ಭಾರತದಿಂದ ರಫ್ತಾಗುತ್ತಿದ್ದ ಆಲ್ಫಾನ್ಸೋ ಮಾವಿನ ಹಣ್ಣು ಮತ್ತು ಇತರ ತರಕಾರಿಗಳಿಗೆ ಯುರೋಪಿಯನ್ ಒಕ್ಕೂಟ ನಿಷೇಧ ಹೇರಿದೆ. ಹಣ್ಣುಗಳ ರಾಜ ಮಾವು ಹಾಗೂ ಇತರ ತರಕಾರಿಗಳಿಗೆ ಮೇ 1ರಿಂದಲೇ ನಿಷೇಧ ಹೇರಲಾಗಿದೆ.
ನಿಷೇಧ ಹೇರಿರುವ 28 ರಾಷ್ಟ್ರಗಳ ಒಕ್ಕೂಟದ ತೀರ್ಮಾನಕ್ಕೆ ಭಾರತ ತೀವ್ರ ವಿರೋಧ ವ್ಯಕ್ತಪಡಿಸಿದೆ. ಯುರೋಪಿಯನ್ ಒಕ್ಕೂಟದ ಸಸ್ಯ ಆರೋಗ್ಯ ಕುರಿತ ಸ್ಥಾಯಿ ಸಮಿತಿಯು, ಕೀಟನಾಶಕ ಅಂಶಹೊಂದಿದೆ ಎಂಬ ಕಾರಣ ನೀಡಿ ಆಲ್ಫಾನ್ಸೋ ಮಾವಿನ ಹಣ್ಣು ಸೇರಿದಂತೆ ಭಾರತದಿಂದ ಆಮದಾಗುವ 207 ವಿಧದ ತರಕಾರಿ-ಹಣ್ಣುಗಳಿಗೆ ನಿಷೇಧ ಹೇರಿದೆ. ಯುರೋಪ್ ಒಕ್ಕೂಟದ ಕೃಷಿ ವಲಯಕ್ಕೆ ಕೀಟ, ಹುಳುಬಾಧೆಯನ್ನು ತಡೆಯುವ ಕ್ರಮವಾಗಿ ಈ ನಿಷೇಧ ಹೇರಲಾಗಿದೆ ಎಂದು ಸಮರ್ಥಿಸಿಕೊಂಡಿದೆ.
2015ರ ಡಿಸೆಂಬರ್ 31ರ ವರೆಗೆ ಈ ನಿಷೇಧ ಊರ್ಜಿತದಲ್ಲಿರುತ್ತದೆ. 2013ರಲ್ಲಿ ಭಾರತದಿಂದ ಐರೋಪ್ಯ ಒಕ್ಕೂಟಕ್ಕೆ ರಫ್ತಾಗಿದ್ದ ಹಣ್ಣು ಮತ್ತು ತರಕಾರಿಗಳಲ್ಲಿ ಕೀಟಗಳು ಪತ್ತೆಯಾಗಿದ್ದವು. ಹೀಗೆ ಹಣ್ಣು-ತರಕಾರಿಗಳೊಂದಿಗೆ ಬರುವ ಹೊಸ ಕೀಟಗಳು ಒಕ್ಕೂಟದ ಕೃಷಿ ಮತ್ತು ಉತ್ಪಾದನೆಗೆ ಆತಂಕವುಂಟುಮಾಡುತ್ತವೆ ಎಂದು ಐರೋಪ್ಯ ಒಕ್ಕೂಟದ ಸಸ್ಯ ಆರೋಗ್ಯ ಕುರಿತ ಸ್ಥಾಯಿ ಸಮಿತಿ ತಿಳಿಸಿದೆ.
ಮಾವು, ಬದನೆ, ಹಾಗಲಕಾಯಿ, ಕೆಸುವು ಸೊಪ್ಪು,, ಪಡವಲಕಾಯಿ ಸೇರಿದಂತೆ ವಿವಿಧ ಹಣ್ನು- ತರಕಾರಿಗಳು ಈ ನಿಷೇಧಕ್ಕೆ ಒಳಪಟ್ಟಿವೆ. ಅಂತರಾಷ್ಟ್ರೀಯ ಮಾನದಂಡಗಳ ಅನುಗುಣವಾಗಿ ತರಕಾರಿ-ಹಣ್ಣು ಪೂರೈಕೆಯಲ್ಲಿ ಶುಚಿತ್ವ, ಗುಣಮಟ್ಟವನ್ನು ಪರಿಶೀಲಿಸುವ ಸಂಬಂಧ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಮಿತಿ ತಿಳಿಸಿದೆ.
ನಿಷೇಧಕ್ಕೊಳಗಾದ ಹಣ್ಣು-ತರಕಾರಿಗಳು ಭಾರತದಿಂದ ಒಟ್ಟು ಆಮದಾಗುವ ತರಕಾರಿ -ಹಣ್ನುಗಳ ಶೇ.5ರಷ್ಟು ಮಾತ್ರವೇ ಆಗಿದೆ. ಆದರೆ ನಿಷೇಧದ ಕ್ರಮವನ್ನು ಭಾರತೀಯ ಸಮುದಾಯ, ವರ್ತಕರು, ಜನಪ್ರತಿನಿಧಿಗಳು ಖಂಡಿಸಿದ್ದಾರೆ.