ಬೆಂಗಳೂರು : 70 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದರು.
ರಾಜ್ಯದ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಷಯ ಕೋರಿದ ಸಿದ್ದರಾಮಯ್ಯ, ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತ್ಯಾಗ ಬಲಿದಾನಗಳನ್ನು ಮಾಡಿದ್ದ ಹೋರಾಟಗಾರರನ್ನು ಸ್ಮರಿಸಿದರು. ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕರ್ನಾಟಕದ ಕೊಡುಗೆ ಅಪಾರ ಎಂದ ಸಿಎಂ ಸಿದ್ಧರಾಮಾಯ್ಯ, ಸಂಗೊಳ್ಳಿ ರಾಯಣ್ಣ, ಆಲೂರು ವೆಂಕಟ ರಾವ್, ಹರ್ಡಿಕರ್ ಮಂಜಪ್ಪ ಅವರಂತಹ ಹಿರಿಯರ ತ್ಯಾಗ ಬಲಿದಾನಗಳನ್ನು ನಾವೆಲ್ಲರೂ ಸ್ಮರಿಸಬೇಕು ಎಂದು ಹೇಳಿದ್ದಾರೆ.
ರಾಜ್ಯದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ, ನಮ್ಮದು ರೈತ ಪರ ಸರ್ಕಾರ ಎನ್ನುವುದು ಕೇವಲ ನಮ್ಮ ಘೋಷಣೆಯಲ್ಲ, ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ನೊಂದ ರೈತರ ಜೊತೆಗೆ ಸರ್ಕಾರ ದೃಢವಾಗಿ ನಿಂತಿದೆ ಎಂದರು. ರಾಜ್ಯದಲ್ಲಿ ಕಳೆದ 5 ವರ್ಷದಿಂದ ಕಾಣಿಸಿಕೊಂಡ ತೀವ್ರ ಬರಗಾಲದಿಂದ ರಾಜ್ಯದ ಜನತೆ ತತ್ತರಿಸಿ ಹೋಗಿದ್ದಾರೆ. ಆದ್ದರಿಂದ ರೈತರ ಮೇಲಿನ ಸಾಲದ ಬಡ್ಡಿಯನ್ನು ಸರ್ಕಾರವೇ ಭರಿಸಲಿದೆ. ರಾಜ್ಯದ 176 ತಾಲೂಕಿನಲ್ಲಿ 130 ತಾಲೂಕು ಬರಪೀಡಿತ ಎಂದು ಈಗಾಗಲೇ ಘೋಷಣೆ ಮಾಡಲಾಗಿದ್ದು, ಹಣ ಬಿಡುಗಡೆ ಮಾಡಲಾಗಿದೆ. ಸ್ವತಃ 18 ಜಿಲ್ಲೆಗಳಿಗೆ ಭೇಟಿ ನೀಡಿ, ರೈತರ ಸಂಕಷ್ಟವನ್ನು ಆಲಿಸಿರುವುದಾಗಿ ತಿಳಿಸಿದರು.
ಬರಗಾಲದಿಂದ ಅಲ್ಪಾವಧಿ, ಮಧ್ಯಮಾವಧಿ ಹಾಗೂ ಧೀರ್ಘಾವಧಿ ಸಾಲಪಾವತಿಯನ್ನು ಮುಂದೂಡಲಾಗಿದೆ. ಇನ್ನು ದಲಿತರ ಮೇಲಿನ ಹಲ್ಲೆ, ಅತ್ಯಾಚಾರ ಪ್ರಕರಣಗಳು ಅಧಿಕವಾಗುತ್ತಿವೆ. ಇದನ್ನು ಮಟ್ಟಹಾಕಲು ನಮ್ಮ ಸರ್ಕಾರ ಹರಸಾಹಸ ಪಡುತ್ತಿದೆ. ಗುಡಿಸಲು ಮುಕ್ತ ಕರ್ನಾಟಕ ನಮ್ಮ ಕನಸಾಗಿದ್ದು, ಇದನ್ನು ಸಾಕಾರಗೊಳಿಸುವ ಭರವಸೆಯಿದೆ ಎಂದು ಹೇಳಿದರು.
ಪ್ರಾರ್ಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಮೂರು ದಿನ ಕೆನೆಭರಿತ ಹಾಲು ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ವಾರದ ಐದು ದಿನ ಹಾಲು ವಿತರಿಸಲು ಚಿಂತಿಸಿದ್ದೇವೆ. ಒಂದರಿಂದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಸಮವಸ್ತ್ರದ ಜತೆಗೆ ಶೂ ಹಾಗೂ ಸಾಕ್ಸ್ಗಳನ್ನು ವಿತರಿಸಲಾಗುತ್ತದೆ. ಆರೋಗ್ಯಕ್ಕೆ ನಮ್ಮ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಾ ಬಂದಿದೆ. 65 ಸಾವರ ರೋಗಿಗಳಿಗೆ ಮುಖ್ಯಮಂತ್ರಿ ಪರಿಹಾರನಿಧಿಯಿಂದ 200 ಕೋಟಿ ರೂ. ನೆರವು ನೀಡಲಾಗಿದೆ ಎಂದರು.
ತಮ್ಮ ಸರ್ಕಾರ ಬಡವರ, ದಲಿತದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದು ಪ್ರಣಾಳಿಕೆಯಲ್ಲಿನ ಬಹುತೇಕ ಅಂಶಗಳನ್ನು ಕಳೆದ ಮೂರು ವರ್ಷಗಳಲ್ಲಿ ಈಡೇರಿಸಿದ್ದೇವೆ, 5 ವರ್ಷಗಳ ಅವಧಿಯಲ್ಲಿ 15 ಲಕ್ಷ ಮನೆಗಳನ್ನು ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯದ ಪ್ರಮುಖ ನಗರಗಳಲ್ಲಿ ಉಚಿತ ವೈ-ಫೈ ಹಾಟ್ಸ್ಪಾಟ್ಗಳನ್ನು ಹಾಗೂ ಎಲ್ಲಾ ಪಂಚಾಯತ್ಗಳಲ್ಲಿ ಉಚಿತ ವೈ-ಫೈ ಸೌಲಭ್ಯವನ್ನು ಒದಗಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಶೀಘ್ರವೇ ಜಾರಿಗೆ ತರಲಾಗುವುದು ಎಂದು ಹೇಳಿದ್ದಾರೆ.
ಆಯುಷ್ ಇಲಾಖೆಯನ್ನು ಮತ್ತಷ್ಟು ಜನ-ಸ್ನೇಹಿ ಮಾಡಲು ಯೋಜಿಸಲಾಗಿದೆ. ಮುಂದಿನ ಎರಡು ವರ್ಷಗಳಲ್ಲಿ ಮಂಗಳೂರು, ಗದಗ, ಚಿಕ್ಕಬಳ್ಳಾಪುರ ಮತ್ತು ದಾವಣಗೆರೆ ನಗರಗಳಲ್ಲಿ 50 ಹಾಸಿಗೆಗಳ ಆಯುಷ್ ಸಂಯುಕ್ತ ಆಸ್ಪತ್ರೆಗಳನ್ನು ಪ್ರಾರಂಭಿಸಲು ಯೋಜಿಸಲಾಗಿದೆ. ಅಂತೆಯೇ, ಮೈಸೂರು ನಗರದಲ್ಲಿ 100-ಹಾಸಿಗೆಗಳ ಹೈ-ಟೆಕ್ ಪಂಚಕರ್ಮ ಆಸ್ಪತ್ರೆ ಹಾಗೂ 100-ಹಾಸಿಗೆಗಳ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಆಸ್ಪತ್ರೆಯನ್ನು ಪ್ರಾರಂಭಿಸಲಾಗುವುದು ಎಂದರು.
ಮುಂದಿನ ಎರಡು ವರ್ಷಗಳಲ್ಲಿ ಆರು ಲಕ್ಷ ಮನೆಗಳ ನಿರ್ಮಾಣ ಹಾಗೂ ನಲವತ್ತು ಸಾವಿರ ನಿವೇಶನಗಳನ್ನು ಹಂಚಲು ಗುರಿ ಹೊಂದಲಾಗಿದೆ. ಇದರಲ್ಲಿ ಡಾ ಬಿ. ಆರ್. ಅಂಬೇಡ್ಕರ್ ನಿವಾಸ್ ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿ 1,60,000 ಮನೆಗಳು ಹಾಗೂ ನಗರ ಪ್ರದೇಶದಲ್ಲಿ 90,000 ಮನೆಗಳನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ವಿತರಿಸುವ ಗುರಿ ಹೊಂದಲಾಗಿದೆ. ಪೌರ ಕಾರ್ಮಿಕರ ಗೃಹ ಭಾಗ್ಯ ಯೋಜನೆಯಡಿ ಗರಿಷ್ಠ ಘಟಕ ವೆಚ್ಚ 7.5 ಲಕ್ಷ ರೂ. ಗಳಲ್ಲಿ ಫಲಾನುಭವಿಗೆ ಶೇಕಡಾ 80 ರಷ್ಟು ಅಂದರೆ 6 ಲಕ್ಷ ರೂ ಅನುದಾನ ನೀಡಲಾಗುವುದು. ವಿವಿಧ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಖಾಯಂ ಪೌರ ಕಾರ್ಮಿಕರಿಗೆ ಈ ಯೋಜನೆಯ ಅಡಿಯಲ್ಲಿ 4500 ವಸತಿ ಗೃಹಗಳನ್ನು ನಿರ್ಮಿಸಿಕೊಡಲಾಗುವುದು. ದೇವರಾಜ ಅರಸು ವಿಶೇಷ ವಸತಿ ಯೋಜನೆಯಡಿ 14 ವಿಶೇಷ ವರ್ಗದವರಿಗಾಗಿ 20,000 ಮನೆಗಳನ್ನು ನಿರ್ಮಿಸಿ ವಿತರಿಸುವ ಗುರಿ ನಿಗದಿಪಡಿಸಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.