ನವದೆಹಲಿ : ಸಮಾಜವಾದಿ ಪಕ್ಷದ ಮಾಜಿ ನಾಯಕ ಅಮರ್ ಸಿಂಗ್, ಪುನಃ ಸಮಾಜವಾದಿ ಪಕ್ಷ ಸೇರ್ಪಡೆಗೊಳ್ಳುವುದರ ಬಗ್ಗೆ ಬಿತ್ತರವಾಗುತ್ತಿದ್ದ ವರದಿಗಳನ್ನು ನಿರಾಕರಿಸಿದ್ದಾರೆ. ಮತ್ತೆ ಸಮಾಜವಾದಿ ಪಕ್ಷ ಸೇರುವುದಿಲ್ಲ ಎಂದು ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ.
ಆ.19ರಂದು ಅಮರ್ ಸಿಂಗ್ ಮುಲಾಯಂ ಸಿಂಗ್ ಯಾದವ್ ಅವರನ್ನು ಭೇಟಿ ಮಾಡಿದ್ದ ಹಿನ್ನೆಲೆಯಲ್ಲಿ, ಅಮರ್ ಸಿಂಗ್ ಸಮಾಜವಾದಿ ಪಕ್ಷ ಸೇರ್ಪಡೆಯಾಗುವ ಸಾಧ್ಯತೆ ಇದೆ ಎಂದು ವರದಿ ಪ್ರಕಟಿಸಲಾಗಿತ್ತು. ವರದಿಗಳನ್ನು ಅಲ್ಲಗಳೆದಿರುವ ಅಮರ್ ಸಿಂಗ್, ಎಸ್.ಪಿ ಸೇರುವುದಿಲ್ಲ ಎಂದಿದ್ದಾರೆ. ಒಂದು ಕಾಲದ ತಮ್ಮ ಗೆಳೆಯ ಮುಲಾಯಂ ಸಿಂಗ್ ಯಾದವ್ ಅವರೊಂದಿಗಿನ ಭೇಟಿ ಸೌಹಾರ್ದಯುತ ಹಾಗೂ ಅನೌಪಚಾರಿಕ ಎಂದಿದ್ದಾರೆ.
ಕಳೆದ ವಾರ ಸ್ನೇಹಿತರ ದಿನಾಚರಣೆಯಲ್ಲಿ ಮುಲಾಯಂ ಸಿಂಗ್ ಯಾದವ್ ತಮ್ಮ ಹಳೆ ಗೆಳೆಯ ಅಮರ್ ಸಿಂಗ್ ಅವರೊಂದಿಗೆ ವೇದಿಕೆ ಹಂಚಿಕೊಂಡು ಅಚ್ಚರಿ ಮೂಡಿಸಿದ್ದರು. ಅಂದಿನಿಂದಲೂ ಅಮರ್ ಸಿಂಗ್ ಎಸ್.ಪಿ ಸೇರುವ ಬಗ್ಗೆ ವದಂತಿ ಹಬ್ಬಿದೆ. ಪಕ್ಷವಿರೋಧಿ ಚಟುವಟಿಕೆ ನಡೆಸಿದ್ದರ ಕಾರಣ ಅಮರ್ ಸಿಂಗ್ ಅವರನ್ನು 2010ರಲ್ಲಿ ಮುಲಾಯಂ ಸಿಂಗ್ ಯಾದವ್ ಪಕ್ಷದಿಂದ ಉಚ್ಛಾಟಿಸಿದ್ದರು.
ಅಮರ್ ಸಿಂಗ್, ಉತ್ತರ ಪ್ರದೇಶ ಸಚಿವ, ಮುಲಾಯಂ ಸಿಂಗ್ ಯಾದವ್ ಆಪ್ತ ಆಜಂ ಖಾನ್ ಅವರ ವಿರೋಧಿಯಾಗಿದ್ದಾರೆ.