ್ ಚಿನ್ ಪ್ರದೇಶವನ್ನು ಪಾಕಿಸ್ತಾನ ಚೀನಾಕ್ಕೆ ಬಿಟ್ಟುಕೊಟ್ಟಿದ್ದು, ಭಾರತದ್ದೇ ಆದ ಈ ಭೂಭಾಗ ಚೀನಾ ಆಕ್ರಮಿಸಿರುವುದು ಅಕ್ರಮವೆಂಬುದು ಭಾರತದ ನಿಲುವು. ಎರಡೂ ದೇಶಗಳ ಮಧ್ಯೆ 1962ರಲ್ಲಿ ಅಕ್ಸಾಯ್ ಚಿನ್ ಬಗ್ಗೆ ಯುದ್ಧವೇ ನಡೆದಿತ್ತು.
ಗುರುವಾರ ಚೀನಾದ ಅಧ್ಯಕ್ಷ ಜಿಂಪಿಂಗ್ ಜೊತೆ ನಡೆಸಿದ 90 ನಿಮಿಷಗಳ ಮಾತುಕತೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಉಭಯ ದೇಶಗಳ ನಡುವೆ ಇರುವ ಹಲವು ಸಮಸ್ಯೆಗಳ ಬಗ್ಗೆ ಪ್ರಸ್ತಾಪ ಮಾಡಿ, ಅರುಣಾಚಲ ಪ್ರದೇಶದ ನಾಗರಿಕರಿಗೆ ಚೀನಾ ಸ್ಟಾಪ್ಲಡ್ ವೀಸಾ ಕೊಡುತ್ತಿರುವ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ಅರುಣಾಚಲ ಪ್ರದೇಶವನ್ನು ಚೀನಾ ದಕ್ಷಿಣ ಟಿಬೆಟ್ ಎಂದು ಹೇಳಿಕೊಳ್ಳುತ್ತಿದೆ.