ನವದೆಹಲಿ : ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಗೆ ಇನ್ನೆರಡು ದಿನಗಳು ಮಾತ್ರ ಬಾಕಿ ಉಳಿದಿದ್ದು, ದೇಶಾದ್ಯಂತ ಸಡಗರದ ಸಿದ್ಧತೆ ನಡೆಯುತ್ತಿದೆ. ಸ್ವಾತಂತ್ರ್ಯ ದಿನದಂದು ಕೆಂಪುಕೋಟೆ ಮೇಲೆ ಮಾಡುವ ಭಾಷಣದಲ್ಲಿ ಪ್ರಸ್ತಾಪಿಸುವ ವಿಷಯಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಸಾರ್ವಜನಿಕರಿಂದ ಸಲಹೆಗಳನ್ನು ಆಹ್ವಾನಿಸಿದ್ದಾರೆ.
ಕೆಂಪುಕೋಟೆ ಮೇಲೆ ನಿಂತು ಪ್ರಧಾನಿ ಮಾಡುವ ಭಾಷಣವು ವರ್ಷದ ಪ್ರಮುಖ ಭಾಷಣಗಳಲ್ಲಿ ಒಂದು. ತಮ್ಮ ಭಾಷಣಕ್ಕೆ ನಾಗರಿಕರಿಂದ ನೇರವಾಗಿ ಸಲಹೆ ಸೂಚನೆಯನ್ನು ಕೇಳುವ ಮೂಲಕ ಹೊಸ ಪ್ರಯತ್ನಕ್ಕೆ ನಾಂದಿ ಹಾಡಿದ್ದಾರೆ.
ಕಳೆದ ವರ್ಷ ಕೂಡ ಮೋದಿ ಅವರು ನಾಗರಿಕರಿಂದ ಸಲಹೆಗಳನ್ನು ಆಹ್ವಾನಿಸಿದ್ದಾರೆ. ನಾಗರಿಕರು ತಮ್ಮ ಸಲಹೆ-ಸೂಚನೆಗಳನ್ನು, ಪರಿಕಲ್ಪನೆಗಳನ್ನು ಪ್ರಧಾನಿ ಅವರಿಗೆ ತಲುಪಿಸಬಹುದಾಗಿದೆ. ಉತ್ತಮ ಸಲಹೆಗಳನ್ನು ಪ್ರಧಾನಿ ಮೋದಿ ಅವರು ಭಾಷಣದಲ್ಲಿ ಸೇರ್ಪಡೆ ಮಾಡಿಕೊಳ್ಳಲಿದ್ದಾರೆ. ನಾಗರಿಕರು ಮೈ ಗವರ್ನಮೆಂಟ್ ನರೇಂದ್ರ ಮೋದಿ ಅವರ ವೆಬ್ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್ ಮೂಲಕ ತಮ್ಮ ಸಲಹೆಗಳನ್ನು ಪ್ರಧಾನಿಯವರಿಗೆ ತಲುಪಿಸಬಹುದು.
ಪ್ರಧಾನಿ ಕೆಂಪುಕೋಟೆ ಮೇಲೆ ಮಾಡಲಿರುವ ಭಾಷಣವನ್ನು ಆನ್ಲೈನ್ ಮೂಲಕ ಪ್ರಸಾರಕ್ಕಾಗಿ ಪ್ರೆಸ್ ಇನ್ಪಾರ್ವೆಶನ್ ಬ್ಯೂರೋ (ಪಿಐಬಿ) ವಿಶೇಷ ವೆಬ್ಪೇಜ್ ಅಭಿವೃದ್ಧಿಪಡಿಸಿದೆ. ಪ್ರಧಾನಿ ಭಾಷಣ ಸೇರಿ ಸ್ವಾತಂತ್ರ್ಯೊತ್ಸವ ಸಂಭ್ರಮದ ಇತರೆ ಕಾರ್ಯಕ್ರಮಗಳನ್ನು ಇಲ್ಲಿ ನೇರಪ್ರಸಾರದಲ್ಲಿ ವೀಕ್ಷಿಸಬಹುದಾಗಿದೆ.
ಇನ್ನು ಮಾಹಿತಿ ಹಾಗೂ ಪ್ರಸಾರ ಖಾತೆಯು ವಿಶೇಷವಾಗಿ ಆ.12ರಿಂದ 18ರ ತನಕ ನವದೆಹಲಿಯಲ್ಲಿ ದೇಶಭಕ್ತಿ ಪ್ರೇರೇಪಿಸುವ ಸಿನಿಮಾ ಪ್ರದರ್ಶನ ಏರ್ಪಡಿಸಿದ್ದು, ಮೊದಲ ದಿನ ರಿಚರ್ಡ್ ಅಟೆನ್ಬರೋ ಅವರ ಗಾಂಧಿ ಸಿನಿಮಾ ಪ್ರದರ್ಶನಗೊಳ್ಳಲಿದೆ. ಉಳಿದಂತೆ ಜಬ್ಬಾರ್ ಪಟೇಲ್ರ ಬಾಬಾ ಭೀಮರಾವ್ ಅಂಬೇಡ್ಕರ್, ವೀರ್ ಸಾವರ್ಕರ್, ಕೇತನ್ ಮೆಹ್ತಾರ ಸರ್ದಾರ್, ಎಸ್. ರಾಮ್ ಶರ್ವರ ಶಹೀದ್ ಭಗತ್, ಬಂಕಿಮಚಂದ್ರರ ಆನಂದ ಮಠ ಸಿನಿಮಾ ಪ್ರದರ್ಶನ ಕಾಣಲಿವೆ.