ಲಖ್ನೌ : 'ಸಮಾಜವಾದಿ ಪಕ್ಷ'(ಎಸ್.ಪಿ)ದ ಮುಖಂಡ ಆಜಂ ಖಾನ್ ಮುಲಾಯಂ ಸಿಂಗ್ ಯಾದವ್ ಅವರಿಗೆ ಆಪ್ತ ಎಂಬುದು ಗೊತ್ತಿರುವ ಸತ್ಯ. ಆದರೆ ಇದೇ ಆಜಂ ಖಾನ್, ಮುಲಾಯಂ ಸಿಂಗ್ ಯಾದವ್ ಅವರನ್ನು ಆಕ್ಷೇಪಾರ್ಹ ಪದಗಳಿಂದ ನಿಂದಿಸಿದ್ದಾರೆ.
ಉತ್ತರ ಪ್ರದೇಶದ ರಾಮ್ ಪುರದಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡುತ್ತಿದ್ದ ವೇಳೆ, ಆಜಂ ಖಾನ್, ಮುಲಾಯಂ ಸಿಂಗ್ ಅವರನ್ನು ನಪುಂಸಕ ಎಂದು ನಿಂದಿಸಿದ್ದಾರೆ. ಎಸ್.ಪಿ ಮುಖ್ಯಸ್ಥ ಮುಲಾಯಂ ಸಿಂಗ್ ರನ್ನು ನಿಂದಿಸಿರುವ ಆಜಂ ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. (ಆಜಂ ಖನ್ ಭಾಷಣಃ https://www.youtube.com/watch?v=NMkwjRTzkoM#t=47)
"2-3ವರ್ಷಗಳಲ್ಲಿ ರಾಮ್ ಪುರವೂ ಛತ್ತೀಸ್ ಗಢದಂತೆ ಅಭಿವೃದ್ಧಿ ಹೊಂದಲಿದೆ. ಈವರೆಗೂ ರಾಮ್ ಪುರದಲ್ಲಿ ನಡೆದಿರುವ ಅಭಿವೃದ್ಧಿಗೆ ಮುಲಾಯಂ ಸಿಂಗ್ ಯಾದವ್ ಅವರೇ ಕಾರಣ ಎಂದು ಹೇಳಲಾಗುತ್ತಿದೆ. ಆದರೆ ಉತ್ತರ ಪ್ರದೇಶದ ಅಂಬೇಡ್ಕರ್ ನಗರ ಜಿಲ್ಲೆಯ ತಂಡಾದಲ್ಲಿ ಮುಲಾಯಂ ಸಿಂಗ್ ಪೌರುಷ ಎಲ್ಲಿ ಅಡಗಿತ್ತು ಎಂದು ಪ್ರಶ್ನಿಸಿದ್ದಾರೆ. ರಾಮ್ ಪುರದಲ್ಲಿ ಮಾತ್ರ ಪೌರುಷ ಪ್ರದರ್ಶಿಸುವ ಮುಲಾಯಂ ಸಿಂಗ್ ಉತ್ತರ ಪ್ರದೇಶದ ಉಳಿದ ಜಿಲ್ಲೆಗಳಲ್ಲಿ ನಪುಂಸಕ ಎಂಬುದು ಸಾಬೀತಾಗಿದೆ ಎಂದು ಟೀಕಿಸಿದ್ದಾರೆ. ಮುಲಾಯಂ ಸಿಂಗ್ ಆಪ್ತರ ಅಣಿಮುತ್ತುಗಳನ್ನು ಯೂಟ್ಯೂಬ್ ನಲ್ಲಿ ಈ ವರೆಗೂ 19,000 ಜನ ವೀಕ್ಷಿಸಿದ್ದಾರೆ. ಆಜಂ ಖಾನ್ ರಾಮ್ ಪುರ ವಿಧಾನಸಭಾ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಸ್ನೇಹಿತರ ದಿನಾಚರಣೆ ಅಂಗವಾಗಿ ಮುಲಾಯಂ ಸಿಂಗ್ ಯಾದವ್ ತಮ್ಮ ಹಳೇ ಗೆಳೆಯ ಅಮರ್ ಸಿಂಗ್ ಅವರೊಡನೆ ಕಾಣಿಸಿಕೊಂಡು ಸುದ್ದಿಯಾಗಿದ್ದರು. ಉತ್ತರ ಪ್ರದೇಶದ ಸಚಿವ ಆಜಂ ಖಾನ್ ಅವರ ಬದ್ಧವೈರಿ ಅಮರ್ ಸಿಂಗ್ ಅವರನ್ನು ಈ ಹಿಂದೆ ಮುಲಾಯಂ ಸಿಂಗ್ ಯಾದವ್ ಎಸ್.ಪಿಯಿಂದ ಉಚ್ಛಾಟಿಸಿದ್ದರು.