ಮಧುಮೇಹದಿಂದ ಮುಕ್ತಿ ಹೊಂದಿ, ಆರೋಗ್ಯವಾಗಿರಿ...
ಡಯಾಬಿಟೀಸ್ ನಿಯಂತ್ರಣದ ಕುರಿತು ಮೂಡಬೇಕಿದೆ ಜಾಗೃತೆ..
ಇಂದಿನ ದಿನಗಳಲ್ಲಿ ಡಯಾಬಿಟೀಸ್ ಅಥವಾ ಮಧುಮೇಹ ತೊಂದರೆಯಿಂದ ಬಳಲುತ್ತಿರುವವರ ಸಂಖ್ಯೆ ಬೆಳೆಯುತ್ತಿದೆ. ಇದಕ್ಕೆ ವಯಸ್ಸಿನ ಮಿತಿಯೂ ಇಲ್ಲ. ಚಿಕ್ಕಮಕ್ಕಳಿಂದ ಹಿಡಿದು ವೃದ್ಧರವರೆಗೆ ಯಾರಿಗೆ ಬೇಕಾದರೂ ಈ ತೊಂದರೆ ಕಾಣಿಸಿಕೊಳ್ಳಬಹುದು.
ದೇಹದಲ್ಲಿ ಗ್ಲೂಕೋಸ್ ಪದಾರ್ಥದ ನಿಯಂತ್ರಣ ವ್ಯವಸ್ಥೆಯ ದೋಶಗಳಿಂದ ಉಂಟಾಗುವ ಈ ಕಾಯಿಲೆಯು ವಂಶಪಾರಂಪರ್ಯವಾಗಿಯೂ ಬರಬಹುದು.
ಪ್ರತಿ ವರ್ಷ ನಮ್ಮ ದೇಶದಲ್ಲಿ ಸುಮಾರು 10 ಲಕ್ಷ ಮಂದಿ ಮಧುಮೇಹ ತೊಂದರೆಯಿಂದಲೇ ಮೃತಪಡುತ್ತಿದ್ದು, ವರ್ಷದಿಂದ ವರ್ಷಕ್ಕೆ ಮಧುಮೇಹ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ ಎಂದು ಇಂಟರ್ನ್ಯಾಷನಲ್ ಡಯಾಬಿಟೀಸ್ ಫೆಡರೇಶನ್ ಹೇಳಿದೆ.
ಡಯಾಬಿಟೀಸ್ ಫೆಡರೇಶನ್ನ ಸಮೀಕ್ಷೆಯ ಪ್ರಕಾರ ಭಾರತದಲ್ಲಿ ಸುಮಾರು 6.13 ಕೋಟಿ ಜನ ಸಕ್ಕರೆ ಕಾಯಿಲೆಗೆ ಒಳಗಾಗಿದ್ದಾರೆ. ಇಡೀ ಜಗತ್ತಿನ ಮಧುಮೇಹ ರೋಗಿಗಳಲ್ಲಿ ಶೇಕಡಾ 60 ರಷ್ಟು ರೋಗಿಗಳು ಭಾರತದಲ್ಲಿಯೇ ಇದ್ದಾರೆ ಎಂಬ ಆತಂಕಕಾರಿ ಮಾಹಿತಿ ನೀಡಿದೆ.
ಭಾರತದಲ್ಲಿ ಮಧುಮೇಹವನ್ನು ಗಂಭೀರವಾಗಿ ಪರಿಗಣಿಸದಿರುವುದು ಮತ್ತು ನಿಯಂತ್ರಣದ ಕುರಿತು ಹೆಚ್ಚಿನ ಅರಿವಿಲ್ಲದಿರುವುದೇ ಈ ರೋಗ ಹೆಚ್ಚುತ್ತಿರುವುದಕ್ಕೆ ಕಾರಣ ಎನ್ನಲಾಗಿದೆ.
ಡಯಾಬಿಟಿಸ್ ಖಾಯಿಲೆಯ ಕುರಿತ ಜಾಗೃತೆಯ ಕೊರತೆಯಿಂದ ಭಾರತದಲ್ಲಿ ಮಧುಮೇಯ ತೊಂದರೆ ಉಲ್ಬಣವಾಗುತ್ತಿದೆಯೇ ಹೊರತು, ಇದು ನಿಯಂತ್ರಿಸಲಾಗದ ಖಾಯಿಲೆಯಲ್ಲ. ಸರಿಯಾದ ಪಥ್ಯ, ಸಮಯಕ್ಕೆ ಸರಿಯಾಗಿ ನಿಯಮಿತ ಆಹಾರ ಸೇವನೆ ಮತ್ತು ವ್ಯಾಯಾಮಗಳಿಂದ ಈ ರೋಗವನ್ನು ನಿಯಂತ್ರಣದಲ್ಲಿಡಬಹುದು. ದಿನವೂ ಸೇವಿಸುವ ಆಹಾರದಲ್ಲಿಯೇ ಸ್ವಲ್ಪ ಬದಲಾವಣೆ ಮಾಡಿಕೊಂಡು, ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಭಾರತದಲ್ಲಿ ಹೆಚ್ಚುತ್ತಿರುವ ಮಧುಮೇಹ ತೊಂದರೆ..
ಸಾಮಾನ್ಯವಾಗಿ ಕಹಿಯನ್ನು ಯಾರೂ ಇಷ್ಟಪಡುವುದಿಲ್ಲ. ಆದರೂ ಕಹಿರುಚಿಗೆ ಪ್ರಸಿದ್ಧಿಯಾಗಿರುವ ಹಾಗಲಕಾಯಿಯ ಜ್ಯೂಸ್ನ್ನು ದಿನವು ಬೆಳಿಗ್ಗೆ ಹಸಿದ ಹೊಟ್ಟೆಯಲ್ಲಿ ಕುಡಿಯುವುದು ಮಧುಮೇಹ ನಿಯಂತ್ರಣಕ್ಕೆ ಬಹಳ ಒಳ್ಳೆಯದು.
ಎರಡು ಚಮಚ ಮಂಥೆ ಕಾಳನ್ನು ದಿನವೂ ರಾತ್ರಿ ನೆನೆಸಿಟ್ಟು, ಬೆಳಿಗ್ಗೆ ಎದ್ದಾಗ ನೀರಿನೊಂದಿಗೆ ಸೇವಿಸುವುದೂ ಅತ್ಯಂತ ಉತ್ತಮ.
ನೇರಳೆ ಹಣ್ಣು ಮಧುಮೇಹವನ್ನು ನಿಯಂತ್ರಣದಲ್ಲಿಡಲು ಸಹಕರಿಸುತ್ತದೆ. ಮೇದೋಜೀರಕ ಗ್ರಂಥಿಯ ಆರೋಗ್ಯವನ್ನು ಹೆಚ್ಚಿಸುವ ನೇರಳೆ ಹಣ್ಣಿನ ಬೀಜಗಳೂ ಕೂಡ ಅಷ್ಟೇ ಆರೋಗ್ಯ ಕಾರಿ. ಬೀಜಗಳನ್ನು ಒಣಗಿಸಿ ಪುಡಿಮಾಡಿ ಇಟ್ಟುಕೊಂಡು ದಿನಕ್ಕೆ ಎರಡು ಬಾರಿ ಜೇನುತುಪ್ಪದೊಂದಿಗೆ ಸೇವಿಸುವುದರಿಂದಲೂ ಡಯಾಬಿಟೀಸ್ ಕಾಯಿಲೆಯನ್ನು ನಿಯಂತ್ರಣದಲ್ಲಿಡಬಹುದು.
ದ್ವಿದಳ ಧಾನ್ಯಗಳು, ಕಾಳುಗಳು, ತುಪ್ಪ ಅಥವಾ ಎಣ್ಣೆಯನ್ನು ಅಳತೆ ಪ್ರಮಾಣದಲ್ಲಿ ಸೇವಿಸಿರಿ. ಬೇಯಿಸಿದ ನಂತರ ಅಳತೆ ಪ್ರಮಾಣದಲ್ಲಿ ಸೇವಿಸಿರಿ. ಅನ್ನ, ಆಲೂಗಡ್ಡೆ, ಹಣ್ಣುಗಳನ್ನು ತಿನ್ನಬಾರದೆಂದು ನಿಷೇಧವೇನಿಲ್ಲ. ಆದರೆ ಅವುಗಳನ್ನು ಸೇವಿಸುವ ಮೊದಲು ಅವುಗಳಲ್ಲಿರುವ ಕಾರ್ಬೋಹೈಡ್ರೇಟ್ಸ್ ಮತ್ತು ಕ್ಯಾಲೊರಿ ಮೌಲ್ಯವನ್ನು ಅರಿತಿರಬೇಕು.
ನೆಲ್ಲಿಕಾಯಿ ರಸವನ್ನು ದಿನವೂ ಕುಡಿಯುವುದೂ ಕೂಡ ಮಧುಮೇಹಿಗಳಿಗೆ ಒಳ್ಳೆಯದು.
ಶುಂಠಿ ಮತ್ತು ಬೆಂಡೆಕಾಯಿಯ ಬಳಕೆಯಿಂದಲೂ ಮಧುಮೇಹದ ನಿಯಂತ್ರಣ ಸಾಧ್ಯ.
ಸಕ್ಕರೆ ಮತ್ತು ಬೆಲ್ಲದ ಬದಲಾಗಿ ಸ್ಪಲ್ಪ ಪ್ರಮಾಣದಲ್ಲಿ ಜೇನುತುಪ್ಪವನ್ನು ಬಳಸಬಹುದು.
ಮಾಮೂಲಿ ಟೀ, ಕಾಫಿ ಕುಡಿಯುವುದಕ್ಕಿಂತ ಗ್ರೀನ್ ಟೀ ಕುಡಿದರೆ, ಡಯಾಬಿಟೀಸ್ ರೋಗಿಗಳ ಆರೋಗ್ಯಕ್ಕೂ ಬಹಳ ಒಳ್ಳೆಯದು.
ದಿನನಿತ್ಯದ ವೇಳಾಪಟ್ಟಿಯಲ್ಲಿ ವ್ಯಾಯಾಮಕ್ಕೆ ಒಂದಿಷ್ಟು ಸಮಯವನ್ನು ಮೀಸಲಿಡಲೇಬೇಕು. ನಿಯಮಿತ ವ್ಯಾಯಾಮದಿಂದ ಮಧುಮೇಹವನ್ನು ಗಣನೀಯ ಪ್ರಮಾಣದಲ್ಲಿ ನಿಯಂತ್ರಿಸಬಹುದು.
ಪ್ರತಿ ತಿಂಗಳೂ ತಪ್ಪದೇ ರಕ್ತ ಪರೀಕ್ಷೆ ಮಾಡಿಸಿ, ರಕ್ತದಲ್ಲಿ ಸಕ್ಕರೆಯ ಪ್ರಮಾಣವೆಷ್ಟಿದೆ ಎಂಬುದನ್ನು ತಿಳಿದುಕೊಳ್ಳಿ
ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಿ. ಸಕ್ಕರೆಯ ಪ್ರಮಾಣ ಅತ್ಯಂತ ಕಡಿಮೆ ಇರುವ ತರಕಾರಿ ಮತ್ತು ಆಹಾರಗಳನ್ನು ಸೇವಿಸಬೇಕು. ಇನ್ಸುಲಿನ್ ತೆಗೆದುಕೊಳ್ಳುವವರು ಆಹಾರವನ್ನು ನಿಗದಿಪಡಿಸಿದ ಸಮಯದಲ್ಲೇ ಸೇವಿಸಬೇಕು. ನಿಗದಿಪಡಿಸಿದ ವೇಳೆಯಲ್ಲಿ ಆಹಾರ ಸೇವನೆಯಿಂದ ರಕ್ತದಲ್ಲಿ ಸಕ್ಕರೆಯ ಅಂಶದ ಕೊರತೆಯನ್ನು ತಡೆಗಟ್ಟಬಹುದು. ಅತಿಯಾಗಿ ಒಂದೇ ಸಾರಿ ಊಟ ಮಾಡುವ ಬದಲು, ಆಗಿಂದಾಗ್ಗೆ, ನಿಗದಿತ ವೇಳೆಯಲ್ಲಿ ಪ್ರಮಾಣ ಬದ್ಧ ಆಹಾರವನ್ನು ಸೇವಿಸಬೇಕು.
ಪಾರ್ಶ್ವವಾಯು, ಕುರುಡುತನ, ಹೃದಯಾಘಾತದಂತಹ ಗಂಭೀರ ಸಮಸ್ಯೆಗಳನ್ನು ತಂದೊಡ್ಡುವ ಮಧುಮೇಹ ತೊಂದರೆಯ ಬಗ್ಗೆ ಜಾಗೃತೆ ವಹಿಸಿ, ನಿಯಂತ್ರಣದಲ್ಲಿಟ್ಟುಕೊಳ್ಳಿ, ದೀರ್ಘಕಾಲ ಆರೋಗ್ಯವಾಗಿರಿ..
Author : ಅಮೃತಾ ಹೆಗಡೆ