ಮುಂಗಾರು ಆರಂಭವಾಗಿ ಒಂದೂವರೆ ತಿಂಗಳಾದರೂ ದೇಶಾದ್ಯಂತ ಸಮರ್ಪಕವಾಗಿ ಮಳೆಯಾಗದ ಹಿನ್ನಲೆಯಲ್ಲಿ ಬಿತ್ತನೆ ಪ್ರಮಾಣ ಕುಸಿತವಾಗಿದೆ. ಈ ನಿಟ್ಟಿನಲ್ಲಿ ಆಹಾರಧಾನ್ಯಗಳ ಉತ್ಪಾದನೆ ಕುಸಿತವಾಗಿ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ.
ಕಬ್ಬು ಬೆಳೆಯನ್ನು ಹೊರತುಪಡಿಸಿ, ಮುಂಗಾರು ಹಂಗಾಮಿನಲ್ಲಿ ಬೆಳೆಯುವ ಪ್ರಮುಖ ಬೆಳೆಗಳ ಬಿತ್ತನೆ ಪ್ರಮಾಣ ಕಳೆದ 5 ವರ್ಷಗಳಿಗೆ ಹೋಲಿಸಿದರೆ ಸುಮಾರು ಶೇ.35ರಷ್ಟು ಕುಸಿದಿದೆ. ಈ ಬಗ್ಗೆ ಕೇಂದ್ರ ಕೃಷಿ ಸಚಿವಾಲಯ ಸಿದ್ಧಪಡಿಸಿದ ಅಂಕಿ-ಅಂಶಗಳೇ ದೃಢಪಡಿಸಿವೆ.
ಎಣ್ಣೆ ಬೀಜಗಳಾದ ಸೋಯಾಬಿನ್, ನೆಲಗಡಲೆ, ಸೂರ್ಯಕಾಂತಿ, ಎಳ್ಳು, ಹರಳೆಣ್ಣೆ ಬೀಜ ಬಿತ್ತನೆ ಪ್ರಮಾಣದಲ್ಲೂ ಇಳಿಮುಖ ಕಂಡುಬಂದಿದೆ. ಕಳೆದ 5 ವರ್ಷಗಳ ಅವಧಿಯಲ್ಲಿ ರೈತರು ಸರಾಸರಿ 396 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದರು. ಆದರೆ ಜು.11ರವರೆಗೆ ಅಂಕಿ-ಅಂಶಗಳ ಪ್ರಕಾರ ಈ ವರ್ಷ ಕೇವಲ 257 ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ಮಾತ್ರ ಬಿತ್ತನೆಯಾಗಿದೆ.
5 ವರ್ಷ ಸರಾಸರಿ 107 ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ಬಿತ್ತನೆಯಾಗಿದ್ದ ಭತ್ತ ಈಗ 86 ಲಕ್ಷ ಹೆಕ್ಟೇರ್ ಗೆ ಇಳಿಮುಖವಾಗಿದೆ. 24.59 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಬೇಕಿದ್ದ ಎಣ್ಣೆಕಾಳುಗಳು 13.46 ಲಕ್ಷ ಹೆಕ್ಟೇರ್ ಗೆ ಕುಸಿದಿದೆ ಎಂದು ಅಂಕಿ-ಅಂಶಗಳು ತಿಳಿಸಿವೆ.
ಜುಲೈ ಅಂತ್ಯದವರೆಗೂ ಮುಂಗಾರು ಬೆಳೆಗಳನ್ನು ಬಿತ್ತನೆ ಮಾಡಲಾಗುತ್ತದೆ. ಹೀಗಾಗಿ ಜುಲೈ ನ ಉಳಿದ ಅವಧಿಯಲ್ಲಿ ಮಳೆಯಾದರೆ ಬಿತ್ತನೆ ಪ್ರಮಾಣ ಹೆಚ್ಚಬಹುದಾಗಿದೆ.