ಬಾಳೆ ಎಲೆಗಳನ್ನು ತಿಂದು, ಕತ್ತರಿಸಿ, ಸುರುಳಿಸುತ್ತಿಕೊಂಡು ಅದರಲ್ಲಿ ಅವಿತುಕೊಳ್ಳುವ (Banana skipper) ಹುಳು ಬಾಳೆ ಕೃಷಿಗೆ ಈಗ ಹೊಸ ಸಮಸ್ಯೆಯಾಗಿದೆ. ಈ ಸಮಸ್ಯೆಗೆ ವೈಜ್ನಾನಿಕವಾಗಿ ಪರಿಹಾರ ಕಂಡುಕೊಳ್ಳಲಾಗಿದೆ.
ಈ ಕೀಟವು ಮೊಟ್ಟೆಗಳನ್ನು ಎಲೆಯ ತಳಭಾಗದಲ್ಲಿ ಇಡುತ್ತದೆ. ಮೊಟ್ಟೆಯಿಟ್ಟ 5 ರಿಂದ 8 ದಿನಗಳಲ್ಲಿ ಮರಿ ಹುಳು ಹೊರಗೆ ಬಂದು ಎಲೆಯನ್ನು ತಿನ್ನಲು ಪ್ರಾರಂಭಿಸುತ್ತದೆ. ಈ ಹುಳುಗಳು ಬಿಳಿಬಣ್ಣದಿಂದ ಕೂಡಿದ್ದು, ಇದರ ತಲೆ ಕಪ್ಪು ಬಣ್ಣದ್ದಾಗಿದೆ. ಈ ಮರಿ ಹುಳುವಿನ ಹಂತವು 25 ರಿಂದ 30 ದಿನಗಳವರೆಗೆ ಇದ್ದು, ಈ ಹಂತದಲ್ಲಿ ಬಾಳೆಎಲೆಗಳನ್ನು ತಿಂದು ನಾಶಪಡಿಸುತ್ತದೆ. ಅನಂತರ ಈ ಮರಿ ಹುಳವು ಬಾಳೆ ಎಳೆಯನ್ನು ಸುರುಳಿಸುತ್ತಿಕೊಂಡು ಕೋಶಾವಸ್ಥೆಗೆ ಹೋಗಿ 10 ದಿನಗಳಲ್ಲಿ ಫ್ರೌಢ ಚಿಟ್ಟೆಯಾಗಿ ಹೊರಬರುತ್ತದೆ.
ಫ್ರೌಢಚಿಟ್ಟೆಯು ಕಡುಕಂದು ಬಣ್ಣದಿಂದ ಕೂಡಿದ್ದು ಚಿಟ್ಟೆಯು ಒಂದು ಗಿಡದಿಂದ ಇನ್ನೊಂದು ಗಿಡಕ್ಕೆ ಹಾರುತ್ತದೆ. ಈ ರೀತಿ ಈ ಕೀಟದ ಜೀವನಾವಸ್ಥೆಯಿದ್ದು, ಕೀಟ ಭಾದೆಯು ಇಡೀ ತೋಟಕ್ಕೆ ಪಸರಿಸಿ ತೋಟವನ್ನು ನಾಶಪಡಿಸುವ ಸಾದ್ಯತೆಯಿರುತ್ತದೆ.
ನಿಯಂತ್ರಣ: ಈ ಕೀಟ ಭಾದೆ ಗೊಳಗಾದ ಎಲೆಗಳು ಮತ್ತು ಸುರುಳಿ ಸುತ್ತಿಕೊಂಡು ನೇತಾಡುತ್ತಿರುವ ಎಲ್ಲಾ ಗ್ಯಾಲರಿಗಳನ್ನು ಕೈಯಿಂದ ತೆಗೆದು ನಾಶಮಾಡಬೇಕು. ಕೀಟ ಭಾದೆಯು ಕಡಿಮೆ ಪ್ರಮಾಣದಲ್ಲಿದ್ದರೆ 2.5 ಮಿ. ಲೀ ಬೇವಿನ ಎಣ್ಣೆಯನ್ನು ಮತ್ತು ಅಂಟು ದ್ರಾವಣವನ್ನು(1/2 pack shampoo) ಪ್ರತಿ ಲೀ. ನೀರಿಗೆ ಬೆರೆಸಿ ಗಿಡಗಳಿಗೆ ಸಿಂಪಡಿಸಬೇಕು. ಕೆಲವು ಪಕ್ಷಿಗಳು (ಕಾಗೆ, ಗೀಜಗ) ಮರಿಹುಳುಗಳನ್ನು ತಿನ್ನುವುದು ಕಂಡುಬಂದಿದ್ದು ಇವುಗಳನ್ನು ಬಾಳೆ ತೋಟಕ್ಕೆ ಆಕರ್ಷಿಸಬೇಕು. ಕೀಟದ ಭಾದೆಯ ತೀವ್ರತೆಯನ್ನು ಗಮನಿಸಿ 2.0 ಮಿ. ಲೀ. ಬ್ಯಾಸಿಲಸ್ ತುರೆಂಜೆನಿಸಿಸ್ ಅಥವ 1 ಮಿ. ಲೀ. ಬೇವೆರಿಯಾ ಬಾಸಿಯಾನ ಜೈವಿಕ ಪೀಡೆನಾಶಕವನ್ನು ಪ್ರತಿ ಲೀ. ನೀರಿಗೆ ಬೆರೆಸಿ ಗಿಡಗಳಿಗೆ ಸಿಂಪಡಿಸಬೇಕು. ಈ ಕೀಟದ ಭಾದೆ ತೀವ್ರವಾಗಿದ್ದಲ್ಲಿ 2.5 ಮಿ. ಲೀ, ಕ್ಲೋರೊಪೈರಿಫಾಸ್ ಅಥವಾ 2.0 ಮಿ. ಲೀ, ಪ್ರೋಫೆನೋಪಾಸ್ ಅಥವಾ 2.0 ಮಿ. ಲೀ, ಕ್ವಿನಾಲ್ಪಾಸ್ 2 ಮಿ. ಲೀ Dimethioate ಯಾವುದಾದರೊಂದು ಕೀಟನಾಶಕವನ್ನು ಪ್ರತೀ ಲೀಟರ್ ನೀರಿಗೆ ಬೆರೆಸಬೇಕು. ಪ್ರತಿ 10 ಲೀ. ನೀರಿಗೆ 5 ಮಿ.ಲೀ ಅಂಟನ್ನು ಬೆರೆಸಿ ಸಿಂಪರಣೆ ಮಾಡಬಹುದು.
ವಿಶೇಷ ಸೂಚನೆ;. ಮರಿ ಹುಳುವಿನ ಚರ್ಮ ಹಾಗೂ ಬಾಳೆ ಎಲೆಯ ಮೇಲೆ ಮೇಣದಂತಹ ಪದರ (Surface)) ಇರುವುದರಿಂದ ಕೀಟನಾಶಕ ಸೊಂಪರಣಿ ಮಾಡುವಾಗ ಅಂಟು (Sticking Agent) ಕಡ್ಡಾಯವಾಗಿ ಬಳಸಬೇಕು. ಇತ್ತೀಚಿಗೆ ಭಾದೆಗೊಳಗಾದ ತೋಟಕ್ಕೆ ಬೇಟಿನೀಡಿದಾಗ ಅಲ್ಲಲ್ಲಿ ಹುಳುಗಳಿಗೆ ಶ್ರೀಲಿಂದ್ರದ ರೋಗ ಬಂದಿರುವುದು ಕಂಡುಬಂದಿದೆ ಇದರಿಂದ ಜೈವಿಕ ನಿಯಂತ್ರಣ ಸಾದ್ಯವಿದೆ. ತೀವ್ರ ಹಾನಿಕಂಡುಬಂದಲ್ಲಿ ಕೀಟ ನಾಶಕವನ್ನು ಬಳಸಿ ಹತೋಟಿ ಮಾಡುವುದು ಅನಿರ್ವಾಯ, ಆದರೆ ಬಾಳೆ ಹಣ್ಣುಗಳನ್ನು ನೇರವಾಗಿ ಉಪಯೋಗಿಸುವುದರಿಂದ ಕೀಟನಾಶಕವನ್ನು ಬಳಸುವಾಗ ಜಾಗ್ರತೆವಹಿಸುವುದು ಅತ್ಯಗತ್ಯ.
ಹೆಚ್ಚಿನ ಮಾಹಿತಿಗಾಗಿ ವಲಯ ಸಂಶೋದನಾ ಕೇಂದ್ರ ಬ್ರಹ್ಮಾವರ- 9448154542 (ಡಾ//ಎಸ್. ಯು. ಪಾಟೀಲ್), ತೋಟಗಾರಿಕೆ ಇಲಾಖೆ, ತೋಟಗಾರಿಕಾ ಮಾಹಿತಿ ಹಾಗೂ ಸಲಹಾ ಕೇಂದ್ರ, ಉಡುಪಿ (0820-2520590), ಕೃಷಿ ವಿಜ್ಞಾನ ಕೇಂದ್ರ, ಉಡುಪಿ- 0820-2563923, ಪ್ರತೀ ತಾಲೂಕಿನಲ್ಲಿರುವ ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಬಹುದು.