.
ಜಗತ್ತಿನಲ್ಲಿ ಪ್ರತಿ ಆರು ಸೆಕಂಡ್ ಗೆ ಒಬ್ಬ ತಂಬಾಕು ವ್ಯಸನಿ ಕೊನೆಯುಸಿರೆಳೆಯುತ್ತಿದ್ದಾನೆ!. ಸಾಯುತ್ತಿರುವ ಆರು ವ್ಯಸನಿಗಳ ಪೈಕಿ ಒಬ್ಬ ಭಾರತೀಯ! ತಂಬಾಕು ಎಲೆ ಉತ್ಪಾದಿಸುವ ಮೂರನೇ ಅತಿದೊಡ್ಡ ರಾಷ್ಟ್ರ ಭಾರತ. ಇಷ್ಟೆಲ್ಲ ಪೀಠಿಕೆ ಯಾಕೆ ಎನ್ನುವ ಸಂದೇಹವೇ? ನೆನಪಿದೆಯೇ ಇಂದು ವಿಶ್ವ ತಂಬಾಕು ಮುಕ್ತ ದಿನ.
ನಮ್ಮ ದೇಶಕ್ಕೀಗ ಬಿಜೆಪಿ ನೇತೃತ್ವದ ಎನ್ ಡಿ ಎ ಸರ್ಕಾರದ ಸಾರಥ್ಯ. ಹಾಗೆಯೇ ಆರೋಗ್ಯ ಇಲಾಖೆಗೆ ವೈದ್ಯರೊಬ್ಬರ ಸಾರಥ್ಯ. ವೃತ್ತಿಯಲ್ಲಿ ವೈದ್ಯರಾಗಿರುವ ಡಾ.ಹರ್ಷವರ್ಧನ್ ಈಗ ದೇಶದ ಆರೋಗ್ಯಸಚಿವ. ಅವರೇ ಹೇಳುವಂತೆ, ದೇಶದ ಜನರ ಆರೋಗ್ಯದ ದೃಷ್ಟಿಯಿಂದ ತಂಬಾಕು ಮೊದಲನೇಯ ಶತ್ರು. ಹೀಗಾಗಿ ಸದ್ಯದಲ್ಲೇ ಪ್ರತಿ ತಿಂಗಳ ಕೊನೆಯ ದಿನ "ತಂಬಾಕು ಮುಕ್ತ ದಿನ''ವನ್ನಾಗಿ ಘೋಷಿಸಲು ಕೇಂದ್ರ ಸರ್ಕಾರ ಸಿದ್ದತೆ ನಡೆಸಿದೆ. ಶೀಘ್ರವೇ ಇದು ಅನುಷ್ಠಾನಕ್ಕೆ ಬರುವ ನಿರೀಕ್ಷೆಯೂ ಇದೆ.
ದುರದೃಷ್ಟವೆಂದರೆ ನಮ್ಮ ದೇಶದಲ್ಲಿ ನೇರ ಧೂಮವ್ಯಸನಿಗಳ ಸಾವಿನ ಸಂಖ್ಯೆ,ತಂಬಾಕು ವ್ಯಸನಿಗಳ ಸಾವಿನ ಸಂಖ್ಯೆಯ ದಾಖಲೆಗಳಿವೆ. ಆದರೆ, ಪರೋಕ್ಷ ಧೂಮಪಾನ ಹಾಗೂ ಹೆತ್ತವರ ಧೂಮಪಾನ ವ್ಯಸನದಿಂದಾಗುತ್ತಿರುವ ಸಾವಿನ ಸಂಖ್ಯೆಯ ಮಾಹಿತಿ ಇಲ್ಲ. ಆರೋಗ್ಯ ಸಚಿವಾಲಯವೂ ಈ ನಿಟ್ಟಿನಲ್ಲಿ ಗಮನಹರಿಸಿಲ್ಲವೆಂದೇ ಹೇಳಬಹುದು.
ಮಾಹಿತಿ ಒಂದರ ಪ್ರಕಾರ 2004ರ ಅಂಕಿ ಅಂಶವಷ್ಟೇ ಕೇಂದ್ರ ಆರೋಗ್ಯಸಚಿವಾಲಯದಲ್ಲಿದೆ. ಇದು ಆರ್ಟಿಐ ಮೂಲಕ ಬಹಿರಂಗಗೊಂಡಿದ್ದು, ಆರೋಗ್ಯ ಸಂಶೋಧಕರಿಗೂ ಸರ್ಕಾರದ ಅಧಿಕೃತ ಮಾಹಿತಿ ಸಿಗುತ್ತಿಲ್ಲವೆಂಬುದೂ ಅಷ್ಟೇ ಸತ್ಯ. ಪಬ್ಲಿಕ್ ಹೆಲ್ತ್ ಫೌಂಡೇಶನ್ ಆಫ್ ಇಂಡಿಯಾ ನಡೆಸಿದ ಅಧ್ಯಯನ ಪ್ರಕಾರ, ಪ್ರತಿ ವರ್ಷ ಭಾರತೀಯರು ಧೂಮಪಾನಕ್ಕೆ ವ್ಯಯಿಸುತ್ತಿರುವ ಮೊತ್ತ ಕಡಿಮೆ ಎಂದರೂ 1.04 ಲಕ್ಷ ಕೋಟಿ ರೂಪಾಯಿ. ಇದು 2011ರಲ್ಲಿ ಕೇಂದ್ರ ಸರ್ಕಾರ ಆರೋಗ್ಯ ಕ್ಷೇತ್ರಕ್ಕೆ ಮೀಸಲಿಟ್ಟ ಬಜೆಟ್ ಮೊತ್ತದ ಶೇಕಡ 12ರಷ್ಟಾಗುತ್ತದೆ.
ಈ ನಿಟ್ಟಿನಲ್ಲಿ ಸರ್ಕಾರ ಎಲ್ಲರನ್ನೂ ಜತೆಗೂಡಿಸಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡರೆ ಪ್ರತಿ ಮನೆಯ ಸದಸ್ಯರ ಮೇಲೆ ಪರಿಣಾಮ ಬೀರಬಹುದೇನೋ..