ಲಖ್ನೌ : 'ನಾನು ಭಾರತದ ರಕ್ಷಣಾ ಮಂತ್ರಿ. ನನಗೆ ನನ್ನ ಕರ್ತವ್ಯದ ಬಗ್ಗೆ ಚೆನ್ನಾಗಿ ಅರಿವಿದೆ ಹಾಗೂ, ಭಾರತ ತನ್ನನ್ನು ತಾನು ರಕ್ಷಿಸಿಕೊೞುವ ಸಾಮರ್ಥ್ಯ ಹೊಂದಿದೆ ಎಂದು ನಿಮಗೆ ಹೇಳಬಯಸುತ್ತೇನೆ'. ಇದು ಭಾರತದ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಸುದ್ದಿಗಾರರಿಗೆ ಹೇಳಿದ ಮಾತು.
ರಷ್ಯಾದ ಉಫಾ ದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನದ ಪ್ರಧಾನಿ ನವಾಝ್ ಶರೀಫ್ ಅವರ ನಡುವೆ ನಡೆಯಲಿರುವ ಮಾತುಕತೆಗೆ ಒಂದು ದಿನ ಮೊದಲು, ಅಂದರೆ, ಗುರುವಾರ ಪರಿಕ್ಕರ್ ಅವರು 'ಭಾರತ ತನ್ನನ್ನು ತಾನು ರಕ್ಷಿಸಿಕೊೞುವ ಸಾಮರ್ಥ್ಯ ಹೊಂದಿದೆ' ಎಂದಿದ್ದಾರೆ.
ಇತ್ತೀಚೆಗೆ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಅಸಿಫ್ ಟಿವಿ ಚಾನೆಲ್ ಒಂದಕ್ಕೆ ಕೊಟ್ಟ ಸಂದರ್ಶನದಲ್ಲಿ, ಅಗತ್ಯವಿದ್ದಲ್ಲಿ ಪಾಕಿಸ್ತಾನ (ಭಾರತದ ವಿರುದ್ಧ) ತನ್ನ 'ಅಸ್ಥಿತ್ವಕ್ಕಾಗಿ' ಪರಮಾಣು ಅಸ್ತ್ರವನ್ನು ಬಳಸಬಹುದು ಎಂದಿದ್ದರು. ಈ ಹಿನ್ನಲೆಯಲ್ಲಿ ರಕ್ಷಣಾ ಸಚಿವ ಪರಿಕ್ಕರ್ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ ಮತ್ತು ಇದು ಪಾಕಿಸ್ತಾನಕ್ಕೆ ಕೊಟ್ಟ ಎಚ್ಚರಿಕೆಯ ಸಂದೇಶ ಎಂದು ಪರಿಗಣಿಸಲಾಗಿದೆ.
ಸೋಮವಾರ, ಜು.6ರಂದು ಪಾಕಿಸ್ತಾನದ ಸುದ್ಧಿ ಚಾನೆಲ್ ಒಂದಕ್ಕೆ ಕೊಟ್ಟ ಸಂದರ್ಶನದಲ್ಲಿ ಪಾಕಿಸ್ತಾನದ ರಕ್ಷಣಾ ಸಚಿವ, 'ಇಂಥ (ಪರಮಾಣು ಅಸ್ತ್ರದ ಬಳಕೆ) ಒಂದು ಆಯ್ಕೆಯ ಅಗತ್ಯತೆ ಎಂದಿಗೂ ಉಂಟಾಗದಿರಲಿ ಎಂದು ನಾವು ಪ್ರಾರ್ಥಿಸೋಣ. ಆದರೆ ನಮ್ಮ ಉಳಿವಿಗಾಗಿ ಅದನ್ನು (ಪರಮಾಣು ಅಸ್ತ್ರ) ಬಳಸುವ ಅಗತ್ಯ ಬಿದ್ದಲ್ಲಿ ನಾವು ಬಳಸುತ್ತೇವೆ' ಎಂದು ಹೇಳಿದ್ದರು.
ಉಗ್ರ ಲಖ್ವಿ ಬಿಡುಗಡೆ ವಿಚಾರದಲ್ಲಿ ವಿಶ್ವ ಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಚೀನಾ ಕೊಡುತ್ತಿರುವ ಬೆಂಬಲದ ಬಗ್ಗೆ ಪರಿಕ್ಕರ್ ಮಾತನಾಡಲು ನಿರಾಕರಿಸಿದರು. 'ಇದು ವಿದೇಶಾಂಗ ಸಚಿವಾಲಯಕ್ಕೆ ಸಂಬಂಧಿಸಿದ ವಿಚಾರ' ಎಂದು ಅವರು ಹೇಳಿದರು.
ಬುಧವಾರ, ರಷ್ಯಾದ ಉಫಾದಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ ಜೊತೆಗೆ ಮಾತುಕತೆ ನಡೆಸಿದ ಪ್ರಧಾನಿ ಮೋದಿ, ಲಖ್ವಿಯ ಬಿಡುಗಡೆ ವಿಚಾರದಲ್ಲಿ ಚೀನಾ ಪಾಕಿಸ್ತಾನವನ್ನು ವಿಶ್ವಸಂಸ್ಥೆಯಲ್ಲಿ ಬೆಂಬಲಿಸುವುದು ಸಮ್ಮತವಲ್ಲ ಎಂದು ಜಿಂಪಿಂಗ್ ಗೆ ಭಾರತದ ಕಳವಳವನ್ನು ತಿಳಿಸಿದ್ದಾರೆ.
ಭಾರತ-ಪಾಕಿಸ್ತಾನ ಗಡಿಯಲ್ಲಿ ಉಗ್ರರನ್ನು ಸೆದೆಬಡಿಯಲು 'ಮ್ಯಾನ್ಮಾರ್' ತೆರನಾದ ಕಾರ್ಯಾಚರಣೆ ನಡೆಸುವ ಸಂಭವ ಇದೆಯೆ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪರಿಕ್ಕರ್, ಈ ಪ್ರಶ್ನೆ ಕೆಲವೊಂದು ಲೆಕ್ಕಾಚಾರಗಳನ್ನು ಅವಲಂಬಿಸಿದೆ' ಎಂದು ಉತ್ತರಿಸಿದರು.
ಮುಂದುವರಿದು ತಮಾಷೆಯಾಗಿ, 'ಸರಕಾರದ ರಹಸ್ಯ / ನಿಗೂಢ ಕಾರ್ಯಾಚರಣೆಗಳನ್ನು ಸಾರ್ವಜನಿಕವಾಗಿ ವಿವರಿಸಲಾಗುವುದಿಲ್ಲ' ಎಂದು ಹೇಳಿದರು. ಅಲ್ಲ್ದೆ, ಹಿಂದಿನ (ಯುಪಿಎ) ಸರಕಾರದ ಕಾಲಾವಧಿಗೆ ಹೋಲಿಸಿದರೆ ಯುದ್ಧವಿರಾಮ ಉಲ್ಲಂಘನೆಯಲ್ಲಿ ಇಳಿಕೆಯಾಗಿದೆ ಎಂದರು.