ಸಾಂದರ್ಭಿಕ ಚಿತ್ರ (ಚಿತ್ರಕೃಪೆಃಐಪಿಎಎಸ್ ನ್ಯೂಸ್)
(ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರ ವಿರುದ್ಧ ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ನಕಲಿ ಸಿಡಿ, ಬ್ಲ್ಯಾಕ್ ಮೇಲ್, ಮಿಥ್ಯಾರೋಪ ಸೇರಿದಂತೆ ಹಲವಾರು ಷಡ್ಯಂತ್ರಗಳು ನಡೆಯುತ್ತಿರುವುದು ಜನಸಾಮಾನ್ಯರಿಗೂ ತಿಳಿದ ವಿಚಾರ. ಆದರೆ ಹಲವರಿಗೆ, ಅದ್ಯಾಕೆ ಶ್ರೀಗಳ ಮೇಲೆ ಮಾತ್ರ ಷಡ್ಯಂತ್ರ ನಡೆಯುತ್ತಿದೆ? ಎನ್ನುವ ಸಂದೇಹ ಇರಬಹುದು. ಶ್ರೀಗಳನ್ನು ವಿರೋಧಿಸಲು ಹಲವರಿಗೆ ಹಲವಾರು ಕಾರಣಗಳಿರುವುದು ನಮ್ಮ ತಂಡ ಕಂಡುಕೊಂಡ ಸತ್ಯ. ಶ್ರೀಗಳ ವಿರುದ್ಧ ದೊಡ್ಡಮಟ್ಟಿನ ವಿರೋಧ ಅಂಬಾರಗುಡ್ಡ ಪ್ರಕರಣದಿಂದ ಆರಂಭವಾಯಿತು ಎನ್ನಬಹುದು. ಇದನ್ನು ಜನಸಾಮಾನ್ಯರಿಗೆ ತಲುಪಿಸುವ ಪ್ರಯತ್ನ ನಮ್ಮದು-ಸಂ.)
ಪಶ್ಚಿಮ ಘಟ್ಟದ ಎರಡನೇ ಅತಿ ಎತ್ತರ ಬೆಟ್ಟವಾದ ಕೊಡಚಾದ್ರಿಯ ಇನ್ನೊಂದು ಮಗ್ಗುಲಲ್ಲಿ ಇರುವ ಗುಡ್ಡ ಅಂಬಾರಗುಡ್ಡ. 2003ರ ಕೊನೆಗೆ ಜನರೆಲ್ಲಾ ಚುಣಾವಣೆಯ ಭರಾಟೆಯಲ್ಲಿರುವಾಗಲೇ ಆಂಧ್ರಮೂಲದ ಕಂಪನಿಯೊಂದು ಗಣಿಗಾರಿಕೆ ನಡೆಸಿ ಗುಡ್ಡದ ತಲೆಯನ್ನು ಬೋಳಿಸಿಯಾಗಿತ್ತು. ಜಗತ್ತಿನ ಅತಿಸೂಕ್ಷ್ಮ ಪ್ರದೇಶಗಳಲ್ಲೊಂದಾದ ಅಂಬಾರಗುಡ್ಡ ಜೀವ ವೈವಿಧ್ಯದ ಆಗರ. ಇಂತಹ ಗುಡ್ಡದ ಮಣ್ಣನ್ನು ಅಗೆದು ಮುಚ್ಚು ಹಾಕಿದಾಗ ಗೊತ್ತೇ ಆಗಿಲ್ಲ. ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರು ಮತ್ತು ಇಲ್ಲಿನ ಪರಿಸರ ಪ್ರೇಮಿಗಳು ಹೋಗುವುದು ತಡವಾಗಿದ್ದರೆ ಇನ್ನೂ ನೂರಾರು ಎಕರೆ ಕಾಡುಗಳು ಕಂಪನಿಯ ದೈತ್ಯಾಕಾರದ ಯಂತ್ರಗಳಿಂದ ನಾಶವಾಗುತ್ತಿತ್ತು. ಹಲವು ಎಕರೆ ಆಗಲೇ ನಾಶವಾಗಿತ್ತು. ರಸ್ತೆಗಾಗಿ ಮತ್ತು ಗಣಿಗಾರಿಕೆಗಾಗಿ ನೂರಾರು ಅಡಿ ಭಾರೀ ಗಾತ್ರದ ಗುಂಡಿಗಳನ್ನು ತೋಡಿ ಆ ಮಣ್ಣನ್ನು ಹಾಕಿ ಕಾಡನ್ನು ಭಾಗಶಃ ಮುಚ್ಚಲಾಗಿತ್ತು.
ಬೆಂಗಳೂರು ನಿವಾಸಿಯಾಗಿರುವ ಒಬ್ಬ ಗಣಿಮಾಲಿಕರು ಸಾಗರ ತಾಲೂಕಿನ ಮರಾಠಿಗ್ರಾಮದಲ್ಲಿ ಸ.ನಂ.116 ಮತ್ತು 2007ರಲ್ಲಿ 18 ಎಕರೆ ಜಾಗದಲ್ಲಿ ಮ್ಯಾಂಗನೀಸ್ ಗಣಿಗಾರಿಕೆ ನಡೆಸಲು 1963ರಲ್ಲಿ ಸರಕಾರದ ಅನುಮತಿ ಪಡೆದಿದ್ದರೆನ್ನಲಾಗಿದೆ. ಆಗಲೂ ಅಂಬಾರಗುಡ್ಡದಲ್ಲಿ ಪರೀಕ್ಷಾರ್ಥ ಗಣಿಗಾರಿಕೆ ನಡೆಸಿದ್ದಾರೆ. ಆಗ ಗುಣಮಟ್ಟ ಕಡಿಮೆ ಇದೆ ಎಂದು ಹಾಗೆಯೇ ಬಿಟ್ಟು ಅನುಮತಿಯನ್ನು ನವೀಕರಿಸುತ್ತಲೇ ಬಂದಿದ್ದರು. ಈಗ ಅದು ಉತ್ತಮ ಗುಣಮಟ್ಟದ್ದಾಗಿದೆ ಎಂದು 2003ರಲ್ಲಿ ಆಂಧ್ರಮೂಲದ ಕಂಪನಿಗೆ ಗಣಿಗಾರಿಕೆ ನಡೆಸಲು ಗುತ್ತಿಗೆ ನೀಡಿದ್ದರು. ಆ ಗ್ರಾಮದ ಜನರಿಗೆ ರಸ್ತೆ ಮಾಡಿಸುತ್ತೇವೆ, ಆಸ್ಪತ್ರೆ ಕಟ್ಟಿಸುತ್ತೇವೆ ಎಂಬಿತ್ಯಾದಿ ಆಮಿಷವೊಡ್ಡಿ 18 ಎಕರೆ ಗುತ್ತಿಗೆ ಪಡೆದರು ಮತ್ತು ನೂರಾರು ಎಕರೆ ಭೂಮಿಯನ್ನು ಬೇಕಾಬಿಟ್ಟಿ ಅಗೆದರು.
ವಿಷಯ ತಿಳಿದ ತಕ್ಷಣ ಧಾವಿಸಿದ್ದು ರಾಘವೇಶ್ವರ ಶ್ರೀಗಳ ಸನ್ನಿಧಿಗೆ (4.6.2004). ಶ್ರೀಗಳು ಪ್ರತ್ಯಕ್ಷ ಅಲ್ಲಿನ ಅನಾಹುತಗಳನ್ನು ವೀಕ್ಷಿಸಿ ಬಹಳ ಮರುಗಿದರು. "ಪ್ರಕೃತಿಯನ್ನು ಆರಾಧಿಸುವುದಷ್ಟೇ ನಮ್ಮ ಕೆಲಸವಲ್ಲ. ಅದರ ರಕ್ಷಣೆಯ ಹೊಣೆಯೂ ನಮ್ಮದೇ. ಅದೂ ಸಹ ದೈವೀ ಕಾರ್ಯವೇ. ಇಷ್ಟು ಅನಾಹುತವಾಗಿರುವುದು ಅಕ್ಷಮ್ಯ. ತಮ್ಮ ಶಿಷ್ಯರೆಂದೂ ಇಂಥ ಅಪರಾಧವನ್ನು ನೋಡಿ ಸುಮ್ಮನಿರಬಾರದು" ಎಂದು ಉದ್ಗರಿಸಿದರು. ಕೊಡಚಾದ್ರಿಯ ಉಳಿವಿಗಾಗಿ ರಕ್ಷಣಾಪಡೆಯೊಂದನ್ನು ರಚಿಸಿದರು. ಹೋರಾಟದ ರಣಕಹಳೆಯೂದಿದರು.
ಶ್ರೀಗಳ ಗೌರವಾಧ್ಯಕ್ಷತೆಯಲ್ಲಿ "ಕೊಡಚಾದ್ರಿ ಸಂಜೀವಿನೀ" ರಚನೆಯಾಯಿತು. ವಿಶ್ವಪರಿಸರದ ದಿನದಂದು ಮರಾಠಿಶಾಲೆಯಲ್ಲಿ ಸೇರಿದ ಸಭೆಯಲ್ಲಿ ಆ ಪ್ರದೇಶದ ಉಳಿವಿಗೆ ಎಲ್ಲಾ ಹೋರಾಟಕ್ಕೂ ಸಿದ್ಧ ಎಂದು ಜನರು ಪ್ರತಿಜ್ಞೆ ಸ್ವೀಕರಿಸಿದರು. ನಂತರ ಅರಣ್ಯ ಇಲಾಖೆಯವರು ಬಂದು ಗಣಿಗಾರಿಕೆ ಕೆಲಸ ನಿಲ್ಲಿಸಿದರು. ಗಣಿ ಕೆಲಸ ನಿರತ ವಾಹನಗಳನ್ನು ಮುಟ್ಟುಗೋಲು ಹಾಕಿದರು. ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರು ಹೋರಾಟದ ರೂಪರೇಖೆಯನ್ನು ರೂಪಿಸಿದರು. ನ್ಯಾಯಾಲಯದ ಮೂಲಕವೂ ಹೋರಾಟಕ್ಕೆ ಸೂಚಿಸಿದರು. ಶ್ರೀಗಳು ತಮ್ಮ ಪ್ರಭಾವಲಯದಲ್ಲಿ ಒತ್ತಡ ಹಾಕಿದರು. "ಹೋರಾಟದ ಮುಂಚೂಣಿಯಲ್ಲಿ ನಾವಿದ್ದೇವೆ, ಹೆದರಬೇಡಿ, ನಮ್ಮ ಹಿಂದೆ ಬನ್ನಿ, ಇದರ ಉಳಿವಿಗಾಗಿ ಯಾವ ಹೋರಾಟಕ್ಕೂ ತ್ಯಾಗಕ್ಕೂ ಸಿದ್ಧ" ಎಂದು ಘೋಷಿಸಿದರು! ಜುಲೈ 1, 2004ರಂದು ಅಂಬಾರಗುಡ್ಡ ಸಮೀಪದ ಹಳ್ಳಿಯೊಂದರಲ್ಲಿ ಗಣಿಗಾರಿಕೆಯ ವಿರುದ್ಧ ಬೃಹತ್ ಜನಜಾಗೃತಿ ಪ್ರತಿಭಟನಾ ಸಮಾವೇಶಕ್ಕೆ ಕರೆಯಿತ್ತರು. ಪರಿಸರನಾಶಕ್ಕೆ ಹೊರಟವರು ಸ್ವಾಮಿಗಳಿಗೆ ಜೀವಬೆದರಿಕೆಯನ್ನು ಹಾಕಿದರು. ಪರಿಣಾಮ ಸರ್ಕಾರವು ಶ್ರೀಗಳಿಗೆ ಗನ್ ಮ್ಯಾನ್ ರಕ್ಷಣೆ ಒದಗಿಸಿತು.
ಎಲ್ಲೆಡೆ ಸಭೆಗಳು ನಡೆದು ಗಣಿಗಾರಿಕೆಯನ್ನು ವಿರೋಧಿಸಿ ನಿರ್ಣಯಗಳಾದವು. ಜುಲೈ 1, 2004ರಂದು ಅಂಬಾರಗುಡ್ಡ ಸಮೀಪದ ಹಳ್ಳಿಯೊಂದರಲ್ಲಿ ಗಣಿಗಾರಿಕೆಯ ವಿರುದ್ಧ ಬೃಹತ್ ಜನಜಾಗೃತಿ ಪ್ರತಿಭಟನಾ ಸಮಾವೇಶ ಏರ್ಪಟ್ಟಿತ್ತು. 5 ಸಾವಿರಕ್ಕೂ ಹೆಚ್ಚು ಜನರು ಸೇರಿದ್ದರು. "ಅಂಬಾರಗುಡ್ಡ ರಕ್ಷಣೆಗೆ ನಾವು ಯಾವ ತ್ಯಾಗಕ್ಕೂ ಸಿದ್ಧ, ಜೀವಬೆದರಿಕೆಗಳಿಗೆಲ್ಲಾ ಬಗ್ಗುವವರಲ್ಲ, ಇಲ್ಲಿ ಯಾವ ಕಾರಣಕ್ಕು ಗಣಿಗಾರಿಕೆ ನಡೆಯ ಕೂಡದು" ಎಂದು ಸ್ವಾಮಿಗಳು ಗುಡುಗಿದರು. ವೃಕ್ಷಲಕ್ಷ ಆಂದೋಲನದ ನೇತಾರ ಅನಂತ ಹೆಗಡೆ ಅಶೀಸರ, ಪರಿಸರ ತಜ್ಞರುಗಳಾದ ಫ್ರೊ.ಬಿ.ಎಮ್.ಕುಮಾರಸ್ವಾಮಿ, ಡಾ. ಉಪೇಂದ್ರ ಶಣೈ, ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ, ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ, ಮಾಜಿ ಶಾಸಕ ಎಲ್.ಟಿ.ತಿಮ್ಮಪ್ಪ ಹೆಗಡೆ, ವಿವಿಧ ಜನಪ್ರತಿನಿಧಿಗಳು, ಪರಿಸರ ಕಾರ್ಯಕರ್ತರು, ಸಂಘ ಸಂಸ್ಥೆಗಳೆಲ್ಲವೂ ಸೇರಿ ಗಣಿಕಂಪನಿಗೆ ಎಚ್ಚರಿಕೆಯ ಸಂದೇಶ ರವಾನಿಸಿತು.
ಮುಂದೆ ವೃಕ್ಷಲಕ್ಷ ತಜ್ಞರ ತಂಡ ಅಂಬಾರಗುಡ್ಡ ಪ್ರದೇಶದ ಅಧ್ಯಯನ ನಡೆಸಿದ ವರದಿಯನ್ನು ಶ್ರೀಗಳಿಗೆ ನೀಡಿದರು. ಕೇಂದ್ರ ಪರಿಸರ ಮಂತ್ರಾಲಯದ ಅಧಿಕಾರಿಗಳು ಮತ್ತು ಇನ್ನಿತರ ಅಧಿಕಾರಿಗಳು ಧಾವಿಸಿದರು. ಅನಾಹುತ ನಡೆದಿದ್ದನ್ನು ಒಪ್ಪಿಕೊಂಡರು. ರಾಜ್ಯ ಹೈಕೋರ್ಟ್ ಗಣಿಗಾರಿಕೆ ನಡೆಸದಂತೆ, ಅರಣ್ಯ ರಕ್ಷಣೆ ಮಾಡುವಂತೆ ಆದೇಶಿಸಿತು. ಸದ್ಯಕ್ಕೆ ಗಣಿಗಾರಿಕೆ ನಿಂತಿತು. ದಿ.16.05.2005 ರಂದು ಈ ಪ್ರದೇಶದಲ್ಲಿ ವೃಕ್ಷಾರೋಪಣ ನಡೆಯಿತು. ಶ್ರೀಗಳ ದಿವ್ಯಸಾನ್ನಿಧ್ಯದಲ್ಲಿ ನಡೆದ ಸಭೆಯಲ್ಲಿ ಹೋರಾಟದ ನೇತೃತ್ವ ಪಡೆದ ಅನಂತ ಹೆಗಡೆಯವರನ್ನು ಸಮ್ಮಾನಿಸಿ ಆಶೀರ್ವದಿಸಿದರು.
ಸ್ವಲ್ಪ ದಿನ ಕಳೆದ ನಂತರ ಬಳ್ಳಾರಿ ಮೂಲದ ಇನ್ನೊಂದು ಕಂಪನಿ ಇದರ ಗುತ್ತಿಗೆ ಪಡೆಯಿತು. ಅವರು ಈಗಾಗಲೇ ಸಂಗ್ರಹಿಸಿರುವ ಅದಿರನ್ನು ಒಯ್ಯುತ್ತೇವೆ, ಅನುಮತಿ ಕೊಡಿ ಎಂದರು. ಒಪ್ಪಲಿಲ್ಲ. ಎಲ್ಲಾ ಪ್ರಯತ್ನ ಮಾಡಿ ವಿಫಲರಾದಾಗ ಇನ್ನೊಂದು ಕಂಪನಿ ಅದನ್ನು ವಹಿಸಿಕೊಂಡಿತು. ಆಗಿನ ಸರ್ಕಾರದ ಮಂತ್ರಿಗಳೊಬ್ಬರು ಅದರ ನೇತೃತ್ವ ವಹಿಸಿದ್ದರು. ಅವರು ಪೀಡಿಸಲಾರಂಭಿಸಿದರು. ಅನೇಕ ರೀತಿಯ ಒತ್ತಡ ಹಾಕಿದರು. ಅನುಮತಿ ಬೇಡಿದರು. ಆ ಸ್ಥಳವು ಕಂದಾಯ ಭೂಮಿಯಾದ್ದರಿಂದ ಅದೊಂದು ಸೂಕ್ಷ್ಮ ವಿಷಯವಾಗಿತ್ತು. ಯಾವಾಗಲಾದರೂ ಕೋರ್ಟುಗಳು, ಸರ್ಕಾರ ಅನುಮತಿ ಕೊಡಬಹುದೆಂಬ ಭಯ ಇದ್ದೇ ಇತ್ತು. ಅಂತೂ ತಜ್ಞರ ತಂಡಗಳು, ವಿಜ್ಞಾನಿಗಳು, ಮತ್ತಿತರೆಲ್ಲರ ಹೋರಾಟ ವರದಿಗಳು ಹಾಗು ಪಶ್ಚಿಮಘಟ್ಟ ಕಾರ್ಯಪಡೆಯ ಒತ್ತಡದ ಪರಿಣಾಮ ಈ ಗುಡ್ಡವನ್ನು ನೈಸರ್ಗಿಕ ಪರಂಪರಾಗತ ತಾಣವೆಂದು ಪ್ರಾಚ್ಯಜೀವವೈವಿಧ್ಯ ಮಂಡಳಿ ಘೋಷಿಸಿತು. ಪರಿಣಾಮವಾಗಿ ಗಣಿಗಾರಿಕೆಯಂತಹ ಅನಾಹುತಗಳು ನಡೆಯಲಾರದೆಂಬ ವಿಶ್ವಾಸ ಈಗ ಮನೆ ಮಾಡಿದ್ದು ಜನ ಭೀತಿಯಿಂದ ಮುಕ್ತರಾಗಿದ್ದಾರೆ.
ಆದರೆ ಗಣಿದಣಿಗಳು ಮಾತ್ರ ಸುಮ್ಮನಿರದೇ ನಿರಂತರವಾಗಿ ಶ್ರೀಗಳ ಮೇಲೆ ಒತ್ತಡ ಹಾಕುತ್ತಿದ್ದರು. ಇಡೀ ಗುಡ್ಡವನ್ನಲ್ಲದಿದ್ದರೂ ಬಗೆದ ಮಣ್ಣನ್ನಾದರೂ ತೆಗೆದುಕೊಂಡು ಹೋಗುತ್ತೇವೆ ಎಂದು ಆಮಿಷ ಒಡ್ಡಿದರೂ ಶ್ರೀಗಳು ಅದ್ಯಾವುದಕ್ಕೂ ಸೊಪ್ಪು ಹಾಕಲಿಲ್ಲ. ಪ್ರಕೃತಿಯನ್ನು ಉಳಿಸಲು ಕಂಕಣ ತೊಟ್ಟ ಶ್ರೀಗಳು ಯಾವ ಬೆದರಿಕೆಗೂ ಬಗ್ಗದೆ ಪ್ರಕೃತಿ ಮಾತೆಯ ಹಾಗೂ ಅದನ್ನೇ ನಂಬಿ ಬದುಕುತ್ತಿರುವ ರೈತಾಪಿ ಜನರ ರಕ್ಷಣೆಗೆ ಗಟ್ಟಿಯಾಗಿ ನಿಂತುಬಿಟ್ಟರು.
ಶ್ರೀಗಳ ವಿರುದ್ಧ ಆಗ ಆರಂಭವಾದ ವಿರೋಧಕ್ಕೆ ಹಲವು ಕೈಗಳು ಸೇರಿಕೊಂಡು ಬೃಹತ್ ರೂಪ ಪಡೆಯಲಾರಂಭವಾಯಿತು. ಮಠದ ಹಾಗೂ ಶ್ರೀಗಳ ವಿರುದ್ಧ ದೊಡ್ಡ ಮಟ್ಟಿನ ಷಡ್ಯಂತ್ರಗಳಿಗೆ ಶ್ರೀಕಾರ ಹಾಕಲಾಯಿತು. ಮುಂದೇನಾಯಿತು ಎನ್ನುವುದು ಎಲ್ಲರಿಗೂ ತಿಳಿದ ವಿಷಯ..
ಈ ಗಣಿಗಾರಿಕೆ ವಿರುದ್ದದ ಹೋರಾಟ, ಗಣಿಲಾಭಿಯ ಕಬಂಧ ಬಾಹುವಿನ ಪರಿಚಯ ಮಾಡಿದ್ದಲ್ಲದೇ ಶ್ರೀಗಳ ಸಾಮಾಜಿಕ ಬದ್ದತೆ ಹಾಗೂ ಕಳಕಳಿಯ ಪರಿಚಯವನ್ನೂ ಸಮಾಜಕ್ಕೆ ಮಾಡಿಕೊಟ್ಟಿದೆ.
(ಅಂದು ಶ್ರೀಗಳ ಹೋರಾಟದ ಕುರಿತು ವಿವಿಧ ಪತ್ರಿಕೆಗಳಲ್ಲಿ ಬಂದ ಸುದ್ದಿಯ ಲಿಂಕ್ ಗಳು ಈ ಕೆಳಗೆ ಕೊಡಲಾಗಿದೆ. ಅಲ್ಲಿ ಶ್ರೀಗಳ ನೇತೃತ್ವದಲ್ಲಿ ರಾಮಚಂದ್ರಾಪುರ ಮಠ ಸೇರಿದಂತೆ ವಿವಿಧ ಸಂಘಟನೆಗಳು ಹೋರಾಡಿದ ವರದಿ, ತಜ್ಞರ ಅಭಿಪ್ರಾಯಗಳು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಜಗತ್ತಿನ ಏಳು ಪ್ರಮುಖ ಜೀವ ವೈವಿಧ್ಯ ತಾಣಗಳಲ್ಲಿ ಒಂದಾದ ಸಹ್ಯಾದ್ರಿ ಪರ್ವತ ಶ್ರೇಣಿಯ ಒಡಲಲ್ಲಿರುವ ಅಂಬಾರಗುಡ್ಡದ ಪ್ರಾಕೃತಿಕ ಮಹತ್ವವನ್ನು ವಿವರಿಸಲಾಗಿದೆ).
wikipedia
The Hindu
Deccan Herald
blogspot
Prajavani
The Hindu
Deccan Herald
gutenberg.org