ವಾಷಿಂಗ್ಟನ್ : ಭಯೋತ್ಪಾದನೆ ನಿಗ್ರಹಕ್ಕೆ ಭಾರತ ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ಭಾರತ ಮತ್ತು ಅಮೆರಿಕ ಸಹಕಾರ ಮುಂದುವರಿಯಲಿದೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ತಿಳಿಸಿದ್ದಾರೆ.
ವಾಷಿಂಗ್ಟನ್ನಲ್ಲಿ ಅಮೆರಿಕ ರಕ್ಷಣಾ ಸಚಿವ ಆಶ್ಟನ್ ಕಾರ್ಟರ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಯೋತ್ಪಾದನೆ ವಿಷಯವನ್ನು ಉಭಯ ದೇಶಗಳು ಗಂಭೀರವಾಗಿ ಪರಿಗಣಿಸಿವೆ ಎಂದು ಹೇಳಿದ್ದಾರೆ.
ನಮ್ಮ ನೆರೆಹೊರೆಯವರಲ್ಲಿ ಆತಂಕವಾದವನ್ನು ನಿರ್ಮೂಲನೆ ಮಾಡುವ ಭಾರತದ ಯತ್ನಗಳಿಗೆ ಅಮೆರಿಕ ನೀಡುತ್ತಿರುವ ಸಹಕಾರ-ಬೆಂಬಲವನ್ನು ಶ್ಲಾಘಿಸಿದ ಸಚಿವರು, ನಮ್ಮ ಮುಕ್ತ ಮತ್ತು ವೈವಿಧ್ಯಮಯ ಸಮಾಜಗಳು ಶಾಂತಿಗೆ ಬದ್ಧವಾಗಿವೆ. ಆದಾಗ್ಯೂ ನಾವು ಭಯೋತ್ಪಾದನೆಯನ್ನು ಎದುರಿಸುವಾಗ, ರಾಜಿ ಪ್ರಶ್ನೆಯೇ ಉದ್ಭವಿಸದು ಎಂದು ಅಮೆರಿಕ ಹೇಳಿರುವುದಾಗಿ ತಿಳಿಸಿದರು.
ಈ ನಡುವೆ ಭಾರತ-ಅಮೆರಿಕ 2 ಬಿಲಿಯನ್ ಡಾಲರ್ ಗೂ ಅಧಿಕ ಮಹತ್ವದ ರಕ್ಷಣಾ ಪರಿಕರ ವಿನಿಮಯ ಒಪ್ಪಂದಕ್ಕೆ ಸಹಿ ಹಾಕಿವೆ. ಈ ಮಹತ್ವದ ಒಪ್ಪಂದದಿಂದಾಗಿ ಭಾರತ ಮತ್ತು ಅಮೆರಿಕ ದೇಶಗಳ ರಕ್ಷಣಾ ಪರಿಕರಗಳನ್ನು ಸುಲಭವಾಗಿ ವಿನಿಮಯ ಮಾಡಿಕೊಳ್ಳಲು ನೆರವಾಗಲಿದೆ.
ಮೇಕ್ ಇನ್ ಇಂಡಿಯಾ ಯೋಜನೆ ಅಡಿಯಲ್ಲಿ ಭಾರತಕ್ಕೆ ರಕ್ಷಣಾ ತಂತ್ರಜ್ಞಾನಗಳ ಹಸ್ತಾಂತರಕ್ಕೆ ಅಮೆರಿಕ ಸಿದ್ಧವಿದ್ದು, ಅಮೆರಿಕದ ರಕ್ಷಣಾ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡಲು ಸಿದ್ಧವಿರುವುದಾಗಿ ಉಭಯ ನಾಯಕರು ಸ್ಪಷ್ಟಪಡಿಸಿದ್ದಾರೆ.