ಇಸ್ಲಾಮಾಬಾದ್ : ಭಾರತ-ಪಾಕಿಸ್ತಾನ ನಡುವೆ ಭಾನುವಾರ, ಆ.22ರಂದು ನಿಗದಿಯಾಗಿದ್ದ ಎಸ್.ಎಸ್.ಎ. ಮಾತುಕತೆ ರದ್ದುಗೊಳಿಸಿ ಪೆಚ್ಚಾದ ಪಾಕಿಸ್ತಾನದ ಹೊಸ ಕ್ಯಾತೆ ತೆಗೆದಿದೆ. ಭಾರತ ತಾನು ಒಂದು 'ಸುಪರ್ ಪವರ್' ಎಂಬಂತೆ ವರ್ತಿಸುತ್ತಿದೆ ಎಂದು ಪಾಕಿಸ್ತಾನದ ರಕ್ಷಣಾ ಸಲಹೆಗಾರ (ಎನ್.ಎಸ್.ಎ) ಸರ್ತಾಜ್ ಅಝಿಝ್ ಆರೋಪಿಸಿದ್ದಾರೆ.
ಎನ್.ಎಸ್.ಎ. ಮಾತುಕತೆ ರದ್ದಾಗಲು ಎಲ್ಲಾ ಪ್ರಯತ್ನಗಳನ್ನು ಮಾಡಿ ಯಶಸ್ವಿಯಾದ ಪಾಕಿಸ್ತಾನ ಈಗ ತನ್ನ ಉದ್ಧಟತನವನ್ನು ಸಮರ್ಥಿಸಲು ಹೊಸ ದಾರಿ ಹುಡುಕಲಾರಂಭಿಸಿದೆ. ಪಾಕಿಸ್ತಾನ ಒಂದು ನ್ಯೂಕ್ಲಿಯಾರ್ ಶಕ್ತಿ ಎಂಬುದನ್ನು ಮರೆಯದಿರಿ ಎಂದು ಭಾರತಕ್ಕೆ ಪಾಕಿಸ್ತಾನದ ಎನ್.ಎಸ್.ಎ ಸರ್ತಾಜ್ ಅಝಿಝ್ ಪರೋಕ್ಷ ಎಚ್ಚರಿಕೆ ಕೊಟ್ಟಿದ್ದಾರೆ.
ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಪರೋಕ್ಷ ಎಚ್ಚರಿಕೆ ನೀಡುತ್ತ ಅಝಿಝ್, 'ಮೋದಿಯವರ ಭಾರತ ಪ್ರಾದೇಶಿಕ ದೊಡ್ಡಣ್ಣ (ಸುಪರ್ ಪವರ್) ಎನ್ನುವಂತೆ ವರ್ತಿಸುತ್ತಿದೆ. ಪಾಕಿಸ್ತಾನ ಒಂದು ಪರಮಾಣು ಅಸ್ತ್ರಗಳನ್ನು ಹೊಂದಿದ ದೇಶ ಎಂಬುದನ್ನು ಮರೆಯದಿರಿ ಮತ್ತು ತನ್ನನ್ನು ತಾನು ರಕ್ಷಿಸುವ ಸಾಮರ್ಥ್ಯ ಪಾಕಿಸ್ತಾನ ಹೊಂದಿದೆ' ಎಂದಿದ್ದಾರೆ.
ಭಾನುವಾರ ಉಭಯ ದೇಶಗಳ ನಡುವೆ ನಿಗದಿಯಾಗಿದ್ದ ಎನ್.ಎಸ್.ಎ. ಸ್ಥರದ ಮಾತುಕತೆಯನ್ನು ದಾರಿ ತಪ್ಪಿಸಲು ಪಾಕಿಸ್ತಾನ ಎಲ್ಲಾ ಪ್ರಯತ್ನಗಳನ್ನೂ ಮಾಡಿತ್ತು. ಭಯೋತ್ಪಾದನೆ ವಿಚಾರದ ಬಗ್ಗೆ ಮಾತ್ರ ಮಾತುಕತೆ ನಡೆಸಲಾಗುವುದು ಎಂಬ ಷರತ್ತಿಗೆ ಮೊದಲೇ ಒಪ್ಪಿದ್ದ ಪಾಕಿಸ್ತಾನ ನಂತರ ಪಾಕ್ ಸೇನೆ ಹಾಗೂ ಐ.ಎಸ್.ಐ. ತಾಳಕ್ಕೆ ಕುಣಿಯಲಾರಂಭಿಸಿತು. ಅಲ್ಲದೆ ಪಾಕಿಸ್ತಾನ ಪರವಾಗಿರುವ ಕಾಶ್ಮೀರಿ ಪ್ರತ್ಯೇಕತಾವಾದಿಗಳೊಡನೆ ಮಾತುಕತೆ ನಡೆಸಲು ಮುಂದಾಯಿತು. ಇದರಿಂದ ಕುಪಿತಗೊಂಡ ಭಾರತ, 'ಮಾತುಕತೆ ನಮ್ಮೊಡನೆ ಅಥವಾ ಪ್ರತ್ಯೇಕತಾವಾದಿಗಳೊಡನೆ - ಎರಡೂ ಸಾಧ್ಯವಿಲ್ಲ' ಎಂದು ಸ್ಪಷ್ಟ ಮಾತುಗಳಲ್ಲಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿತು.
ತನ್ನ ಉದ್ಧಟತನಕ್ಕೆ ಮೋದಿ ಸರಕಾರ ಸೊಪ್ಪು ಹಾಕುವುದಿಲ್ಲ ಎಂದು ಅರಿತ ಪಾಕಿಸ್ತಾನ ಕೊನೆ ಘಳಿಗೆಯಲ್ಲಿ ಮಾತುಕತೆ ರದ್ದುಗೊಳಿಸಿತು.
ಎನ್.ಎಸ್.ಎ. ಮಾತುಕತೆ ವೇಳೆ ಮುಂಬೈ ದಾಳಿ ಹಾಗೂ ಪಾಕಿಸ್ತಾನದಲ್ಲಿ ನೆಲೆಸಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಬಗ್ಗೆ ಮಹತ್ವದ ಪುರಾವೆಗಳನ್ನು ಭಾರತ ಪಾಕಿಸ್ತಾನಕ್ಕೆ ಕೊಡುವುದು ಸ್ಪಷ್ಟವಾಗಿತ್ತು. ತನ್ನ ದುಷ್ಕೃತ್ಯಗಳು ಬಯಲಾಗುತ್ತದೆ ಎಂದರಿತ ಪಾಕಿಸ್ತಾನ ಹಲವಾರು ಕ್ಯಾತೆಗಳನ್ನು ತೆಗೆಯಲಾರಂಭಿಸಿತು. ಅಂತೂ ಮಾತುಕತೆ ರದ್ದಾಗುವಂತೆ ನೋಡಿಕೊಂಡಿತು.
ಮಾತುಕತೆ ರದ್ದುಗೊಳಿಸಿದ ಪಾಕಿಸ್ತಾನ ತನ್ನ ಮೂರ್ಖತನದ ಪ್ರದರ್ಶನಕ್ಕೆ ಈಗ ಅಮೆರಿಕ ಸೇರಿದಂತೆ ವಿಶ್ವ ಮಟ್ಟದಲ್ಲಿ ಟೀಕೆಗೆ ಗುರಿಯಾಗಿದ್ದು ತನ್ನ ನಡೆತೆಯನ್ನು ಸಮರ್ಥಿಸಲು ಹೆಣಗಾಡುತ್ತಿದೆ. ಅದ್ದರಿಂದ ಎಂದಿನಂತೆ ಭಾರತದ ಮೇಲೆ ಗೂಬೆ ಕೂರಿಸುವ ಪ್ರಯತ್ನಕ್ಕೆ ಕೈಹಾಕಿದೆ.