.
ಇಂದು ವಿಶ್ವ ಅಸ್ತಮಾ ದಿನ. ಸದಾ ಮಲಿನ ವಾಯು ಉಸಿರಾಡುವ ನಗರವಾಸಿಗಳಲ್ಲಿ ಹೆಚ್ಚಾಗಿ ಕಂಡು ಬರುವ ಆರೋಗ್ಯ ಸಮಸ್ಯೆಯೇ ಅಸ್ತಮಾ. ಜಗತ್ತಿನ 40 ಕೋಟಿ ಜನ ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಭಾರತದಲ್ಲಿ 12.7 ಕೋಟಿ ಜನ ಇದರಿಂದ ಬಳಲುತ್ತಿದ್ದು, ಇವರಲ್ಲಿ ಶೇಕಡ 15ರಷ್ಟು ಮಕ್ಕಳು ಎಂಬುದು ಆತಂಕದ ವಿಚಾರ.
ಬೆಂಗಳೂರಿನ ವಿಚಾರಕ್ಕೆ ಬಂದರೆ, ಇಲ್ಲಿನ ಜನಸಂಖ್ಯೆಯ ಶೇ.11-31ರಷ್ಟು ಮಕ್ಕಳು ಉಬ್ಬಸ ಸಮಸ್ಯೆಯಿಂದ ಬಳಲುತ್ತಿದ್ದಾರೆ.
ಕಳದೊಂದು ದಶಕದಲ್ಲಿ ಭಾರತದ ಅಸ್ತಮಾ ಪೀಡಿತರ ಸಂಖ್ಯೆ ಗಣನೀಯ ಏರಿಕೆ ಕಂಡಿದೆ. ಪ್ರತಿ ವರ್ಷ ಶೇ.35ರಷ್ಟು ಜನ ಉಸಿರಾಟದ ಸಮಸ್ಯೆ ಚಿಕಿತ್ಸೆಗಾಗಿ ಆಸ್ಪತ್ರೆ ಸೇರುತ್ತಿದ್ದಾರೆ. ವಾಯು ಮಾಲಿನ್ಯ, ಧೂಮಪಾನ, ಒತ್ತಡದ ನಗರ ಜೀವನ ಶೈಲಿ ಮತ್ತಿತರ ಕಾರಣಗಳಿಂದ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ.
ಆರೋಗ್ಯವಂತ ಉಸಿರಾಡುವುದಕ್ಕೆ ಬಹಳ ಕಡಿಮೆ ಶಕ್ತಿ ವ್ಯಯಿಸುತ್ತಾನೆ. ಇಂತಹ ಸರಾಗ ಉಸಿರಾಟದಲ್ಲಿ ಯಾವುದೇ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ. ಶ್ವಾಸನಾಳಗಳು ಸಂಕುಚಿತಗೊಂಡಾಗ, ಅವುಗಳ ವ್ಯಾಸ ಕಡಿಮೆಯಾದಾಗ ಉಸಿರಾಟಕ್ಕೆ ಹೆಚ್ಚಿನ ಶಕ್ತಿ ಬೇಕಾಗುತ್ತದೆ. ಶ್ವಾಸಕೋಶಗಳ ಮೇಲೆ ತೀವ್ರವಾದ ಪರಿಣಾಮ ಉಂಟಾಗಿ ರೋಗಿ ಸರಾಗವಾಗಿ ಉಸಿರಾಡಲಾಗದೆ ಒದ್ದಾಡುವುದೇ ಅಸ್ತಮಾ. ಈ "ಅಸ್ತಮಾ" ಎಂಬುದು ಗ್ರೀಕ್ ಮೂಲದ ಪದ. ಕನ್ನಡದಲ್ಲಿ ಉಬ್ಬಸ ಅಥವಾ ಗೂರಲು ರೋಗ ಎನ್ನುತ್ತಾರೆ. ಅಸ್ತಮಾದ ರೂಪ, ಲಕ್ಷಣಗಳನ್ನು ಗುರುತಿಸಿ ಲಿಖಿತ ಮಾಹಿತಿ ನೀಡಿದ್ದು 5ನೇ ಶತಮಾನದ ಅರೀಲಿಯಾನಸ್ ಎನ್ನಲಾಗುತ್ತಿದೆ.
ಉಸಿರಾಟದ ಸಮಸ್ಯೆ ಉಂಟಾದ ಕೂಡಲೇ ವೈದ್ಯರ ಬಳಿ ಪರೀಕ್ಷಿಸಿಕೊಳ್ಳಬೇಕು. ಅಸ್ತಮಾ ಯಾವಾಗಲೂ ನಿರಂತರ ಔಷಧ ಸೇವನೆಯಿಂದ ಮಾತ್ರ ಗುಣವಾಗಲು ಸಾಧ್ಯ. ವೈದ್ಯರ ಶಿಫಾರಸಿನಂತೆ ಔಷಧ ಸೇವಿಸುವುದು ಉತ್ತಮ.
ಅಸ್ತಮಾದ ಲಕ್ಷಣಗಳು:
* ಉಸಿರಾಟ ಬದಲಾವಣೆ, ಉಸಿರಾಟದಲ್ಲಿ ಸಿಳ್ಳೆ ಶಬ್ದ, ಮಾತನಾಡುವಾಗ ಉಸಿರಾಟದ ಸಮಸ್ಯೆ, ಕಫ ಹೆಚ್ಚಳ, ರಾತ್ರಿ ವೇಳೆ ಹೆಚ್ಚು ಕೆಮ್ಮು, ದಮ್ಮು, ಅಲರ್ಜಿ, ನೆಗಡಿ, ಗಂಟಲು ಕೆರೆತ, ಒಣಗಿದ ಬಾಯಿ, ಆಯಾಸ, ಅಶಾಂತಿ, ಅತೃಪ್ತ ಭಾವನೆ, ಕಫ ಶ್ವಾಸ ಬಿಡುಗಡೆ, ಕೆಮ್ಮಿನಿಂದ ಉಸಿರು ಕಟ್ಟುವಿಕೆ, ಎದೆಯಲ್ಲಿ ಕಫ, ಕೆಲಸ ಮಾಡಿದಾಗ ಉಬ್ಬಸ ಆರಂಭವಾಗಿ ವಿಪರೀತ ದಣಿವು ಇತ್ಯಾದಿ.
ನಿಯಂತ್ರಣಕ್ಕೇನು ಮಾಡಬೇಕು.
*ವಾಯು ಮಾಲಿನ್ಯದಿಂದ ದೂರವಿರಬೇಕು, ಧೂಳು, ಘಾಟು ವಾಸನೆ, ಧೂಮಪಾನದ ಹೊಗೆಯಿಂದ ದೂರ ಇರಬೇಕು, ಬೆಕ್ಕು ಮತ್ತು ಇತರೆ ಸಾಕು ಪ್ರಾಣಿಗಳ ಮೈ ರೋಮದ ಬಗ್ಗೆ ಜಾಗರೂಕರಾಗಿರಬೇಕು, ಮನೆ ದೂಳಿನಿಂದ ಅಲರ್ಜಿ ಇದೆ ಎಂಬುದು ಮನವರಿಕೆಯಾದರೆ, ದೂಳು ಶೇಖರಣೆಗೆ ಅವಕಾಶ ನೀಡಬಾರದು, ಹಾಸಿಗೆಯನ್ನು ವಾರಕ್ಕೊಮ್ಮೆ ಬಿಸಿಲಿಗೆ ಹಾಕಬೇಕು, ಮೇಲು ಹೊದಿಕೆಗಳನ್ನು ಮತ್ತು ಹಾಸಿಗೆಯ ಮೇಲು ಹೊದಿಕೆಗಳನ್ನು ಮೂರು-ನಾಲ್ಕು ದಿನಕ್ಕೊಮ್ಮೆ ಬದಲಾಯಿಸಬೇಕು, ಕುಳಿತಾಗಲೂ, ಮಲಗಿದಾಗಲೂ ಉಸಿರಾಡಲಾಗದಿದ್ದರೆ ತಕ್ಷಣವೇ ವೈದ್ಯರನ್ನು ಭೇಟಿ ಮಾಡಿ.