ಬೆಂಗಳೂರು : ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ)ದ ಅಧ್ಯಕ್ಷ ಸ್ಥಾನದ ಆಯ್ಕೆ ಗೊಂದಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಬಿಡಿಎ ಅಧ್ಯಕ್ಷ ಟಿ.ಶ್ಯಾಂ ಭಟ್ ಅವರನ್ನು ಕೆಪಿಎಸ್ಸಿ ಅಧ್ಯಕ್ಷರನ್ನಾಗಿ ನೇಮಕ ಮಾಡಿ ರಾಜ್ಯಪಾಲ ವಜುಭಾಯ್ ವಾಲಾ ಆದೇಶ ಹೊರಡಿಸಿದ್ದಾರೆ.
ಸರ್ಕಾರ ಶ್ಯಾಂ ಭಟ್ ಅವರನ್ನು ನೇಮಕ ಮಾಡುವ ಸಂಬಂಧ ರಾಜ್ಯಪಾಲರ ಅಂಕಿತಕ್ಕಾಗಿ ಶಿಫಾರಸು ಮಾಡಿತ್ತು. ಪರಿಶೀಲನೆ ನಡೆಸಿದ ರಾಜ್ಯಪಾಲರು ನೇಮಕಕ್ಕೆ ಆದೇಶಿಸಿದ್ದಾರೆ. ಲೋಕಾಯುಕ್ತದಲ್ಲಿರುವ ಪ್ರಕರಣಕ್ಕೆ ಕ್ಲೀನ್ ಚಿಟ್ ಸಿಕ್ಕಿರುವ ಹಿನ್ನೆಲೆಯಲ್ಲಿ ರಾಜ್ಯಪಾಲರು ನೇಮಕ ಆದೇಶ ಮಾಡಿದ್ದಾಗಿ ತಿಳಿದುಬಂದಿದೆ.
ಸರ್ಕಾರ ಈ ಮೊದಲು ಶಾಮ್ಭಟ್ ಅವರ ಹೆಸರನ್ನು ಶಿಫಾರಸು ಮಾಡಿದಾಗ ಅವರ ವಿರುದ್ಧ ಅರ್ಕಾವತಿ ಬಡಾವಣೆ ಮತ್ತು ಕೆಪಿಎಸ್ಸಿಗೆ ಸಂಬಂಧಿಸಿದಂತೆ ಕೆಲವು ಭ್ರಷ್ಟಾಚಾರ ಆರೋಪಗಳಿವೆ ಎಂದು ರಾಜ್ಯಪಾಲರು ಇವರ ಹೆಸರನ್ನು ತಿರಸ್ಕರಿಸಿದ್ದರು.
ಶಾಂ ಭಟ್ ಅವರ ವಿರುದ್ಧ ಗಂಭೀರ ಆರೋಪಗಳು ಇದ್ದರೂ ಕೂಡ ಈಗ ಅವುಗಳೆಲ್ಲ ಬಗೆಹರಿದಿವೆ ಎಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಹಠಕ್ಕೆ ಬಿದ್ದಂತೆ ಶಾಮ್ಭಟ್ ಅವರನ್ನು ನೇಮಿಸಿರುವುದು ಹಲವು ಚರ್ಚೆಗೆ ಗ್ರಾಸವಾಗಿದೆ.