ಈ ಊರಿನಲ್ಲಿ ಜ್ವರದ ರುದ್ರ ನರ್ತನ ನಡೆದಿದೆ.. ವಾರಕ್ಕೊಬ್ಬರಾದರೂ ಜ್ವರದಿಂದ ಸಾಯುತ್ತಾರೆ.. ಇಡೀ ಊರಿಗೆ ಊರೇ ಹೊದ್ದು ಮಲಗಿದೆ.. 4೦ಕ್ಕೂ ಹೆಚ್ಚು ಜನ ಆನೇಕಾಲು ರೋಗದಿಂದ ಬಳಲುತ್ತಿದ್ದಾರೆ.. ನತದೃಷ್ಠ ನೀರಲಕೇರಿ ಗ್ರಾಮದಲ್ಲಿ ಜನ ನರಕ ಸದೃಶ ಜೀವನ ನಡೆಸುತ್ತಿದ್ದಾರೆ ಅಂದರೆ ನೀವು ನಂಬುತ್ತೀರಾ....?
ಇದು ರಾಯಚೂರು ಜಿಲ್ಲೆಯ ಲಿಂಗಸ್ಗೂರು ತಾಲ್ಲುಕಿನ ನೀರಲಕೇರಿ ಎನ್ನುವ ನತದೃಷ್ಠ ಗ್ರಾಮ. ಸಮೀಪದ ಕೃಷ್ಣಾ ಮೇಲ್ದಂಡೆ ಯೊಜನೆಯ ಬಸವಸಾಗರ ಜಲಾಶಯದ ಹಿನ್ನೀರಿನಿಂದ ಇಡೀ ಗ್ರಾಮ ಬಸಿ ನೀರಿನಿಂದ ಗಬ್ಬೆದ್ದು ಹೋಗಿದೆ. ಈ ಊರಲ್ಲಿ ಮಲೇರಿಯಾ ಟೈಫೈಡ್-ಫೈಲೇರಿಯಾ ಜೊತೆಗೆ ಡೆಂಗ್ಯೂ ರೋಗಗಳು ತಾಂಡವವಾಡುತ್ತಿವೆ. ಸ್ಪೂರ್ತಿ ರಮೇಶ ಚಲವಾದಿ ಎನ್ನುವ 16ದಿನಗಳ ಹಸುಗೂಸು ಡೆಂಗ್ಯೂ ಮಾರಿಗೆ ಬಲಿಯಾಗಿದೆ. ಹಾಗೆ ನೋಡಿದರೆ ದೃಢ ಪಟ್ಟ ಡೆಂಗ್ಯೂದಿಂದ ಈ ಊರಲ್ಲಿ ಈಗಾಗಲೇ ಹತ್ತಾರು ಜನ ಮಸಣ ಕಂಡಿದ್ದಾರೆ. ಬಸವಲಿಂಗಪ್ಪ, ಅಮರೇಶ,ದುರುಗಮ್ಮ,ಬಸವರಾಜ,ಬಸವಂತರಾಯಪ್ಪ ಹೀಗೆ ಸತ್ತವರ ಪಟ್ಟಿ ಬೆಳೆಯುತ್ತಿದೆ. ಇಷ್ಟೆಲ್ಲಾ ಸಾವಿನ ಮಾರಣ ಹೋಮ ನಡೆಯುತ್ತಿದ್ದರೂ ಆರೋಗ್ಯ ಇಲಾಖೆ ಇತ್ತ ಚಿತ್ತಹರಿಸಿಲ್ಲ.
ಇಡೀ ಗ್ರಾಮದಲ್ಲಿ ಎಲ್ಲಿ ನೋಡಿದಡೆ ಅಲ್ಲಿ ಗಲೀಜು, ಕೊಳಚೆ ನೀರು, ಮುಗಿಬಿದ್ದ ರೋಗಕಾರಕ ಸೊಳ್ಳೆಗಳ ದರ್ಶನವಾಗುತ್ತಿದೆ. ಹೀಗಾಗಿ ಹಲವು ರೋಗಗಳ ತವರೂರಾದಂತಾಗಿ ಹೋಗಿರುವ ನೀರಲ ಕೇರಿ ಗ್ರಾಮದಲ್ಲಿ ಪ್ರತಿ ಮನೆಯಲ್ಲಿಯೂ ಜನ ಜ್ವರದಿಂದದ ಹಾಸಿಗೆ ಹಿಡಿದಿದ್ದಾರೆ. ಇಷ್ಟು ಮಾತ್ರವಲ್ಲ ಈಗ್ರಾಮದಲ್ಲಿ 4೦ಕ್ಕೂ ಹೆಚ್ಚು ಜನ ಆನೆಕಾಲು ರೋಗದಿಂದ ಬಳಲುತ್ತಿದ್ದಾರೆ. ಒಂದೇ ಗ್ರಾಮದಲ್ಲಿ ಇಷ್ಟೊಂದು ಜನ ಮಾರಕ ಕಾಯಿಲೆಯಿಂದ ಬಳಲುತ್ತಿದ್ದರೂ ಜಿಲ್ಲಾಡಳಿತ ಎಚ್ಚತ್ತುಕೊಳ್ಳದಿರುವದು ಸೋಜಿಗವೇ ಸರಿ, ಗ್ರಾಮೀಣ ಪ್ರದೇಶದ ಜನರ ಆರೋಗ್ಯದ ದುಸ್ಥಿತಿಗೆ ಈಗ್ರಾಮ ಕನ್ನಡಿ ಹಿಡಿದಿದೆ. ಇಡೀ ಊರ ಜನ ಜ್ವರಾ ಬಂದು ಮಲಗಿದ್ರ ಯಾಕಂತ ಕೇಳೋರ ಇಲ್ರೀ ಅಂತಿದ್ದಾರೆ ಇಲ್ಲಿನ ಜನ.
ಒಟ್ಟಾರೆ ಬಸಿ ನೀರಿನ ಶಾಪಕ್ಕೆ ಸಿಲುಕಿ ನೀರಲಕೇರಿ ಜನ ನಲಗುತ್ತಿದ್ದಾರೆ, ಇನ್ನಷ್ಟು ಸಾವುಗಳು ಸಂಭವಿಸುವ ಮೊದಲು ಸರಕಾರ ಎಚ್ಚೆತ್ತುಕೊಳ್ಳಬೇಕಿದೆ.