ನವದೆಹಲಿ : ಭಾರತದ ಭೂಪಟದಲ್ಲಿ ಇನ್ನು ಮುಂದೆ ಪಾಕ್ ಆಕ್ರಮಿತ ಕಾಶ್ಮೀರವನ್ನು (ಪಿಓಕೆ) ಹಾಗೂ ಅರುಣಾಚಲ ಪ್ರದೇಶವನ್ನು ಭಾರತದ ಭೂಭಾಗವಾಗಿ ತೋರಿಸದಿದ್ದರೆ ಅವರಿಗೆ ಏಳು ವರ್ಷಗಳ ಜೈಲು ಶಿಕ್ಷೆ ಮತ್ತು ಒಂದು ಕೋಟಿ ರೂ.ದಂಡ ವಿಧಿಸಲಾಗುವುದು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಸರ್ಕಾರ ಈ ಕ್ರಮವನ್ನು ಕಾನೂನು ಬದ್ಧಗೊಳಿಸುವ ಮಸೂದೆಯನ್ನು ಸಂಸತ್ತಿನಲ್ಲಿ ಶೀಘ್ರವೇ ಮಂಡಿಸಲು ಚಿಂತನೆ ನಡೆಸಿದೆ.
ಈ ಮಸೂದೆಯು ಕಾಯಿದೆಯಾಗಿ ಜಾರಿಗೆ ಬಂದಾಗ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಬಾಹ್ಯಾಕಾಶ ಅಥವಾ ಬಾನೆತ್ತರದ ವೇದಿಕೆಗಳ ಮೂಲಕ ಭಾರತದ ಭೂಪಟದ ಬಿಂಬವನ್ನು ಸೆರೆಹಿಡಿಯಲು, ಅದನ್ನು ಸಾರ್ವಜನಿಕವಾಗಿ ವಿತರಿಸಲು ಮತ್ತು ಪ್ರಚುರಪಡಿಸಲು ಕೇಂದ್ರ ಸರ್ಕಾರದ ಸಂಬಂಧಿತ ಇಲಾಖೆಯ ಅಧಿಕಾರಿಗಳಿಂದ ಪರವಾನಿಗೆ ಮತ್ತು ಪೂರ್ವಾನುಮತಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕಾಗುತ್ತದೆ.
ಕೇಂದ್ರ ಸರಕಾರವು ಮಂಡಿಸಲು ಉದ್ದೇಶಿಸಿರುವ ಭೌಗೋಳಿಕ ಮಾಹಿತಿ ನಿಯಂತ್ರಣ ಮಸೂದೆಯು ಭಾರತದ ಭದ್ರತೆ, ಸಾರ್ವಭೌಮತೆ ಮತ್ತು ಸಮಗ್ರತೆಯನ್ನು ಕಾಪಿಡುವ ಉದ್ದೇಶ ಹೊಂದಿದೆ.
ಇದು ಕಾಯಿದೆಯಾಗಿ ಜಾರಿಗೆ ಬಂದಾಗ ಈಗ ಭಾರತದಲ್ಲಿ ಚಾಲ್ತಿಯಲ್ಲಿರುವ ಗೂಗಲ್ ಮ್ಯಾಪ್ಸ್ ಅಥವಾ ಗೂಗಲ್ ಅರ್ತ್ ಮೊದಲಾದ ಆನ್ಲೈನ್ ವೇದಿಕೆಯಲ್ಲಿನ ಜಾಲ ತಾಣಗಳು ಕೇಂದ್ರ ಸರಕಾರದಿಂದ ಲೈಸನ್ಸ್ ಪಡೆಯುವುದು ಕಡ್ಡಾಯವಾಗುತ್ತದೆ.