ಎಲ್ಲವೂ ಇದ್ದು ಏನೂ ಇಲ್ಲದ್ದಂತಾಗಿರುವ ಇಲ್ಲಿನ ಸರ್ಕಾರಿ ಆಸ್ಪತ್ರೆಯ ಗೋಳು ಬಡಪಾಯಿ ರೋಗಿಗಳಿಗೆ ಮಾರಕವಾಗಿ ಪರಿಣಮಿಸಿದೆ ಇದರಿಂದಾಗಿ ಜಿಲ್ಲೆಯ ಜಿಲ್ಲಾಸ್ಪತ್ರೆ ಸಾರ್ವಜನಿಕರ ಪಾಲಿಗೆ ನರಕ ಸದೃಶವಾಗಿದೆ.
ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರದಲ್ಲಿ ದೊಡ್ಡಾಸ್ಪತ್ರೆ ಇದೆ, ಚೆಂದಾಗಿ ನೋಡ್ತಾರೆ ಅಲ್ಲೋಗೋಣ, ದೊಡ್ಡ ದೊಡ್ಡ ವೈಧ್ಯರಿರುತ್ತಾರೆ ಡೊಡ್ಡ ದೊಡ್ಡ ಮಿಷನ್ಗಳೆಲ್ಲಾ ಇದಾವೆ ಎಂದೆಲ್ಲಾ ಮಾತಾಡಿಕೊಳ್ಳುವ ಗ್ರಾಮೀಣ ರೋಗಿಗಳಿಗೆ ಈ ಆಸ್ಪತ್ರೆ ವ್ಯತಿರಿಕ್ತ ಎಂಬುದರಲ್ಲಿ ಎರಡು ಮಾತಿಲ್ಲ.
ಜಿಲ್ಲೆಯ ಈ ಭಾಗದ ಬಾಗೇಪಲ್ಲಿ ಗುಡಿಬಂಡೆ, ಗೌರಿಬಿದನೂರು, ಶಿಡ್ಲಘಟ್ಟ ಮತ್ತು ಚಿಂತಾಮಣಿ ಕಡೆಯವರು ತಮ್ಮ ಆರೋಗ್ಯವನ್ನು ಇನ್ನಷ್ಟು ಮತತಷ್ಟು ಉತ್ತಮ ಪಡಿಸಿಕೊಳ್ಳಲು ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರವನ್ನು ಹರಿಸಿ ಬರುತ್ತಾರೆ ಈ ಆಸ್ಪತ್ರೆಯ ವ್ಯವಸ್ಥೆ ನೋಡಿದರೆ ಹೆಸರಿಗೆ ಮಾತ್ರ ಜಿಲ್ಲಾ ಕೇಂದ್ರ, ಹೆಸರಿಗೆ ಮಾತ್ರ ಜಿಲ್ಲಾಸ್ಪತ್ರೆ ಎಂಬಂತಾಗಿದೆ. ಸರ್ಕಾರದಿಂದ ಕೋಟ್ಯಂತರ ರೂ ಗಳನ್ನು ವಿನಿಯೋಗಿಸಿ ಆಸ್ಪತ್ರೆಗೆ ಎಲ್ಲಾ ರೀತಿಯ ಸೌಲತ್ತುಗಳನ್ನು ನೀಡಿದ್ದರೂ ಇಲ್ಲಿ ರೋಗಿಗಳಿಗೆ ಉಪಯುಕ್ತಕರವಾಗಿ ನಡೆಯೋ ರೀತಿಯಲ್ಲಿ ಸ್ಥಳೀಯ ವೈದ್ಯರು ಏನೂ ಮಾಡಿಲ್ಲ, ಜಿಲ್ಲಾ ಕೇಂದ್ರದ ಜಿಲ್ಲಾಸ್ಪತ್ರೆಗಿಂತ ಹೋಬಳಿ ಹಾಗೂ ಗ್ರಾಮ ಪಂಚಾಯ್ತಿಗಳಲ್ಲಿರುವ ಪ್ರಾಥಮಿಕ ಆರೋಗ್ಯ ಕೆಂದ್ರಗಳೇ ಮೇಲು ಎನ್ನುವ ಮಟ್ಟಕ್ಕೆ ಈ ಆಸ್ಪತ್ರೆ ಹೆಸರು ಬದಲಿಸಿಕೊಂಡಿದೆ.
ವೈದ್ಯರ ಕೊರತೆ, ಇರುವ ಒಂದು ಡಯಾಲಿಸಸ್ ಯಾವಾಗಲೂ ಕೆಟ್ಟಿರುತ್ತದೆ, ಸ್ವಚ್ಚತೆ ಬಗ್ಗೆ ಕೇಳುವಂತೆಯೇ ಇಲ್ಲ ಒಳರೋಗಿಗಳ ದಾಖಲಿಕರಣ ಆಸ್ಪತ್ರೆಯದ್ದೊಂದ್ದಾಗಿದ್ದರೆ ಇಲ್ಲಿ ಊಟ ಕೊಡುವವರ ಬಳಿ ಹಾಜರಾತಿಯೇ ಒಂದಿರುತ್ತದೆ ಇನ್ನು ಇಲ್ಲಿ ನಡೆದಿರುವ ಗುತ್ತಿಗೆಗಳೂ ಬಹುತೇಕ ಗೋಲ್ಮಾಲ್ ಎಂದು ಇಲ್ಲಿ ಹಾದಿಬೀದಿಯಲ್ಲಿ ಜನ ಮಾತಾಡಿಕೊಳ್ಳುತ್ತಿದ್ದಾರೆ ಹಾಗಾಗಿಯೇ ಇಲ್ಲಿ ಸ್ವಚ್ಚತೆ ಅಷ್ಟಕ್ಕಷ್ಟೆ. ಇರುವ ಒಬ್ಬಿಬ್ಬ ವೈದ್ಯರ ಬಳಿ ನೋಡಿಸಿಕೊಳ್ಳಬೇಕೆಂದರೆ ಈ ಶಿವ ಕಾಣಿಸ್ತಾನೆ ಅಷ್ಟೊಂದು ಕ್ಯೂನಲ್ಲಿ ಸಾಗಿ ಬರಬೇಕು ಎನ್ನುತ್ತಾರೆ ಇಲ್ಲಿ ದಾಖಲಾಗಿರುವ ಒಳರೋಗಿಯೊಬ್ಬರು.
ಇನ್ನು ಒಳರೋಗಿಯಾಗಿ ದಾಖಲಾದ ಸಂದರ್ಭಧಲ್ಲಿ ರೋಗಿಯನ್ನು ನೋಡುವುದು ಬಿಟ್ಟರೆ ಮತ್ತೆ ಆ ವಾರ್ಡುಗಳತ್ತ ತಲೆ ಕೂಡ ಹಾಕುವುದಿಲ್ಲ ರೋಗಿ ಹತ್ತಾರು ಬಾರಿ ವೈದ್ಯರ ಬಳಿ ತಿರುಗಾಡಬೇಕು ಇಲ್ಲವೇ ದಾದಿಯರ ಬಳಿ ತನ್ನ ದುಮ್ಮಾನವನ್ನು ಅಂಗಲಾಚಿ ಹೇಳಿರಬೇಕು ತನ್ನ ಖಾಯಿಲೆ ಬಗ್ಗೆ ನೋಡಿಸಿಕೊಳ್ಳಬೇಕೆಂದರೆ ಇಂಥಹ ಸನ್ನಿವೇಶ ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿದೆ. ಹೊರರೋಗಿಯಾಗಿ ಬಂದವರು ಸಹಾ ಇನ್ನಿಲ್ಲದ ಪಡಿಪಾಟಲು ಬೀಳಬೇಕು ಚೀಟಿ ಬರೆಯಿಸಿಕೊಂಡು ಬಂದರೆ ಯಾವ ವೈಧ್ಯರು ಯಾವ ಕೊಠಡಿಯಲ್ಲಿದ್ದಾರೆ ಎಂಬುದನ್ನು ಹುಡುಕಾಡುವುದರಲ್ಲಿಯೇ ಮದ್ಯಾಹ್ನ ಕಳೆದೋಗಿರುತ್ತದೆ. ಸರಿಯಾದ ಮಾರ್ಗದರ್ಶನವಿಲ್ಲ ಎಲ್ಲಿ ರಕ್ತಪರೀಕ್ಷೆ, ಎಲ್ಲಿ ಮೂತ್ರ ಪರಿಕ್ಷೆ ಮಾಡಿಸಬೇಕು ಎಂಬುದು ಹೊಸ ರೋಗಿಗಳಿಗೇ ತಿಳಿಯುವುದೇ ಇಲ್ಲ.
ತಮ್ಮ ಖಾಯಿಲೆ ನೋಡುವ ವೈಧ್ಯರು ಯಾವ ಕೊಠಡಿಯಲ್ಲಿರುತ್ತಾರೆ ಎಂದು ಎಲ್ಲೆಡೆ ಹುಡುಕಾಡಿ ಇನ್ನೇನು ವೈದ್ಯರು ಸಿಕ್ಕರು ಅನ್ನುವಷ್ಟರಲ್ಲಿ ವೈದ್ಯರಿಗೆ ಊಟದ ಸಮಯ, ಮದ್ಯಾಹ್ನ ಬನ್ನಿ ಎಂಬ ಸಿದ್ದ ಉತ್ತರ ಲಭಿಸಿರುತ್ತದೆ. ಇಂಥಹ ಸನ್ನಿವೇಶದಲ್ಲಿ ಇಲ್ಲಿನ ಜಿಲ್ಲಾಸ್ಪತ್ರೆಗಿದ್ದರೆ ಇನ್ನು ಈ ಜಿಲ್ಲೆಯ ಇನ್ನಿತರ ತಾಲ್ಲೂಕು ಹಾಗೂ ಹೋಬಳಿಗಳಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹೇಗಿರಬೇಡ ಎಂಬುದನ್ನು ನೀವೇ ಒಮ್ಮೆ ಊಹಿಸಿ.
ಸರ್ಕಾರಿ ಆಸ್ಪತ್ರೆಗೆ ಬರುವವರು ಬಹುತೇಕರು ಕಡು ಬಡವರು. ಕೂಲಿ-ನಾಲಿ ಮಾಡಿ ಒಂದಷ್ಟು ಕಾಸು ಕೂಡಿಟ್ಟುಕೊಂಡು ಬರುವವರು ಅದೂ ಮಾತ್ರೆಗಳಿಗಿರಲಿ ಎಂದು ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಸಾವಿರಾರುಗಳು ಕಟ್ಟಲಾಗದ ನಿರ್ಗತಿಕರು ಇಲ್ಲಿಗೆ ಬಂದರೆ ಇವರೂ ವೈದ್ಯರಿಗೆ 2೦-3೦ ರೂಗಳನ್ನು ಕೊಟ್ಟರೆ ಮಾತ್ರ ರೋಗಿಯ ನಾಡಿ ಹಿಡಿದು ನೋಡುವುದು ಎಲ್ಲವಾದಲ್ಲಿ ಏನ್ ಕಾಯಿಲೆ ಎಂದು ಕೇಳ್ತಾರೆ ಇಂಥ ಖಾಯಿಲೆ ಎಂದಾಕ್ಷಣ ತಗೋ ಈ ಮಾತ್ರ ಇಲ್ಲಿ ಸಿಗೊಲ್ಲ ಹೊರಗೆ ತಗೋ ಎಂದು ಚೀಟಿ ಬರೆದು ಕೊಡ್ತಾರೆ ಏನ್ ಮಾಡೋದು ಸ್ವಾಮಿ ನಾವು ಬಡವರು ಯಾರ್ನ ಕೇಳೋದು ಯಾರ್ನ ಬಿಡೋದು ನಮ್ಮಗೊಂದೂ ಅರ್ಥವಾಗೊಲ್ಲ ಎಂದು ಆಸ್ಪತ್ರೆಗೆ ಬಂದಿದ್ದ ನಂದಿಯ ಮುನಿತಾಯಮ್ಮ ಅಳಲನ್ನು ಹೇಳಿಕೊಳ್ಳುತ್ತಾಳೆ.
ಇಂಥಹ ಸನ್ನಿವೇಶದಲ್ಲಿ ಈ ಆಸ್ಪತ್ರೆಗೆ ಹೊಸದಾಗಿ ಕಾಯಕಲ್ಪ ಮಾಡಿಲ್ಲ ಎಂದಾದರೆ ಇಲ್ಲಿ ಉಳಿಗಾಲವಿಲ್ಲ ಬದಲಿಗೆ ಬಡರೋಗಿಗಳೂ ಸಹಾ ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗಳ ಮೊರೆ ಹೋಗಬೇಕಾಗುತ್ತದೆ ಇಲ್ಲಿನ ಆಡಳಿತಾಧಿಕಾರಿ ಹಾಗೂ ಜಿಲ್ಲಾಶ್ಪತ್ರೆಯ ವೈಧ್ಯಾಧಿಕಾರಿಯ ಸರ್ವಾಧಿಕಾರಿ ಧೋರಣೆಯಿಂದ ರೋಗಿಗಳು ಬೇಸತ್ತು ಹೋಗಿದ್ದಾರೆ. ವೈಧ್ಯರು ಹೇಳಿದ್ದೇ ಇಲ್ಲಿ ವೇದ ಎನ್ನುವಂತಹ ವಾತಾವರ್ಣ ಉಂಟಾಗಿದೆ ಈ ಬಾಗದ ಬಹುತೇಕರು ಈ ಹಿಂದಿನ ಶಾಸಕರುಗಳಿಗೆ ಹೇಳಿದ ದೂರು-ದುಮ್ಮಾನಗಳಿಗೇನೂ ಪ್ರಯೋಜನವಿಲ್ಲ ಎಂಬಂತಾಗಿದೆ. ಶಾಸಕರು ಈ ಕಿವೀಲಿ ಕೇಳ್ತಿದ್ರು ಆ ಕಿವಿಲೀ ಬಿಡ್ತಿದ್ರು ಎನ್ನುತ್ತಾರೆ ಇಲ್ಲಿಯ ರೋಗಿಗಳು.
ಇದೀಗ ತಾನೇ ನೂತನವಾಗಿ ಆಯ್ಕೆಯಾಗಿರುವ ಶಾಸಕರು ಈಗಾಗಲೇ ಎರಡು-ಮೂರು ಬಾರಿ ಆಸ್ಪತ್ರೆಗೆ ಭೇಟಿ ಕೊಟ್ಟಿದ್ದಾರೆ ಇಲ್ಲಿನ ಸಾಧಕ-ಬಾದಕಗಳನ್ನು ಅರಿತಿದ್ದಾರೆ. ಇಲ್ಲಿನ ವಾಸ್ತವತೆಯನ್ನು ತಿಳಿದು ಜನಪರವಾದ ಕಾಳಜಿವಹಿಸಿ ಇಲ್ಲಿ ಎಕ್ಕುಟ್ಟೋಗಿರುವ ವ್ಯವಸ್ಥೆಯನ್ನು ತಹಬದಿಗೆ ತರುವ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ. ಇಲ್ಲವಾದಲ್ಲಿ ಈ ಮೊದಲಿನಂತೆಯೇ ಆಸ್ಪತ್ರೆ ಆಟಕ್ಕೆ ಉಂಟು ಲೆಕ್ಕಕ್ಕಿಲ್ಲ ಎನ್ನುವಂತಾಗುವುದರಲ್ಲಿ ಎರಡು ಮಾತಿಲ್ಲ.