ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್
ವಾಸ್ತು ಶಾಸ್ತ್ರವನ್ನು ವಿಪರೀತ ನಂಬುವ ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಈಗ ಪ್ರಸಿದ್ಧ ವಾಸ್ತು ತಜ್ಞ ಸುದ್ದಾಲ ಸುಧಾಕರ ತೇಜ ಅವರನ್ನು ಸರ್ಕಾರದ ವಾಸ್ತು ಸಲಹೆಗಾರರನ್ನಾಗಿ ನೇಮಿಸಿಕೊಂಡಿದ್ದಾರೆ. ಈ ಮೂಲಕ ಸರ್ಕಾರಿ ಕೆಲಸಕ್ಕೆ ವಾಸ್ತು ಸಲಹೆಗಾರನನ್ನು ನೇಮಿಸಿಕೊಂಡ ಮೊದಲ ಮುಖ್ಯಮಂತ್ರಿಯಾಗಿದ್ದಾರೆ.
ಸರ್ಕಾರಿ ಕಟ್ಟಡಗಳ ವಾಸ್ತು ವಿನ್ಯಾಸದಲ್ಲಿ ಸಲಹೆ ಸೂಚನೆಗಳನ್ನು ಕೊಡುವುದರ ಜತೆಗೆ ಯೋಜನೆಗಳಿಗೆ ವಾಸ್ತು ಅನುಮತಿ ಕೊಡುವುದು, ಕಡತಗಳಿಗೆ ಸಹಿ ಹಾಕಲು ಮುಹೂರ್ತ ಹುಡುಕುವುದು, ಮಾತುಕತೆಗೆ ಅಧಿಕಾರಿಗಳು ವಾಸ್ತು ಪ್ರಕಾರ ಎಲ್ಲಿ ಕುಳಿತುಕೊಳ್ಳಬೇಕೆಂದು ಸಲಹೆ ನೀಡುವುದು ಇತ್ಯಾದಿ ಹೊಣೆಗಳು ಸುಧಾಕರ ತೇಜ ಅವರಿಗಿದೆ.
ಅಲ್ಲದೇ ಸಂಪುಟ ಸಭೆ ನಡೆಯುವಾಗ ಯಾರು ಎಲ್ಲಿ ಕುಳಿತುಕೊಳ್ಳಬೇಕೆಂದು ನಿರ್ಧರಿಸುವುದು ವಾಸ್ತು ತಜ್ಞ. ಸಭೆ ಸಮಾರಂಭಗಳಲ್ಲಿ ಮುಖ್ಯಮಂತ್ರಿ ಯಾವ ದಿಕ್ಕಿಗೆ ನಿಂತು ಭಾಷಣ ಮಾಡಬೇಕು ಎಂದು ವಾಸ್ತು ತಜ್ಞರು ಸಲಹೆ ನೀಡಬೇಕು.
ರಾಜ್ಯದ ರಸ್ತೆಗಳೆಲ್ಲ ವಾಸ್ತು ಪ್ರಕಾರವೇ ನಿರ್ಮಾಣವಾಗುವುದನ್ನು ತೇಜ ಖಾತರಿ ಪಡಿಸಬೇಕು. ರಾಜ್ಯದ ಎಲ್ಲ ಉದ್ಯಾನಗಳು, ಕೆರೆದಂಡೆಗಳು, ಹೊಳೆದಂಡೆಗಳು ಮತ್ತು ಸರ್ಕಾರಿ ಕಟ್ಟಡಗಳನ್ನು ವಾಸ್ತು ಪ್ರಕಾರ ಬದಲಾಯಿಸುವ ದೊಡ್ಡ ಜವಾಬ್ದಾರಿ ತೇಜ ಮೇಲಿದೆ.