ಮನುಷ್ಯ ನಗರದಲ್ಲಿದ್ದರೂ ಗ್ರಾಮೀಣ ಭಾಗದಲ್ಲಿದ್ದರೂ ತರಕಾರಿ ಹಾಗೂ ಆಹಾರವನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ. ಇವುಗಳಿಗೆ ಮೂಲ ಆಧಾರವಾಗಿರುವುದು ಕೃಷಿ. ನಾಗಾಲೋಟದಲ್ಲಿ ಓಡುತ್ತಿರುವ ನಗರೀಕರಣದಲ್ಲಿ ಕೃಷಿ ಭೂಮಿಗಳೇ ಮಾಯವಾಗುತ್ತಿವೆ, ಇನ್ನು ಆಹಾರ ಪದಾರ್ಥಗಳನ್ನು ಬೆಳೆಯುವುದು ಹೇಗೆ ಸಾಧ್ಯ?
ನಗರ, ಉಪನಗರಗಳಲ್ಲಿ ಕೃಷಿ ಭೂಮಿಗಳು ನೋಡನೋಡುತ್ತಿದ್ದಂತೆಯೇ ಕಟ್ಟಡಳಿಗೆ, ಕಚೇರಿಗಳಿಗೆ ಮತ್ತು ಕಾರ್ಖಾನೆಗಳಿಗೆ ಬಳಕೆಯಾಗಿದೆ. ತಡೆಯಿಲ್ಲದ ನಗರೀಕರಣ, ಹಸಿರು ಹೊದಿಕೆಯನ್ನು ಕಬಳಿಸುತ್ತಿದೆ. ದಿನದಿಂದ ದಿನಕ್ಕೆ ತಾಪಮಾನ, ವಾಯುಮಾಲಿನ್ಯ ಉಸಿರುಗಟ್ಟಿಸುದೆ.ಇಂತಹ ಪರಿಸ್ಥಿತಿಯಲ್ಲಿ ಹಸಿರು ಹೊದಿಕೆಯನ್ನು ಪ್ರೇರೇಪಿಸಲು ಕಾಂಕ್ರಿಟ್ ಕಾಡಿನಲ್ಲಿಯೇ 'ತಾರಸಿ ತೋಟಗಾರಿಕೆ' ಎಂಬ ಅಪರೂಪದ ಯೋಜನೆ ಸಿದ್ಧವಾಗಿದೆ.
ನಗರದ ವಿಸ್ತೀರ್ಣ ಹೆಚ್ಚಾಗುತ್ತಿರುವಂತೆಯೇ ಉತ್ತಮ ಜೀವನಮಟ್ಟವನ್ನು ನಿರೀಕ್ಷಿಸಿ ಯುವರೈತರು ನಗರಗಳಿಗೆ ವಲಸೆ ಬರುತ್ತಿದ್ದಾರೆ.ಹೆಚ್ಚಿನ ಬೇಡಿಕೆ ಉತ್ತಮ ಬೆಲೆ ಸಿಗುವುದರಿಂದ ರೈತರು ಹೆಚ್ಚು ಇಳುವರಿ ನೀಡುವ ಸುಧಾರಿತ ಮತ್ತು ಹೈಬ್ರಿಡ್ ತಳಿಗಳನ್ನು ಬೆಳೆಯುತ್ತಾರೆ ಆದರೆ ಈ ಎಲ್ಲಾ ಸುಧಾರಿತ ತಳಿಗಳು ಕೀಟ, ರೋಗಬಾಧೆಗೆ ಶೀಘ್ರಗತಿಯಲ್ಲಿ ತುತ್ತಾಗುತ್ತದೆ. ನಾವು ಬಳಸುವ ತರಕಾರಿಗಳಲ್ಲದೇ ನೀರು, ಭೂಮಿ, ಗಾಳಿಗಳಲ್ಲಿಯೂ ವಿಷಕಾರಿ ರಾಸಾಯನಿಕಗಳ ಇರುವಿಕೆ ಪತ್ತೆಯಾಗಿದೆ. ರಾಸಾಯನಿಕ ವಸ್ತುಗಳು ಒಂದಲ್ಲಾ ಒಂದು ರೀತಿಯಲ್ಲಿ ಜೀವಸಂಕುಲದ ಮೇಲೆ ದುಷ್ಪರಿಣಾಮ ಬೀರುತ್ತದೆ. ನಗರವಾಸಿಗಳು ಸ್ವಯಂಪ್ರೇರಿತರಾಗಿ ಸಾಧ್ಯವಾದ ಎಲ್ಲಾ ರೀತಿಯ ತರಕಾರಿಗಳ ಮತ್ತು ಇತರ ಬೆಳೆಗಳನ್ನು ಬೆಳೆಯುವುದೊಂದೇ ಇದಕ್ಕೆಲ್ಲಾ ಇರುವ ಪರಿಹಾರ.
ಮನೆ, ವಸತಿಸಂಕೀರ್ಣಗಳ ತಾರಸಿಗಳು ಇದಕ್ಕೆ ಸದವಕಾಶವಾಗಿದೆ. ತಾರಸಿತೋಟಗಳಲ್ಲಿ ತರಕಾರಿ ಬೆಳೆಯುವುದು ಕಷ್ಟಸಾಧ್ಯ ಕೆಲೆಸವೇನಲ್ಲ. ನಗರದ ಜನರನ್ನು ಸಕ್ರಿಯರಾಗಿರಿಸಿ ನಿಸರ್ಗಕ್ಕೆ ಹತ್ತಿರವಾಗಿಸಿ ಮೈಮನಗಳಿಗೆ ಮುದಕೊಡಬಲ್ಲಂತಹ ಶಕ್ತಿ ತಾರಸಿತೋಟಕ್ಕಿದೆ. ಸಿಲಿಕಾನ್ ಸಿಟಿಯ ಪ್ರಮುಖ ಭಾಗಗಳಲ್ಲಿ ಈಗಾಗಲೇ ಈ ಯೋಜನೆ ಜಾರಿಯಾಗುತ್ತಿದ್ದು ಒಂದು ತೆರನಾದ ಚಳುವಳಿಯ ರೂಪ ಪಡೆದುಕೊಳ್ಳುತ್ತಿದೆ.
ತಾರಸಿತೋಟಗಳೆಂದರೆ ಕೇವಲ ಹೂವಿನ ಅಥವಾ ಅಲಂಕಾರಿಕ ಗಿಡಗಳನ್ನು ಬೆಳೆಯುವುದಕ್ಕಷ್ಟೇ ಸೀಮಿತವಾಗಬೇಕಿಲ್ಲ. ದಿನನಿತ್ಯ ಬೇಕಾಗುವ ತರಕಾರಿ ಮತ್ತು ಹಣ್ಣಿನ ಬೆಳೆಗಳನ್ನು ಯಶಸ್ವಿಯಾಗಿ ಬೆಳೆಯಬಹುದು. ಚಿಕ್ಕ ತಾರಸಿತೋಟದಲ್ಲಿಯೇ ತರಕಾರಿ ಸೊಪ್ಪು ಮತ್ತು ಹಣ್ಣುಗಳನ್ನು ಬೆಳೆಯುವುದನ್ನು ಊಹಿಸಿಕೊಳ್ಳಿ! ನಗರದಲ್ಲಿ ಹಸಿರಿನ ಹೊದಿಕೆಯನ್ನು ಉಳಿಸಲು ನಾಗರಿಕರ ಪ್ರಯತ್ನ ಅತಿದೊಡ್ಡದು. ಜೊತೆಗೆ ಜನಸಾಮಾನ್ಯರ ಬಳಕೆಗೆ ತಾಜಾ, ಸುರಕ್ಷಿತ ಮತ್ತು ಪೌಷ್ಠಿಕ ಹಣ್ಣು ಮತ್ತು ತರಕಾರಿಗಳು ಸಿಗುತ್ತವೆ. ತಾರಸಿತೋಟದ ಬಗ್ಗೆ ತರಬೇತಿಯನ್ನೂ ನೀಡಲಾಗುತ್ತದೆ. ಗಾರ್ಡನ್ ಸಿಟಿ ಫಾರ್ಮರ್ಸ್, ವಿಠಲ ಮಲ್ಯ ವೈಜ್ನಾನಿಕ ಸಂಶೋಧನಾ ಪ್ರತಿಷ್ಠಾನ ಮುಂತಾದ ಸಂಸ್ಥೆಗಳು ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿ ಬೇಕಾದ ಮಾಹಿತಿ ನೀಡುತ್ತಿವೆ. ತಾರಸಿತೋಟವನ್ನು ನೀವೂ ಬೆಳೆಸಬೇಕೆಂದರೆ ಬೆಂಗಳೂರು ತಾರಸಿತೋಟದ ಬೆಳೆಗಾರರ ಗುಂಪಿಗೆ ಹೆಸರು ನೋಂದಾಯಿಸಿಕೊಂಡು ಮಾಹಿತಿ ವಿನಿಮಯ ಮಾಡಬಹುದಾಗಿದೆ.
2011ರಿಂದ ಗಾರ್ಡನ್ ಸಿಟಿ ಫಾರ್ಮರ್ಸ್ ಸಂಸ್ಥೆ, ಬೆಂಗಳೂರಿನ ವಿವಿಧ ಕಡೆಗಳಲ್ಲಿ ನಗರ ಕೃಷಿಯ ಹಾಗೂ ತಾರಸಿತೋಟಗಳ ವಿಧಾನಗಳನ್ನು ವಿವರಿಸಿ ಸೂಕ್ತವಾಗಿ ಮತ್ತು ಸುಲಭವಾಗಿ ಅಳವಡಿಸಿಕೊಳ್ಳಲು ಅನುಕೂಲವಾಗಲೆಂದು ಇದಕ್ಕೆ ಬೇಕಾಗುವ ವಿವಿಧ ಕೃಷ್ಹಿ ಪರಿಕರಗಳನ್ನು ಒದಗಿಸುವ ಉದ್ದೇಶದಿಂದ 'ನಿಮ್ಮದೇ ತೋಟದಿಂದ ಊಟ' ಎನ್ನುವ ಕಾರ್ಯಕ್ರಮವನ್ನು ನಿರಂತರವಾಗಿ ಆಯೋಜಿಸುತ್ತಲಿದೆ.