ನವದೆಹಲಿ : ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಯದಿನದಂದು ಕೆಂಪು ಕೋಟೆಯಲ್ಲಿ ಯಾವ ವಿಷಯಗಳ ಬಗ್ಗೆ ಭಾಷಣ ಮಾಡಬೇಕು ಎಂದು ಸಾರ್ವಜನಿಕರಿಂದ ಸಲಹೆ-ಸೂಚನೆಗಳನ್ನು ಆಹ್ವಾನಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ 2500ಕ್ಕೂ ಹೆಚ್ಚು ಸಂದೇಶಗಳ ಮಹಾಪೂರವೇ ಬಂದಿವೆ.
ಆಕಾಶವಾಣಿಯಕಾರ್ಯಕ್ರಮ ಮನ್ ಕಿ ಬಾತ್ ನಲ್ಲಿ ಹಾಗೂ ಇತ್ತೀಚೆಗೆ ಮಧ್ಯಪ್ರದೇಶದಲ್ಲಿ ನಡೆದ ಸಭೆಯಲ್ಲಿ ಕೂಡ ಸ್ವಾತಂತ್ರ್ಯೊತ್ಸವದಂದು ಮಾತನಾಡಲು ವಿಷಯಗಳನ್ನು ಜನರಿಂದ ಆಹ್ವಾನಿಸಿದ್ದರು. ಇದಕ್ಕೆ ಮೈ ಗವರ್ನಮೆಂಟ್ ವೆಬ್ಸೈಟ್ ಮೂಲಕ ಅಥವಾ ನರೇಂದ್ರ ಮೋದಿ ಅಪ್ಲಿಕೇಶನ್ ಮೂಲಕ ಸಲಹೆಗಳನ್ನು ಕಳುಹಿಸುವಂತೆ ಮನವಿ ಮಾಡಿದ್ದರು. ಈಗ ಪ್ರಧಾನಿ ಮೋದಿಯವರಿಗೆ ಸಲಹೆಗಳ ಮಹಾಪೂರವೇ ಹರಿದು ಬಂದಿದೆ.
ದೇಶದ ವಿವಿಧ ಕ್ಷೇತ್ರಗಳ ನಾಗರಿಕರು ಸರ್ಕಾರದ ಆಡಳಿತ, ಅಭಿವೃದ್ಧಿ ಯೋಜನೆಗಳು, ಆರೋಗ್ಯ, ಆರ್ಥಿಕತೆ, ಆಂತರಿಕ ಭದ್ರತೆ, ಅಸಹಿಷ್ಣುತೆ ವಿಚಾರಗಳು, ಡಿಜಿಟಲ್ ಇಂಡಿಯಾ, ಶಿಕ್ಷಣ ಮೊದಲಾದ ವಿಷಯಗಳನ್ನು ಪ್ರಸ್ತಾಪಿಸಬೇಕೆಂದು ಸೂಚಿಸಿದ್ದಾರೆ. ಗೋವು, ಸ್ವಚ್ಛ ಭಾರತ, ಮುಸ್ಲಿಂ, ತೆರಿಗೆ, ಕಾಶ್ಮೀರಧ್ವಜಾರೋಹಣ ಸೇರಿದಂತೆ ಇನ್ನಿತರ ವಿಚಾರಗಳನ್ನು ಭಾಷಣದಲ್ಲಿ ಸೇರಿಸಿ ಎಂದು ದೇಶದ ಜನತೆ ಸಲಹೆ ನೀಡಿದ್ದಾರೆ.
* 2017 ವರ್ಷವನ್ನು ಗೋರಕ್ಷಾ ವರ್ಷ ಎಂದು ಘೊಷಿಸಬೇಕು. ಗೋವು ಸೇರಿ ಇತರ ಜಾನುವಾರುಗಳಿಗೂ ಆಂಬುಲೆನ್ಸ್ ಸೇವೆ ಒದಗಿಸಿ.
* ಜಮ್ಮು-ಕಾಶ್ಮೀರಕ್ಕೆ ನೀಡಿರುವ 80 ಸಾವಿರ ಕೋಟಿ ರೂ. ಪ್ಯಾಕೇಜ್ನ ವಿವರಗಳ ಬಗ್ಗೆ ಮಾತನಾಡಿ.
* ರಕ್ಷಾಬಂಧನದ ವೇಳೆ ಮಾತೆಯರು ಹಾಗೂ ಸೋದರಿಯರನ್ನು ಕಾಶ್ಮೀರ ಹಾಗೂ ನಕ್ಸಲ್ ಪೀಡಿತ ಪ್ರದೇಶಗಳಿಗೆ ಕಳುಹಿಸಬೇಕು. ಉಗ್ರರು ಹಾಗೂ ನಕ್ಸಲರಿಗೆ ರಾಖಿ ಕಟ್ಟುವ ಮೂಲಕ ಅವರನ್ನು ಸರಿದಾರಿಗೆ ತರಬಹುದು.
* ಕೋಟ್ಯಧಿಪತಿ ಸಂಸದರು ಸಂಬಳ ತ್ಯಜಿಸಬೇಕು.
* ಪ್ರಧಾನಿ ಮೋದಿ ಕಾಶ್ಮೀರಕ್ಕೆ ತೆರಳಿ ರಾಷ್ಟ್ರಧ್ವಜಾರೋಹಣ ಮಾಡಬೇಕು.
* ಉತ್ತರಪ್ರದೇಶದಲ್ಲಿ ವಾಹನ ಚಾಲನೆಗೆ ಪರೀಕ್ಷೆ ಮಾಡದೆಯೇ ಲೈಸೆನ್ಸ್ ನೀಡಲಾಗುತ್ತಿದೆ. ಇದು ಅತ್ಯಂತ ಗಂಭೀರ ವಿಷಯ. ಹೀಗೆ ಹಲವು ವಿಷಯಗಳನ್ನು ತಮ್ಮ ಭಾಷನದಲ್ಲಿ ಪ್ರಸ್ತಾಪಿಸುವಂತೆ ದೇಶದ ಜನತೆ ತಿಳಿಸಿದ್ದಾರೆ.